ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮಾಡಿದ ಶಪಥವೇನು?
ಮಂಡ್ಯ, ನವೆಂಬರ್ 30; ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಂಡ್ಯ ರಾಜಕಾರಣದಲ್ಲಿ ಕಾಣಿಸಿಕೊಂಡಿದ್ದು, ಸೋತಲ್ಲೇ ಮತ್ತೆ ಗೆಲುವಿಗೆ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಸೋಲಿಗೆ ಕಾರಣರಾದವರನ್ನು ಸೋಲಿಸುವ ಶಪಥ ಮಾಡಿದ್ದಾರೆ.
Recommended Video
ವಿಧಾನಪರಿಷತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ಅಪ್ಪಾಜಿ ಗೌಡ ಪರವಾಗಿ ಪ್ರಚಾರ ನಡೆಸುತ್ತಿರುವ ಅವರು ತಮ್ಮ ಸೋಲಿಗೆ ಪ್ರತಿಕಾರ ತೀರಿಸಲು ಸಿದ್ಧರಾಗಿದ್ದಾರೆ.
ಈಗಾಗಲೇ ಜನಸಾಮಾನ್ಯರ ಜತೆ ಕಾಣಿಸಿಕೊಳ್ಳುತ್ತಿರುವ ಅವರು, ಗ್ರಾಮಾಂತರ ಪ್ರದೇಶಗಳಿಗೆ ತೆರಳುತ್ತಿದ್ದು ಅಲ್ಲಿ ಕಾರ್ಯಕ್ರಮಗಳಲ್ಲಿ ಕೂಡ ಭಾಗಿಯಾಗುತ್ತಿದ್ದಾರೆ. ಭಾರತೀನಗರ ಬಲಿಯ ದೊಡ್ಡರಸಿನಕೆರೆಯಲ್ಲಿ ಶ್ರೀಕಾಳಿಕಾಂಬ ಯುವಬಳಗವು ಕಾಳಿಕಾಂಬ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ 10ನೇ ವರ್ಷದ ರಾಜ್ಯಮಟ್ಟದ ಹೊನಲುಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಕಬ್ಬಡಿ ಆಟ ಆಡುವ ಮೂಲಕ ಚಾಲನೆ ನೀಡಿ ಎಲ್ಲರ ಗಮನಸೆಳೆದಿದ್ದಾರೆ.
ಮತ್ತೊಂದೆಡೆ ಅಪ್ಪಾಜಿ ಗೌಡರ ಜತೆ ಪ್ರಚಾರ ಭಾಷಣ ಮಾಡಿದ ಅವರು ಕಾರ್ಯಕರ್ತರನ್ನು ಹುರಿದುಂಬಿಸಿ ಅವರೊಂದಿಗೆ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರಲ್ಲದೆ, ಮುಂದೆ ಕಾರ್ಯಕರ್ತರು ಮಾಡಬೇಕಾದ ಕೆಲಸ ಮತ್ತು ತನ್ನ ಸೋಲಿಗೆ ಕಾರಣರಾದವರನ್ನು ಸೋಲಿಸಬೇಕೆಂಬ ಶಪಥವನ್ನು ಕೂಡ ಮಾಡಿದ್ದಾರೆ.
ಜೀವನದಲ್ಲಿ ಏಳು-ಬೀಳು, ಸೋಲು-ಗೆಲುವು ಸಹಜವಾಗಿ ಬರುವಂತವು. ಅವುಗಳನ್ನು ನಾವು ಛಲದಿಂದ ಸ್ವೀಕರಿಸಬೇಕು. ಅಲ್ಲದೆ ನಿಖರವಾದ ಗುರಿಯನ್ನು ಇಟ್ಟುಕೊಂಡು ಮುಂದುವರೆಯಬೇಕು ಎಂದು ಹೇಳುವುದರ ಮೂಲಕ ತಮ್ಮ ಮುಂದಿನ ಉದ್ದೇಶವನ್ನು ತೆರೆದಿಟ್ಟಿದ್ದಾರೆ.

ಸೋಲಿನ ಗುಂಗಿನಿಂದ ಹೊರಗೆ ಬಂದಿಲ್ಲ
ನಿಖಿಲ್ ಕುಮಾರಸ್ವಾಮಿ ಮಾತಿನ ವೈಖರಿಯನ್ನು ನೋಡಿದರೆ ಕಳೆದ ಲೋಕಸಭಾ ಚುನಾವಣಾ ಸೋಲಿನ ಕಹಿಯಿಂದ ಹೊರಗೆ ಬಂದಿಲ್ಲ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ತನ್ನ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂಬುದಂತು ಸತ್ಯ.
ಈಗಿನ ಪರಿಸ್ಥಿತಿಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿ ಗೌಡರನ್ನು ಗೆಲ್ಲಿಸಿ ತರುವ ಪಣ ತೊಟ್ಟಿರುವ ಅವರು, ಆ ಮೂಲಕ ತಮ್ಮ ಸೋಲಿಗೆ ಕಾರಣವಾದ ಕಾಂಗ್ರೆಸ್ ಮತ್ತು ಬಿಜೆಪಿ ಮೇಲಿರುವ ರಾಜಕೀಯ ದ್ವೇಷವನ್ನು ತೀರಿಸಿಕೊಳ್ಳುವ ಹಠಕ್ಕೆ ಬಿದ್ದಿರುವುದು ಎದ್ದು ಕಾಣುತ್ತಿದೆ.

