ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕಾನ್ ಪಕ್ಷಿ ಸಾವು: ಮತ್ತೆ ಆತಂಕ
ಮಂಡ್ಯ, ಡಿಸೆಂಬರ್ 24: ಪೆಲಿಕಾನ್ ಪಕ್ಷಿ ಸಾವನ್ನಪ್ಪಿರುವುದು ಕೊಕ್ಕರೆ ಬೆಳ್ಳೂರಿನಲ್ಲಿ ಬೆಳಕಿಗೆ ಬಂದಿದ್ದು ಮತ್ತೆ ಆತಂಕ ಆರಂಭವಾಗಿದೆ.
ಕಳೆದ ಕೆಲವು ಸಮಯಗಳ ಹಿಂದೆ ಹಲವು ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ್ದವು. ಈ ವೇಳೆ ಹಕ್ಕಿಜ್ವರದ ಭಯವೂ ಆರಂಭವಾಗಿತ್ತು. ಆದರೆ ಇವುಗಳ ಸಾವಿಗೆ ಜಂತು ಹುಳಗಳು ಕಾರಣ ಎನ್ನಲಾಗಿತ್ತು. ಅಲ್ಲದೆ ಸುರಕ್ಷತೆಯ ದೃಷ್ಠಿಯಿಂದ ಕ್ರಮಗಳನ್ನು ಅನುಸರಿಸಲಾಗಿತ್ತು. ಕೆಲವು ಸಮಯಗಳ ಕಾಲ ಪಕ್ಷಿಗಳ ಸಾವು ನಿಂತಿತ್ತಾದರೂ ಇದೀಗ ಮತ್ತೆ ಪಕ್ಷಿ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.
ಪೆಲಿಕಾನ್ ಪಕ್ಷಿಗಳ ಸಾವಿನಿಂದ ಮನನೊಂದಿರುವ ಗ್ರಾಮಸ್ಥರು ವಿವಿಧ ಸಂಘಟನೆಗಳೊಂದಿಗೆ ಡಿ.24 ರ ಸೋಮವಾರ 10.30 ಕೊಕ್ಕರೆ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಈ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಇತ್ತೀಚಿನ ದಿನಗಳಲ್ಲಿ ಶಿಂಷಾ ನದಿ ಕಲುಷಿತ ಗೊಂಡಿರುವುದು ಪೆಲಿಕಾನ್ ಪಕ್ಷಿಗಳ ಸಾವಿಗೆ ಕಾರಣ. ಈ ಕೂಡಲೇ ಶಿಂಷಾ ನದಿಗೆ ಬಿಡುವ ಕೊಳಚೆ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವರ್ಷದಲ್ಲಿ 11 ಪಕ್ಷಿಗಳು ಮೃತ ಪಟ್ಟಿವೆ. ಶನಿವಾರ ಒಂದು ಪೆಲಿಕಾನ್ ಮೃತ ಪಟ್ಟಿದೆ, ಭಾನುವಾರ ಒಂದು ಪಕ್ಷಿ ಅಸ್ವಸ್ಥಗೊಂಡಿದೆ ಇದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಪೆಲಿಕಾನ್ ಪಕ್ಷಿಗಳ ಜೀವಕ್ಕೆ ತೊಂದರೆಯಾಗುವ ಲಕ್ಷಣಗಳು ಕಾಣಿಸತೊಡಗಿದೆ.











Click it and Unblock the Notifications