ಮಂಡ್ಯದಿಂದ ಸ್ಪರ್ಧೆ: ಎಲ್ಲಾ ಸುದ್ದಿಗಳಿಗೆ ತೆರೆ ಎಳೆದ ನಿಖಿಲ್ ಕುಮಾರಸ್ವಾಮಿ
Recommended Video
ಇದುವರೆಗಿನ ತಮ್ಮ ರಾಜಕೀಯ ಜೀವನದಲ್ಲಿ ಅದೆಷ್ಟೋ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆಯನ್ನು ಜೆಡಿಎಸ್ ವರಿಷ್ಠ ದೇವೇಗೌಡ್ರು ನೋಡಿರಬಹುದು. ಆದರೆ, ಖಡಾಖಂಡಿತವಾಗಿ ತಮ್ಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವುದರಲ್ಲಿ ಹಿಂದೆಮುಂದೆ ನೋಡುತ್ತಿರುವುದು ಇದೇ ಮೊದಲಿರಬಹುದು.
ಬಹುಷಃ ಅದಕ್ಕೆ ಕಾಂಗ್ರೆಸ್ ಜೊತೆಗಿನ ಮೈತ್ರಿಯೂ ಕಾರಣವಿರಬಹುದು. ಎಷ್ಟು ಸೀಟು ನಮಗೆ ಎಷ್ಟು ಸೀಟು ನಿಮಗೆ ಎನ್ನುವ ಮಾತುಕತೆ ಇನ್ನೂ ಚೌಕಾಸಿ ಹಂತದಲ್ಲೇ ಇರುವುದು ಒಂದೆಡೆಯಾದರೆ, ಮಂಡ್ಯದಲ್ಲಿ ಯಾರು ಸ್ಪರ್ಧಿಸಬೇಕು ಎನ್ನುವ ಗೊಂದಲ/ಪ್ರತಿಷ್ಠೆ ಎರಡೂ ಪಕ್ಷದಲ್ಲಿ ಇರುವುದರಿಂದ, ಪ್ರಮುಖವಾಗಿ ಮಂಡ್ಯ ಕ್ಷೇತ್ರ ಕಗ್ಗಂಟಾಗಿ ಪರಿಣಮಿಸಿದೆ.
ಕಾಂಗ್ರೆಸ್ ಈ 3 ಕ್ಷೇತ್ರ ಬಿಟ್ಟು ಕೊಡಲೇಬೇಕೆಂದು ಜೆಡಿಎಸ್ ಹಠವೇಕೆ?
ಈ ಎಲ್ಲಾ ಬೆಳವಣಿಗೆಗಳ ನಡುವೆ, ಮಂಡ್ಯ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರುವ ದೇವೇಗೌಡ್ರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ, ಭಾನುವಾರ ಕ್ಲಿಯರ್ ಕಟ್ ಹೇಳಿಕೆಯೊಂದನ್ನು ನೀಡಿದ್ದಾರೆ. ಆ ಮೂಲಕ ಇರುವ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಆದರೆ, ಇದು ಅವರ ವೈಯಕ್ತಿಕ ಹೇಳಿಕೆಯೋ ಅಥವಾ ದೇವೇಗೌಡರದ್ದೋ ಎನ್ನುವುದು, ಗೌಡ್ರ ಅಂತಿಮ ಹೇಳಿಕೆಯ ನಂತರವಷ್ಟೇ ಕನ್ಫರ್ಮ್ ಆಗಬೇಕಿದೆ. ಯಾಕೆಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಗಿನ ಮೈತ್ರಿ.
ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ದೇವೇಗೌಡರ ಹಸಿರು ನಿಶಾನೆ?
ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಬೇಕು ಎನ್ನುವ ಖಚಿತ ನಿಲುವು
ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಬೇಕು ಎನ್ನುವ ಖಚಿತ ನಿಲುವನ್ನು ಗೌಡ್ರು ಹೊಂದಿರುವುದರಿಂದ, ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಿಗೆ ಅತ್ಯಂತ ನಿರ್ಣಾಯಕ. ಒಂದು ವೇಳೆ ಗೌಡ್ರ ಕುಟುಂಬದ ಯಾವೊಬ್ಬ ಸದಸ್ಯರೂ ಚುನಾವಣಾ ಕಣದಲ್ಲಿ ಆಸಕ್ತಿ ವಹಿಸಿದೇ ಇದ್ದ ಪಕ್ಷದಲ್ಲಿ ಜೆಡಿಎಸ್ ಈ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟು ಕೊಡುತ್ತಿತ್ತು ಅಥವಾ ಸುಮಲತಾ ಅಂಬರೀಶ್ ಮನವೊಲಿಸಿ ಅವರೇ ತಮ್ಮ ಅಭ್ಯರ್ಥಿಯನ್ನಾಗಿ ಮಾಡುತ್ತಿತ್ತು ಎನ್ನುವ ಮಾತು ಕೇಳಿಬರುತ್ತಿದೆ.
ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುವುದಾದರೆ ಮಾಡಲಿ
ಭಾನುವಾರ ಮಂಗಳೂರಿನಲ್ಲಿ ಮಾತನಾಡುತ್ತಿದ್ದ ದೇವೇಗೌಡರು, 'ನಿಖಿಲ್ ಚುನಾವಣೆಗೆ ನಿಲ್ಲುತ್ತೇನೆ ಎಂದಿದ್ದರು. ತಾತನಿಗೆ ಪ್ರಜ್ವಲ್ ಬಗ್ಗೆ ಮಾತ್ರ ಆಸಕ್ತಿ ಇದೆ ಎಂದು ಜನರು ಹೇಳುವಂತಾಗಬಾರದು. ಅದಕ್ಕೆ ನಿಖಿಲ್ ಗೂ ಅವಕಾಶ ಕೊಡಲು ನಿರ್ಧಾರ ಮಾಡಿದ್ದೇವೆ. ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುವುದಾದರೆ ಮಾಡಲಿ ಎಂದು ದೇವೇಗೌಡ್ರು ಹೇಳುವ ಮೂಲಕ ಬಹುತೇಕ ಗ್ರೀನ್ ಸಿಗ್ನಲ್ ನೀಡಿದ್ದರು.
ಮಂಡ್ಯದಲ್ಲಿ ಮಾತನಾಡುತ್ತಿದ್ದ ನಿಖಿಲ್ ಕುಮಾರಸ್ವಾಮಿ
ಮಂಗಳೂರಿನಲ್ಲಿ ಗೌಡ್ರು ಹೇಳಿಕೆ ನೀಡಿದರೆ, ಇತ್ತ ಮಂಡ್ಯದಲ್ಲಿ ಮಾತನಾಡುತ್ತಿದ್ದ ನಿಖಿಲ್ ಕುಮಾರಸ್ವಾಮಿ, ನಾನು ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತೇನೆ. ಸದ್ಯದಲ್ಲೇ ಇಲ್ಲಿ ಮನೆ ಮಾಡಿ, ಕಾರ್ಯಕರ್ತರ ಜೊತೆಗೆ ಸಕ್ರಿಯವಾಗಿ ಬೆರೆಯಲಿದ್ದೇನೆ. ಕಚೇರಿಯನ್ನು ಸದ್ಯದಲ್ಲೇ ಆರಂಭಿಸಿ, ನನ್ನ ಸೇವೆ ಮಂಡ್ಯದಲ್ಲಿ ಆರಂಭವಾಗಲಿದೆ ಎನ್ನುವ ಮೂಲಕ, ಮಂಡ್ಯದಲ್ಲಿ ಯಾರು ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಸುಮಲತಾ ಅಕ್ಕ ಕೂಡಾ ಸ್ಪರ್ಧಿಸಲು ಸ್ವತಂತ್ರರು, ಅಭಿ ನನ್ನ ಸಹೋದರ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಸುಮಲತಾ ಅಕ್ಕ ಕೂಡಾ ಸ್ಪರ್ಧಿಸಲು ಸ್ವತಂತ್ರರು, ಅಭಿ ನನ್ನ ಸಹೋದರನಂತೆ. ನಾನು ಯಾರನ್ನೂ ನಿಷ್ಠುರ ಮಾಡಿಕೊಂಡು ರಾಜಕೀಯ ಮಾಡುವುದಿಲ್ಲ. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ನಿಖಿಲ್ ಹೇಳುವ ಮೂಲಕ, ಪಕ್ಷದಲ್ಲಿ ಗೌಡ್ರ ನಿರ್ಧಾರವೇ ಅಂತಿಮ ಎನ್ನುವ ಸುಳಿವನ್ನೂ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಹಲವು ವರ್ಷಗಳಿಂದ ಲೋಕಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ
ಪ್ರಜ್ವಲ್ ರೇವಣ್ಣ ಹಲವು ವರ್ಷಗಳಿಂದ ಲೋಕಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಚುನಾವಣೆಗಳಲ್ಲಿ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ದೇವೇಗೌಡರು ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧೆಯ ಸುಳಿವನ್ನೂ ನೀಡಿದ್ದಾರೆ. ಸುಮಲತಾ ಅಂಬರೀಶ್ ಸ್ಪರ್ಧೆ ಬಗ್ಗೆ ಹೇಳಿಕೆ ನೀಡಿದ ದೇವೇಗೌಡರು, 'ಆಕಾಂಕ್ಷೆ ಇರುವುದು ಸ್ವಾಭಾವಿಕ. ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳು ಮೊದಲಿನಿಂದಲೂ ಜೆಡಿಎಸ್ ಪಕ್ಷದ ಹಿಡಿತದಲ್ಲಿವೆ' ಎನ್ನುವ ಮೂಲಕ, ಎರಡೂ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟು ಕೊಡುವುದಿಲ್ಲ ಎನ್ನುವ ಸುಳಿವನ್ನು ನೀಡಿದ್ದಾರೆ.