ಚಕ್ರವ್ಯೂಹದಲ್ಲಿ ಸಿಲುಕಿಸಿ ಸೋಲಿಸಿದರು
ನಿಖಿಲ್ ಕುಮಾರಸ್ವಾಮಿ ಹೇಳಿರುವಂತೆ, "ಜಿಲ್ಲೆಯ ಜನ ಪಕ್ಷವನ್ನು ಕೈಬಿಟ್ಟಿಲ್ಲ ಎಂಬುವುದಕ್ಕೇ ನಾನು ಸಾಕ್ಷಿಯಾಗಿದ್ದು, ಹಿಂದೆ ಸಿ. ಎಸ್. ಪುಟ್ಟರಾಜುರವರು ಲೋಕಸಭೆ ಚುನಾವಣೆಯಲ್ಲಿ ಗೆದ್ದಾಗ 5.25 ಲಕ್ಷ ಮತಗಳನ್ನು ಪಡೆದಿದ್ದರು. ನಾನು ಸ್ಪರ್ಧೆ ಮಾಡಿದಾಗ 5.75 ಲಕ್ಷ ಮತಗಳನ್ನು ಮತದಾರರು ನೀಡಿದ್ದರು. ಅಂದರೆ 50 ಸಾವಿರಕ್ಕೂ ಹೆಚ್ಚು ಮತಗಳನ್ನು ನನಗೆ ನೀಡಿದ್ದರು"
"ಆದರೂ ಕಾಂಗ್ರೆಸ್, ಬಿಜೆಪಿ ಮತ್ತು ರೈತಸಂಘದವರ ನನ್ನನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಸೋಲಿಸಿದರು. ಆ ಸೋಲಿಗೆ ನಮ್ಮ ಪಕ್ಷದ ಅಭ್ಯರ್ಥಿ ಅಪ್ಪಾಜಿಗೌಡರವರನ್ನು ಗೆಲ್ಲಿಸುವ ಮೂಲಕ ಪ್ರತಿಕಾರವನ್ನು ತೀರಿಸಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮಾತುಗಳು ಮೇಲ್ನೋಟಕ್ಕೆ ಪ್ರತಿ ರಾಜಕೀಯ ವ್ಯಕ್ತಿಗಳು ಮಾತನಾಡುವಂತೆ ಕಂಡು ಬಂದರೂ ಅದರ ಹಿಂದೆ ಒಂದು ಕಿಚ್ಚಿದೆ ಎಂಬುದಂತು ಸತ್ಯ.

ಅಪ್ಪಾಜಿ ಗೌಡರ ಗೆಲುವು ಕಷ್ಟವೇನಲ್ಲ
ಮಂಡ್ಯ ಜೆಡಿಎಸ್ನ ಭದ್ರಕೋಟೆಯಾಗಿದ್ದು, ತಳಮಟ್ಟದಿಂದಲೇ ಪಕ್ಷ ಗಟ್ಟಿಯಾಗಿ ಬೇರೂರಿದೆ ಹೀಗಾಗಿ ಗ್ರಾಮಪಂಚಾಯಿತಿ ಸದಸ್ಯರು ಪಕ್ಷ ನಿಷ್ಠೆ ತೋರಿದರೆ ವಿಧಾನ ಪರಿಷತ್ ಅಭ್ಯರ್ಥಿ ಅಪ್ಪಾಜಿ ಗೌಡರ ಗೆಲುವು ಕಷ್ಟವೇನಲ್ಲ. ಹಾಗೆಂದು ಬಲವಾಗಿ ನಂಬುವಂತೆಯೂ ಇಲ್ಲ. ಏಕೆಂದರೆ ಕಾಂಗ್ರೆಸ್ ಮತ್ತು ಬಿಜೆಪಿ ತನ್ನ ಅಭ್ಯರ್ಥಿಯ ಗೆಲುವಿಗೆ ಬೇಕಾದ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಎರಡು ಪಕ್ಷಗಳು ಸಂಸದೆ ಸುಮಲತಾ ಬೆಂಬಲ ಪಡೆಯಲು ಮುಂದಾಗಿದ್ದರೂ ಅವರು ತಟಸ್ಥಧೋರಣೆ ತೋರಿದ್ದರಿಂದ ಕಷ್ಟವಾಗಿದೆ.
ಈಗಷ್ಟೇ ಜಿಲ್ಲೆಯಲ್ಲಿ ಖಾತೆ ತೆರೆದಿರುವ ಬಿಜೆಪಿ ವಿಧಾನಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಏನೇನು ಬೇಕೋ ಅದೆಲ್ಲವನ್ನು ಮಾಡುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಕೂಡ ಜೆಡಿಎಸ್ ಭದ್ರಕೋಟೆಗೆ ಲಗ್ಗೆಯಿಟ್ಟು, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಗಟ್ಟಿಯಾಗಿ ನೆಲೆಯೂರುವ ಪ್ರಯತ್ನ ಮಾಡುತ್ತಿದೆ.

ಮತದಾರರ ಸೆಳೆಯಲು ಸರ್ವ ಪ್ರಯತ್ನ
ಅದು ಏನೇ ಇರಲಿ ಬಹಿರಂಗವಾಗಿಯೇ ರಾಜಕೀಯ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಿರುವ ನಿಖಿಲ್ ಕುಮಾರಸ್ವಾಮಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರದೆ ಹೋದರೆ ಕಾಂಗ್ರೆಸ್ ಮತ್ತು ಬಿಜೆಪಿ ಮುಂದೆ ನಗೆಪಾಟಲಿಗೀಡಾಗಬಹುದು. ಹೀಗಾಗಿಯೇ ಅವರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಮತದಾರರ ಸೆಳೆಯಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications