ನಡುರಸ್ತೆಯಲ್ಲೇ ತಾಯಿ ಮಗುವನ್ನು ಕೂರಿಸಿ ಮಂಡ್ಯ ಸಂಚಾರಿ ಪೊಲೀಸರಿಂದ ದಂಡ ವಸೂಲಿ
ಮಂಡ್ಯ, ನವೆಂಬರ್, 03: ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ದ್ವಿಚಕ್ರವಾಹನದಲ್ಲಿ ತಾಯಿಯೊಂದಿಗೆ ಕರೆದೊಯ್ಯುತ್ತಿದ್ದ ಯುವಕನನ್ನು ಹೆಲ್ಮೆಟ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಅಡ್ಡಗಟ್ಟಿದ ಸಂಚಾರಿ ಪೊಲೀಸರು 500 ರೂಪಾಯಿ ದಂಡ ವಿಧಿಸಿದ್ದಾರೆ.
ಹಣವಿಲ್ಲ ಎಂದರೂ ಬಿಡದೇ ರಸ್ತೆಯಲ್ಲೇ ತಾಯಿ-ಮಗುವನ್ನು ಕೂರಿಸಿದ್ದಾರೆ. ಆಗ ಬೇರೆಯವ ಬಳಿ ಫೋನ್ ಪೇ ಮಾಡಿಸಿಕೊಂಡು ಹಣ ಕಟ್ಟಿದ ಬಳಿಕ ಬಿಟ್ಟು ಕಳುಹಿಸಿರುವ ಅಮಾನವೀಯ ಪ್ರಸಂಗ ನಗರದ ಮಹಾವೀರ ವೃತ್ತದಲ್ಲಿ ನಡೆದಿದೆ ಹಾಗೂ ಮಂಡ್ಯ ಸಂಚಾರಿ ಪೊಲೀಸರ ಅಮಾನವೀಯತೆಯ ವಿರುದ್ಧ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದ್ದೂರು: ಕಾಂಗ್ರೆಸ್ನಿಂದ ಶೀಘ್ರದಲ್ಲೇ ವಿಭಾಗ ಮಟ್ಟದ ರಥಯಾತ್ರೆ-ಚೆಲುವರಾಯಸ್ವಾಮಿ
ಮಾನವೀಯತೆ ಮರೆತ ಸಂಚಾರಿ ಪೊಲೀಸರು; ಕೆ. ಆರ್. ಪೇಟೆ ತಾಲೂಕಿನ ಯಗಚಗುಪ್ಪೆ ಗ್ರಾಮದ ಅಭಿಷೇಕ್ ಎಂಬಾತ ದ್ವಿಚಕ್ರವಾಹನದಲ್ಲಿ ತಾಯಿ-ಮಗುವನ್ನು ಕೂರಿಸಿಕೊಂಡು ಜಿಲ್ಲಾ ಆಸ್ಪತ್ರೆಯ ಕಡೆ ತೆರಳುತ್ತಿದ್ದನು. ಆತ ಹೆಲ್ಮೆಟ್ ಧರಿಸದಿರುವುದನ್ನು ಕಂಡ ಸಂಚಾರಿ ಪೊಲೀಸರು ಮಹಾವೀರ ವೃತ್ತದ ಬಳಿ ತಡೆದು ನಿಲ್ಲಿಸಿದ್ದಾರೆ.
ಹೆಲ್ಮೆಟ್ ಧರಿಸದ ಕಾರಣಕ್ಕೆ ಆತನಿಗೆ 500 ರೂಪಾಯಿ ದಂಡ ವಿಧಿಸಿ ಚೀಟಿಯನ್ನು ಆತನ ಕೈಗೆ ಕೊಟ್ಟಿದ್ದಾರೆ. ಮಗುವನ್ನು ಆಸ್ಪತ್ರೆಗೆ ತೋರಿಸಬೇಕು, ನನ್ನ ಬಳಿ ಹಣವಿಲ್ಲ ಎಂದರೂ ಪೊಲೀಸರು ಕೇಳಲಿಲ್ಲ. ಪೊಲೀಸರು ಹಣ ಕಟ್ಟಿ ಮಗುವನ್ನು ಕರೆದುಕೊಂಡು ಹೋಗು ಎಂದಿದ್ದಾರೆ.
