ಹೆದ್ದಾರಿ ಕಾಮಗಾರಿ ಕಮೀಷನ್ ಆರೋಪ: ಜೆಡಿಎಸ್ ಶಾಸಕರಿಗೆ ಸವಾಲ್ ಹಾಕಿದ ಸುಮಲತಾ
ಮಂಡ್ಯ, ಸೆಪ್ಟೆಂಬರ್ 13: ರಾಜಕಾರಣಿಗಳ ಆಣೆ-ಪ್ರಮಾಣ ವಿಚಾರ ಮಂಡ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕಮಿಷನ್ ಪಡೆದಿರುವ ಆರೋಪದ ವಿಚಾರವಾಗಿ ಜೆಡಿಎಸ್ ಶಾಸಕರು ದಾಖಲೆಗಳೊಂದಿಗೆ ಬರಲಿ, ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ಎದುರು ಆಣೆ-ಪ್ರಮಾಣ ಮಾಡೋಣ. ಆಗ ಯಾರು ನಿಜ ಹೇಳುತ್ತಿದ್ದಾರೆ. ಯಾರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ಜೆಡಿಎಸ್ ಶಾಸಕರಿಗೆ ಬಹಿರಂಗ ಪಂಥಾಹ್ವಾನ ನೀಡಿದರು.
ಸಂಸದೆ ಸುಮಲತಾ ಬರಿ ಫೋಸ್ ಕೊಡುವ ಕೆಲಸ ಮಾಡ್ತಾರೆ. ಸಂಸದರನ್ನು ಜನರು ಮರೆತುಬಿಡುತ್ತಾರೆ ಎಂದು ಮಂಡ್ಯಕ್ಕೆ ಬರುತ್ತಾರೆ. ಚಿಲ್ಲರೆ ಆರೋಪ ಮಾಡೋದನ್ನ ಬಿಟ್ಟು ಕೆಲಸ ಮಾಡಿ ಎಂದು ಸಂಸದೆ ಸುಮಲತಾ ವಿರುದ್ದ ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಅನ್ನದಾನಿ ಕಿಡಿ ಕಾರಿದ್ದರು. ಸಂಸದೆ ಸುಮಲತಾ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ನಾವು ಯಾರ ಅತ್ರನೂ ಆ ಕೆಲಸ ಮಾಡ್ತಿಲ್ಲ. ಅವರು ಕಮಿಷನ್ ಪಡುತ್ತಿರಬೇಕು ಅನ್ನಿಸುತ್ತದೆ ಎಂದು ಆರೋಪಿಸಿದ್ದರು.
ಈ ಕುರಿತು ತಾಲೂಕಿನ ಬಿ.ಹೊಸೂರು ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ನಾನು ನನ್ನ ಎಂಪಿ ಪ್ರಮಾಣಪತ್ರ ತರುತ್ತೇನೆ. ಅವರು ಎಂಎಲ್ಎ ಪ್ರಮಾಣಪತ್ರ ತೆಗೆದುಕೊಂಡು ಮೇಲುಕೋಟೆಗೆ ಬರಲಿ. ಅಲ್ಲೇ ಆಣೆ-ಪ್ರಮಾಣ ಮಾಡಿ ಮಾತನಾಡೋಣ. ಧೈರ್ಯವಿದ್ದರೆ ಮಾಧ್ಯಮದವರ ಮುಂದೆಯೂ ಬರಲಿ. ದಾಖಲೆಗಳನ್ನು ತರುವುದಕ್ಕೆ ಕಮಿಷನ್ ಕೊಟ್ಟಿರುವವರೇ ಸಿದ್ಧರಾಗಿದ್ದಾರೆ. ಆದರೆ ನಾನೇ ಸುಮ್ಮನಿರಿ. ಇಲ್ಲದಿದ್ದರೆ ನಿಮ್ಮ ಗುತ್ತಿಗೆ ಕೆಲಸಗಳೆಲ್ಲವೂ ಹಾಳಗುತ್ತವೆ ಎಂದು ಹೇಳಿದ್ದೇನೆ. ಆದರೂ ಅವರು ನಾವು ಬರುತ್ತೇವೆ, ನಿಮಗೆ ಬೆಂಬಲವಾಗಿರುತ್ತೇವೆ ಎಂದು ಗುತ್ತಿಗೆದಾರರ ಸಂಘ ತಿಳಿಸಿರುವುದಾಗಿ ಹೇಳಿದ್ದಾರೆ.

