ಕು.ರಮ್ಯಾ, ಅಪ್ಪಾಜಿ ಬಳಿಕ ಈಗ ಮಂಡ್ಯದಲ್ಲಿ ಬಿಎಸ್ವೈ ಕ್ಯಾಂಟೀನ್!
ಮಂಡ್ಯ, ಡಿಸೆಂಬರ್ 31 : ಮಂಡ್ಯದಲ್ಲಿ ಕ್ಯಾಂಟೀನ್ ರಾಜಕೀಯ ಜೋರಾಗಿದೆ. ಕು.ರಮ್ಯಾ, ಅಪ್ಪಾಜಿ ಕ್ಯಾಂಟೀನ್ ಬಳಿಕ ಈಗ ಯಡಿಯೂರಪ್ಪ ಹೆಸರಿನಲ್ಲಿ ಕ್ಯಾಂಟೀನ್ ಆರಂಭವಾಗಲಿದೆ.
5 ರೂ.ಗೆ ಊಟ, ಉಪಹಾರ ನೀಡಲು ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು 2018ರ ಚುನಾವಣೆ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಹೆಸರಿನಲ್ಲಿ ಕ್ಯಾಂಟೀನ್ ಆರಂಭವಾಗುತ್ತಿದೆ.

ಮಂಡ್ಯದ ಸುಭಾಷ್ ನಗರದ 1ನೇ ಕ್ರಾಸ್ನಲ್ಲಿ 'ಬಿಎಸ್ವೈ ಕ್ಯಾಂಟೀನ್ ' ಶೀಘ್ರದಲ್ಲೇ ಆರಂಭವಾಗಲಿದೆ. ಬಡವರಿಗೆ, ಕೂಲಿ ಕಾರ್ಮಿಕರಿಗೆ ಸಹಾಯಕವಾಗಲಿ ಎಂದು ಈ ಕ್ಯಾಂಟೀನ್ ಆರಂಭಿಸಲಾಗುತ್ತಿದೆ.
'ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಯಡಿಯೂರಪ್ಪಜೀ ಕ್ಯಾಂಟೀನ್ ತೆರೆಯಲು ನಿರ್ಧರಿಸಲಾಗಿದೆ' ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಜಿತೇಂದ್ರ ಹೇಳಿದ್ದಾರೆ.
'ದುಡಿಯುವ ಬಡವರು, ರೈತರು, ಆಟೋ ಚಾಲಕರು, ಕಾರ್ಮಿರಿಕರಿಗೆ ಅನುಕೂಲವಾಗಲು ರೂ.5ಕ್ಕೆ ಊಟ ಮತ್ತು ಉಪಪಾರ ನೀಡಲಾಗುತ್ತದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಕ್ಯಾಂಟೀನ್ ಆರಂಭಿಸಲಾಗುತ್ತಿದೆ' ಎಂದು ಜಿತೇಂದ್ರ ವಿವರಣೆ ನೀಡಿದರು.
ಕ್ಯಾಂಟೀನ್ ರಾಜಕೀಯ : ಮಂಡ್ಯದ ಮಾಜಿ ಸಂಸದೆ ರಮ್ಯಾ ಹೆಸರಿನಲ್ಲಿ ನಗರದಲ್ಲಿ 'ಕು.ರಮ್ಯಾ ಕ್ಯಾಂಟೀನ್' ಆರಂಭಿಸಲಾಗಿದೆ. ಊಟ, ಉಪಹಾರಕ್ಕೆ 10 ರೂ. ದರ ನಿಗದಿ ಮಾಡಲಾಗಿದೆ.
ಮಂಡ್ಯ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಡಾ.ಕೃಷ್ಣ, ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ನಗರದಲ್ಲಿ 'ನಮ್ಮ ಅಪ್ಪಾಜಿ ಕ್ಯಾಂಟೀನ್' ಆರಂಭಿಸಿದ್ದಾರೆ. ಈಗ ಯಡಿಯೂರಪ್ಪ ಹೆಸರಿನಲ್ಲಿ ಕ್ಯಾಂಟೀನ್ ಆರಂಭವಾಗುತ್ತಿದೆ.












Click it and Unblock the Notifications