ಮುರುಘಾ ಮಠದ ಇಂದಿನ ಪರಿಸ್ಥಿತಿಯ ಬಗ್ಗೆ ಕೋಡಿಮಠ ಸ್ವಾಮೀಜಿ ಹೇಳಿದ್ದೇನು?
ಮಂಡ್ಯ ಸೆಪ್ಟೆಂಬರ್ 9: ಮುರುಘಾ ಮಠದ ಆಂತರಿಕ ಸಮಸ್ಯೆಗಳು ಆ ಸಂಸ್ಥೆಯನ್ನು ಬಲಿತೆಗೆದುಕೊಂಡಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕುಟುಂಬದ ಅಪೂರ್ವ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದ ಕೋಡಿಮಠದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು.
ಆಚಾರ, ವಿಚಾರ ಮತ್ತು ಪ್ರಚಾರ ಸಮಾಜದಲ್ಲಿ ಬಹುಮುಖ್ಯ. ಯಾರಾದರೂ ಪರಸ್ಪರ ಭೇಟಿಯಾದರೆ ಮೊದಲು ಕೇಳುವುದೇ ಏನ್ ಸಮಾಚಾರ ಎಂದು. ಇಂದು ನಮ್ಮ ಪರಂಪರಾಗತ ಆಚಾರ. ಉಭಯ ಕುಶಲೋಪರಿಯ ಅನಂತರ ವಿಚಾರ ವಿನಿಮಯ. ತನ್ನೊಳಗಿನ ವಿಚಾರವನ್ನು ಸಾರ್ವತ್ರೀಕರಣಗೊಳಿಸಲು ಒಂದಷ್ಟು ಪ್ರಚಾರ. ಆದರೆ ಇಂದು ಇವೆಲ್ಲವನ್ನೂ ಹಿಂದೆ ತಳ್ಳಿ ಅಪಪ್ರಚಾರ ಮುಂಚೂಣಿಗೆ ಬಂದಿದೆ.
ಕಾರ್ತಿಕದಲ್ಲಿ ಕಾದಿದೆ ಗಂಡಾಂತರ: ಕೋಡಿಶ್ರೀಗಳ ಭವಿಷ್ಯ
ಅಪಪ್ರಚಾರದ ಅಲೆ ಧರ್ಮ, ರಾಜಕಾರಣ ಸೇರಿದಂತೆ ಎಲ್ಲಕಡೆ ಆವರಿಸಿದೆ. ಇದರಿಂದ ಮೌಲ್ಯಗಳು ಹಾಳಾಗುತ್ತಿವೆ. ಉತ್ತಮ ಕೆಲಸ ಮಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಪಪ್ರಚಾರ ಒಂದು ಸಾಮಾಜಿಕ ಪೀಡೆಯಾಗಿ ಬೆಳೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಸ್ವಾಮೀಜಿ ಸತ್ಯಕ್ಕೆ ಅಂತಿಮ ಗೆಲುವು ಎನ್ನುವುದಾದರೂ ಇಂದು ಸತ್ಯ ಹೊರಬರುವಷ್ಟರಲ್ಲಿ ವ್ಯಕ್ತಿ ಸಾವಿನ ಮನೆ ಸೇರಿರುತ್ತಾನೆಂದು ಶ್ರೀಗಳು ಆತಂಕ ವ್ಯಕ್ತಪಡಿಸಿದರು.