ಆಗ ವಿಧಿಯಿಲ್ಲದೇ ತಾಯಿ-ಮಗುವನ್ನು ನಡು ರಸ್ತೆಯಲ್ಲೇ ಕೂರಿಸುವಂತಾಯಿತು. ಅಭಿಷೇಕ್ ಕೂಡಲೇ ತನ್ನ ಕುಟುಂಬದವರಿಗೆ ಕರೆ ಮಾಡಿ 500 ರೂಪಾಯಿ ಹಣವನ್ನು ಫೋನ್-ಪೇ ಮಾಡಿಸಿಕೊಂಡಿದ್ದಾರೆ. ನಂತರ ಎಟಿಎಂನಲ್ಲಿ ಹಣ ಬಿಡಿಸಿಕೊಂಡು ಬಂದು ಕಟ್ಟಿದ ಬಳಿಕ ತಾಯಿ-ಮಗುವನ್ನು ಕಳುಹಿಸಿಕೊಟ್ಟಿದ್ದಾರೆ.
ಅಮಾನವೀಯ ಘಟನೆ ಎಂದು ಹೆಚ್ಡಿಕೆ ಟ್ವೀಟ್; ಘಟನೆಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮಂಡ್ಯದಲ್ಲಿ ಮಗುವಿನೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಪೊಲೀಸರು ಕಿರುಕುಳ ನೀಡಿದ್ದು ಖಂಡನೀಯವಾಗಿದೆ.
ಮಾನವೀಯತೆಯನ್ನೇ ಅಣಕಿಸುವ ಇಂತಹ ಘಟನೆಗಳು ರಾಜ್ಯದಲ್ಲಿ ಪದೇಪದೇ ಘಟಿಸುತ್ತಿರುವುದು ಆಘಾತಕಾರಿ ಸಂಗತಿ ಆಗಿದೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಹಾಳು ಮಾಡಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಆಗಿದೆ. ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ತಂದೆ-ತಾಯಿಯನ್ನು ಅಡ್ಡಗಟ್ಟಿದ್ದಾರೆ. ಹೆಲ್ಮೆಟ್ ಇಲ್ಲ ಎನ್ನುವ ಕಾರಣಕ್ಕೆ ಬೈಕಿನ ಕೀ ಕಿತ್ತುಕೊಂಡು ಪೊಲೀಸರು ಕಿರುಕುಳ ನೀಡಿದ ಘಟನೆಯ ವಿಡಿಯೋ ತುಣುಕುಗಳನ್ನು ನೋಡಿ ನನಗೆ ಬಹಳ ಸಂಕಟವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಗುವಿನ ಅನಾರೋಗ್ಯದಿಂದ ಆತಂಕಗೊಂಡಿದ್ದ ದಂಪತಿಯೊಂದಿಗೆ ಪೊಲೀಸರು ಹೀಗೆ ನಡೆದುಕೊಂಡಿದ್ದು ಅಕ್ಷಮ್ಯ ಮತ್ತು ಹೇಯವಾಗಿದೆ. "ದಮ್ಮಯ್ಯ, ನಮ್ಮಲ್ಲಿ ಹಣವಿಲ್ಲ, ದಯವಿಟ್ಟು ಬಿಟ್ಟುಬಿಡಿ" ಎಂದು ಬೇಡಿಕೊಂಡರೂ ಪೊಲೀಸರು ದಯೆ ತೋರಿಸಿಲ್ಲ. ಪೊಲೀಸರು ಹಣಕ್ಕಾಗಿ ಪೀಡಿಸಿರುವುದು ಪೈಶಾಚಿಕ ನಡವಳಿಕೆ, ಇದರಿಂದ ಇಲಾಖೆಯೇ ತಲೆ ತಗ್ಗಿಸುವಂತದ್ದು ಎಂದು ಅಸಮಾಧಾನ ಹೊರಹಾಕಿದ್ದಾರೆ.