ಧೈರ್ಯ ಇದ್ದರೆ ನನ್ನ ಮುಂದೆ ಮಾತನಾಡಲಿ
ಅಂಬರೀಶ್ ಅವರನ್ನು ವಸತಿ ಖಾತೆ ಸಚಿವ ಸ್ಥಾನದಿಂದ ಏಕೆ ತೆಗೆದುಹಾಕಿದರು ಎಂಬ ಬಗ್ಗೆ ಸಿದ್ದರಾಮಯ್ಯನವರನ್ನು ಕೇಳಲಿ ಎಂಬ ರವೀಂದ್ರ ಶ್ರೀಕಂಠಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಮಲತಾ, " ಅಂಬರೀಶ್ ಈಗ ನಮ್ಮ ಮುಂದೆ ಇಲ್ಲ. ಅವರು ಜಿಲ್ಲೆಗೆ ನೀಡಿದ ಕೊಡುಗೆ ಏನೆಂಬುದು ಜನರಿಗೆ ಗೊತ್ತಿದೆ. ವೈದ್ಯಕೀಯ ಕಾಲೇಜು ಬರುವುದಕ್ಕೆ ಅವರು ಕಾರಣ. ಮಹಿಳಾ ವಿಶ್ವವಿದ್ಯಾನಿಲಯಕ್ಕೆ 18 ಎಕರೆ ಜಾಗ ಕೊಡಿಸಿ ಕಟ್ಟಡ ಕಟ್ಟಿಸಿದ್ದಾರೆ. ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಈಗ ಅಂಬರೀಶ್ ಇಲ್ಲ, ನಾನಿದ್ದೇನೆ. ಧೈರ್ಯವಿದ್ದವರು ನನ್ನ ಮುಂದೆ ಬಂದು ಮಾತನಾಡಲಿ. ಅಂಬರೀಶ್ ಏನೆಂಬುದು ನನಗೆ ಗೊತ್ತು. ನಾನೇಕೆ ಸಿದ್ದರಾಮಯ್ಯನವರ ಬಳಿ ಹೋಗಿ ಕೇಳಲಿ. ಬೇಕಿದ್ದರೆ ಅವರೇ ಹೋಗಿ ಕೇಳಲಿ ಎಂದು ತಿರುಗೇಟು ನೀಡಿದರು.

ಮಾನ ಇಲ್ಲದವರ ಮೇಲೆ ಯಾವ ಮೊಕದ್ದಮೆ ಹಾಕೋದು?
ಅಂಬರೀಶ್ ಬಗ್ಗೆ ಮಾತನಾಡಲು ಯೋಗ್ಯತೆ ಇರಬೇಕು. ಆರೋಪ ಮಾಡುವವರು ಅಂಬರೀಶ್ ಕಾಲಿನ ಧೂಳಿಗೂ ಸಮಾನರಲ್ಲ ಎಂದು ಕಿಡಿಕಾರಿದ ಸುಮಲತಾ, ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ, ಮಾನ ಇದ್ದವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬಹುದು. ಮಾನ ಇಲ್ಲದವರ ಮೇಲೆ ಏನು ಹಾಕೋದು ಎಂದು ಪ್ರಶ್ನಿಸಿದರು.

