ಜೆಡಿಎಸ್-ಬಿಜೆಪಿ ಸರಿಯಿಲ್ಲವೆಂದು ನಾರಾಯಣಗೌಡ ಕಾಂಗ್ರೆಸ್ಗೆ ಸೇರಬಹುದು; ಚಲುವರಾಯಸ್ವಾಮಿ
ಮಂಡ್ಯ: ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಕೂಡಲೇ ಕಾಂಗ್ರೆಸ್ ಸೇರುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ, ನಾವು ಅವರಿಗೇನು ಆಮಿಷ ತೋರಿಸಿಲ್ಲ, ಜೆಡಿಎಸ್ ಸರಿಯಿಲ್ಲದಿರುವುದಕ್ಕೆ ಬಿಜೆಪಿಗೆ ಹೋದರು ಅಲ್ಲಿಯೂ ಅವರಿಗೆ ಸರಿ ಬರುತ್ತಿಲ್ಲ ಹಾಗಾಗಿ ಕಾಂಗ್ರೆಸ್ಗೆ ಬರುತ್ತಿರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಸಿ.ನಾರಾಯಣಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ನಿಜ, ಹಾಗೆಂದ ಮಾತ್ರಕ್ಕೆ ಕೂಡಲೇ ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಲಾಗಲ್ಲ, ಈ ಹಿಂದೆಯೇ ಹೇಳಿದಂತೆ ಮಂಡ್ಯ ಜಿಲ್ಲೆಯಲ್ಲಿ ಒಂದಷ್ಟು ಜನ ಕಾಂಗ್ರೆಸ್ಗೆ ಸೇರುತ್ತಾರೆ, ಇನ್ನು ಹತ್ತು ದಿನಗಳಲ್ಲಿ ಚಿತ್ರಣ ಸಿಗಲಿದೆ ಎಂದು ಹೇಳಿದರು.

ಕೆ.ಸಿ.ನಾರಾಯಣಗೌಡ ಅವರು ಯಾವುದೇ ಬೇಡಿಕೆ ಇಟ್ಟಿಲ್ಲ. ನಾವೂ ಯಾವುದೇ ಭರವಸೆ ಕೊಟ್ಟಿಲ್ಲ. ಜೆಡಿಎಸ್ ಸರಿ ಇಲ್ಲ ಎಂದು ಬಿಜೆಪಿಗೆ ಹೋದರು, ಈಗ ಅವರಿಬ್ಬರೂ ಒಂದಾಗಿದ್ದಾರೆ ಎಂದು ಕಾಂಗ್ರೆಸ್ಗೆ ಬರ್ತಿರಬಹುದು ಎಂದರು.
ಸಂಸದರ ವಿರುದ್ಧ ಕಿಡಿ
ಕೇಂದ್ರಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಪತ್ರ ವ್ಯವಹಾರ ಮಾಡಿದೆ. ಕೇಂದ್ರದಿಂದ ನಮಗೆ ಸ್ಪಂದನೆ ಸಿಗದಿದ್ದರಿಂದ ನಾವು ಪ್ರತಿಭಟನೆ ಮಾಡಿದ್ದೇವೆ, ಹಣಕಾಸಿನ ಅಂಕಿ ಅಂಶಗಳ ವಿಚಾರಗಳನ್ನಿಟ್ಟುಕೊಂಡು ಪ್ರತಿಭಟನೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ, ಈ ಹೋರಾಟದಲ್ಲಿ ಸ್ವಾಭಿಮಾನಿ ಸಂಸದರು ಬರಲಿಲ್ಲ, ಬಂದದ್ದು ಕೇವಲ ಡಿ.ಕೆ.ಸುರೇಶ್ ಒಬ್ಬರೇ ಎಂದರು.
ಕೇಂದ್ರದಿಂದ ನಾವು ₹15 ಸಾವಿರ ಕೋಟಿ ಕೇಳಿದ್ದೀವಿ ಅವರು ಎಷ್ಟಾದರೂ ಕೊಡಲಿ, ನಾವು ಇಷ್ಟೆ ಕೊಡಿ ಎಂದು ಒತ್ತಡ ಹಾಕಲ್ಲ, ಬಿಜೆಪಿ ಸಂಸದರಿಗೆ ನಾವು ಯಾವ ಭಾಷೆಯಲ್ಲಿ ಹೇಳಬೇಕು. ಐದು ತಿಂಗಳು ಕಳೆದರೂ ಬರಪರಿಹಾರದ ಹಣ ಕೊಟ್ಟಿಲ್ಲ. ಬಿಜೆಪಿಗೆ ನೈತಿಕತೆ ಇದ್ದರೆ ಇವರ್ಯಾರು ಚುನಾವಣೆಯಲ್ಲಿ ನಿಲ್ಲಬಾರದರು. ನಮ್ಮ ರಾಜ್ಯದಿಂದ ರಾಜ್ಯಸಭಾ ಸದಸ್ಯರಾಗಿರೊ ನಿರ್ಮಲಾ ಸೀತಾರಾಮ್ ಅವರಿಗೆ ಬದ್ಧತೆ ಇರಬೇಕು ಎಂದು ಕುಟುಕಿದರು.
ಎರಡು ತಲೆ ರಾಜಕಾರಣ ಮಾಡುತ್ತಿದ್ದಾರೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿ, ಪಾಪ ಎಚ್ಡಿಕೆ ಅವರಿಗೆ ಮಾತ್ರ ಒಂದೇ ತಲೆ ಇರೋದಾ? ಈ ದೇಶದಲ್ಲಿ ಮಹಾತ್ಮಗಾಂಧಿ ಬಿಟ್ಟರೆ ಸತ್ಯ ಹೇಳೋರು ಇವರೊಬ್ಬರೆ, ಹುಟ್ಟಿದಾಗಲೇ ಅವರು ಎಲ್ಲಾ ರೀತಿಯಲ್ಲೂ ಪರಿಣಿತಿ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ಧ್ವಜ ವಿವಾದದ ಬಗ್ಗೆ ಪ್ರತಿಕ್ರಿಯೆ
ಕೆರಗೋಡು ಗ್ರಾಮದಲ್ಲಿ ಹಾರುತ್ತಿರೋದು ರಾಷ್ಟ್ರಧ್ವಜ ಅದನ್ನ ಇಳಿಸಬೇಕಾ ಅಥವಾ ಹಾರಿಸಬೇಕಾ ಎಂದು ಅವರು ನಾಳೆ ಡಿಸಿಗೆ ಕೊಡೊ ಮನವಿ ಪತ್ರ ನೋಡಿ ಹೇಳುತ್ತೇನೆ, ಡಿಸಿ, ಎಸ್ಪಿ, ಸಿಇಒ ಅವರು ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ಮಾಡಿದ್ದಾರೆ. ಆ ವೇಳೆ ಅವರು ಧ್ವಜ ಹಾರಿಸುವ ಕುರಿತು ಯಾವುದೇ ಪ್ರಸ್ತಾವನೆ ಇಟ್ಟಿಲ್ಲ. ಆದರೆ ನಾವು ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಹಾರಿಸುವುದನ್ನು ಬಿಟ್ಟರೆ ಬೇರೆ ಧ್ವಜ ಹಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications