ಕರ್ನಾಟಕ ಚುನಾವಣೆ: ಬಿಗಿಬಂದೋಬಸ್ತ್ ಗಾಗಿ ಅರೆಸೇನಾ ಪಡೆ
ಮಂಡ್ಯ, ಏಪ್ರಿಲ್ 10: ಚುನಾವಣಾ ಕಾವು ದಿನಕಳೆದಂತೆ ಹೆಚ್ಚಾಗುತ್ತಿದ್ದು, ಬಿಗಿ ಬಂದೋಬಸ್ತ್ ಗಾಗಿ ರಾಜ್ಯಕ್ಕೆ ಅರೆಸೇನಾ ಪಡೆಗಳು ಬಂದಿಳಿಯಲಾರಂಭಿಸಿವೆ.
ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಸ್ಥಳಗಳು ಸೂಕ್ಷ್ಮ ಪ್ರದೇಶಗಳಾಗಿದ್ದು, ಇಲ್ಲಿ ಯಾವುದೇ ತಂಟೆ ತಕರಾರಿಲ್ಲದೆ ಚುನಾವಣೆ ನಡೆಸುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ಅಲ್ಲಿ ಯಾವುದೇ ತೊಂದರೆಯಿಲ್ಲದೆ ಶಾಂತಿಯುತವಾಗಿ ಚುನಾವಣೆ ನಡೆಸುವ ಸಲುವಾಗಿಯೇ ಈಗಿನಿಂದಲೇ ಭದ್ರತೆಗಳನ್ನು ಕೈಗೊಳ್ಳಲಾಗುತ್ತಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆಗಾಗಿ ವಿವಿಧ ಪೊಲೀಸ್ ತುಕಡಿ ಹಾಗೂ ಅರೆಸೇನಾ ಮೀಸಲು ಪಡೆಯನ್ನು ಕರೆಯಿಸಿಕೊಳ್ಳಲಾಗಿದೆ.
ಹಾಗೆನೋಡಿದರೆ ಈ ಕ್ಷೇತ್ರದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಅರಕೆರೆ ಹೋಬಳಿಯ ಅರಕೆರೆ ಗ್ರಾಮದವರೇ ಆದ ಇಬ್ಬರು ಪ್ರಬಲ ನಾಯಕರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವುದರಿಂದ ಬೇರೆ ಬೇರೆ ಕಾರಣಗಳಿಗೆ ಇಲ್ಲಿ ಶಾಂತಿ ಕದಡುವಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಈ ಪ್ರದೇಶದಲ್ಲಿ ಕಾರ್ಯಕರ್ತರನ್ನು ನಿಯಂತ್ರಿಸಲು ಬಂದೋಬಸ್ತ್ ಮಾಡಲಾಗಿದೆ. ಇದೀಗ ಅರಕೆರೆಗೆ ಬಂದಿಳಿದಿರುವ ಅರೆ ಸೇನಾಪಡೆ ಪರೇಡ್ ನಡೆಸಿ, ಜನತೆಯಲ್ಲಿ ಅರಿವು ಮೂಡಿಸಿದೆ.
ಸುಮಾರು 55 ಮಂದಿ ಅರೆ ಸೇನಾಪಡೆಯೊಂದಿಗೆ ಸ್ಥಳೀಯ 25 ಪೊಲೀಸರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ನೇತೃತ್ವದಲ್ಲಿ ಅರಕೆರೆ, ತಡಗವಾಡಿ, ಕೊಡಿಯಾಲ ಗ್ರಾಮಗಳ ಮುಖ್ಯ ಬೀದಿಗಳಲ್ಲಿ ಪರೇಡ್ ನಡೆಸಿದರು.
ಈ ವೇಳೆ ಸಿಪಿಐ ರವೀಂದ್ರ, ಪಿಎಸ್ ಐ ಭವಿತಾ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿ ಪರೇಡ್ ನಲ್ಲಿ ಪಾಲ್ಗೊಂಡಿದ್ದರು.