ಭಾರತೀಯ ಪರಂಪರೆಯಲ್ಲಿ ಸಾಧು ಸಂತರಿಗೆ ಜನತೆ ಗೌರವ ಕೊಡುತ್ತಾರೆ. ಸಂನ್ಯಾಸಿಗಳನ್ನು ತ್ಯಾಗಿಗಳು ಎಂದು ನಮ್ಮ ಸಮಾಜ ಭಾವಿಸುತ್ತದೆ. ಸನ್ಯಾಸ ದೀಕ್ಷೆ ಪಡೆಯುವವನು ಎಲ್ಲ ವ್ಯಾಮೋಹಗಳನ್ನು ತ್ಯಜಿಸಬೇಕು. ಇಂದು ತತ್ವ, ಸಿದ್ದಾಂತ, ನೌತಿಕ ಮೌಲ್ಯಗಳಿಲ್ಲದ, ಖಾವಿಯ ಮಹತ್ವದ ಅರಿವಿಲ್ಲದವರೆಲ್ಲರೂ ಖಾವಿ ಹಾಕುತ್ತಿದ್ದಾರೆ. ಇದರಿಂದಾಗಿ ಜನ ಖಾವಿಧಾರಿಗಳನ್ನು ನೋಡುವ ದೃಷ್ಠಿ ಬೇರೆಯಾಗುತ್ತಿದೆ. ಇದರಿಂದ ನಮ್ಮ ಧರ್ಮ ಮತ್ತು ಸಂಸ್ಕೃತಿ ಅಪಾಯಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದ ಕೋಡಿಶ್ರೀಗಳು ಎಲ್ಲಿ ನಿಧಿಯುತ್ತದೆಯೋ ಅಲ್ಲಿ ವಿಧಿ ಕಾಡುತ್ತದೆ. ಭಿಕ್ಷಾವರ್ತಿಗಳಿಗೆ ಯಾವುದೇ ಭಯವಿರುವುದಿಲ್ಲ. ನಾವೆಲ್ಲ ಜನರಿಂದ ಭಿಕ್ಷೆ ಬೇಡಿ ಮಠ ಮುನ್ನಡೆಸುತ್ತಿದ್ದೇವೆ. ಮಠ ಭಕ್ತರಿಂದ ಮುನ್ನಡೆಯುವ ಪರಂಪರೆ ಮರುಕಳಿಸಬೇಕೆಂದರು.
ಸಂಪತ್ತನ್ನು ಗಳಿಸುವುದು ಎಷ್ಟು ಮುಖ್ಯವೋ ಅದನ್ನು ಬಳಸುವುದು ಮತ್ತು ಉಳಿಸುವುದು ಅಷ್ಠೇ ಮುಖ್ಯ. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕೆ.ಆರ್.ಪೇಟೆಯಂತಹ ಪುಟ್ಟ ಪಟ್ಟಣದಲ್ಲಿ ಯಾವುದೇ ಮೆಗಾ ಸಿಟಿಯಲ್ಲಿನ ಆಸ್ಪತ್ರೆಗಳಿಗೆ ಕಡಿಮೆಯಿಲ್ಲದಂತೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ ನಿರ್ಮಿಸಿದ್ದಾರೆ. ಎಲ್ಲ ಭಾಗ್ಯಗಳಿಗಿಂತಲೂ ಮಿಗಿಲಾದುದು ಆರೋಗ್ಯ ಭಾಗ್ಯ. ತಮ್ಮ ಕ್ಷೇತ್ರದ ಜನರಿಗೆ ಕೈಗೆಟುವ ರೀತಿಯಲ್ಲಿ ಕೆ.ಬಿ.ಸಿ ಆರೋಗ್ಯ ಸೇವೆಯನ್ನು ಒದಗಿಸಿಕೊಟ್ಟಿದ್ದಾರೆ. ಆಸ್ಪತ್ರೆ ಉದ್ಘಾಟನೆಯ ಸಂದರ್ಭದಲ್ಲಿ ನಾನು ಬರಲಾಗಿರಲಿಲ್ಲ. ಇಂದು ಬಂದು ಅಪೂರ್ವ ಆಸ್ಪತ್ರೆಯನ್ನು ನೋಡಿದ್ದೇನೆ. ಇದು ಉಳಿದು ಬೆಳೆಯಬೇಕು. ಸರ್ವರ ಸಂತೋಷದ ಮನೆಯಾಗಬೇಕೆಂದು ಕೋಡಿಮಠದ ಸ್ವಾಮೀಜಿ ಆಶಿಸಿದರು.
ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗೆ ಇನ್ನೂ 8 ತಿಂಗಳ ಕಾಲಾವಕಾಶವಿದೆ. ಚುನಾವಣೆಯ ಹೊತ್ತಿಗೆ ಎಲ್ಲಾ ರಾಜಕೀಯ ಪಕ್ಷಗಳೂ ಛಿದ್ರಗೊಳ್ಳಲಿವೆ ಎಂದು ಶ್ರೀಗಳು ಭವಿಷ್ಯ ನುಡಿದರು.