ಅಂಬರೀಶ್ ಬಗ್ಗೆ ಮಾತನಾಡುವುದು ಹೇಡಿಗಳ ಲಕ್ಷಣ
ನಾನು ಬೇರೆ, ಅವರ ರೀತಿ ಕದ್ದು ಮುಚ್ಚಿ ಕೆಲಸ ಮಾಡುವುದಿಲ್ಲ. ನಾನು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇನೆ. ಕೆಲವರು ಅಂಬರೀಶ್ ವಿರುದ್ಧ ಆರೋಪ-ಟೀಕೆ ಮಾಡುತ್ತಿದ್ದಾರೆ. ಅದು ಅವರ ಅಭಿಮಾನಿಗಳಿಗೆ ನೋವು ತಂದಿದೆ. ನಮ್ಮ ನಡುವೆ ಇಲ್ಲದವರು ಸಮರ್ಥನೆ ಮಾಡಿಕೊಳ್ಳಲು ಇರುವುದಿಲ್ಲ. ಅಂತಹವರ ಬಗ್ಗೆ ಮಾತನಾಡುವುದು ಅವರ ವ್ಯಕ್ತಿತ್ವ-ಸಂಸ್ಕೃತಿಯನ್ನು ತೋರಿಸುತ್ತದೆ. ಅಂಬರೀಶ್ ಬಗ್ಗೆ ಮಾತನಾಡುವುದು ಹೇಡಿಗಳ ಲಕ್ಷಣ. ಈಗ ನಾನು ಇದ್ದೇನೆ. ನನ್ನ ಬಗ್ಗೆ ಮಾತನಾಡಿ. ಇವರ ಮಾತುಗಳು ಜನರಿಗೆ ಇಷ್ಟ ಆಗುವುದಿಲ್ಲ. ಸುಮ್ಮನೆ ಬರುತ್ತಾರೆ, ಸುಮ್ಮನೆ ಹೋಗುತ್ತಾರೆ ಅಂತಾರೆ. ನಾನು ಎಷ್ಟು ಶ್ರಮ ಹಾಕಿದ್ದೇನೆ ಎಂದು ನನ್ನ ಕೆಲಸ ಹೇಳುತ್ತೆ ಎಂದು ಛಾಟಿ ಬೀಸಿದರು.

ಜನರು ಕೊಟ್ಟ ಗೌರವ ಉಳಿಸಿಕೊಳ್ಳಿ
ಮಳವಳ್ಳಿ ಸೊಸೆ ಅಂತ ಹೇಳಿ 30 ಸಾವಿರ ವೋಟ್ ಲೀಡ್ ತೆಗೆದುಕೊಂಡಿರಿ. ಅದೇ ರೀತಿ ಸೊಸೆ ಎಂದು ಜನ ಕೊಟ್ಟ ಗೌರವವನ್ನು ಉಳಿಸಿಕೊಳ್ಳಿ. ಮಾಜಿ ಪ್ರಧಾನಿ ದೇವೇಗೌಡರು ಕೊಟ್ಟ ರೈಲು ಯೋಜನೆ ದಯಮಾಡಿ ಕೈ ಮುಗಿಯುತ್ತೇವೆ ಮಳವಳ್ಳಿಗೆ ತಂದು ಕೊಡಿ. ನೀವು ಹೇಳುವುದ್ದಕ್ಕೆ ನಾವು ಬದ್ಧರಾಗಿರುತ್ತೇವೆ. ಆದರೆ ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಚಿಲ್ಲರೆ ಆರೋಪ ಮಾಡುವುದನ್ನ ಬಿಟ್ಟು ಕೆಲಸ ಮಾಡಿ. ನೀವೂ ಸಂಸದರಾಗಿದ್ದು, ಸ್ವಲ್ಪ ತೂಕವಾಗಿ ಇರುವುದನ್ನ ಕಲಿಯಿರಿ. ನಾವು ಮಾಡಿರುವ ಕೆಲಸಗಳಿಗೆ ನಾಲ್ಕು ತಿಂಗಳಿಗೆ ಬಂದು ಗುದ್ದಲಿ ಅಲ್ಲಾಡಿಸುವುದು ಬೇಡ. ಪರಿಶೀಲನೆ ಮಾಡುತ್ತೇನೆ ಅನ್ನುವುದಕ್ಕೆ ನೀವೇನೂ ಟೆಕ್ನಿಕಲ್ ಎಕ್ಸಪರ್ಟಾ? ಎಂದು ಕಿಡಿ ಮಳವಳ್ಳಿ ಶಾಸಕ ಕಿಡಿಕಾರಿದ್ದರು.











Click it and Unblock the Notifications