ಮಂಡ್ಯ: ಜೆಪಿ ನಡ್ಡಾ ಭೇಟಿ ಬಳಿಕ ಮೌನ ಮುರಿದ ಸುಮಲತಾ!
ಮಂಡ್ಯ, ಮಾರ್ಚ್ 18: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರದಲ್ಲಿ ಮಂಡ್ಯ ಸಹ ಒಂದು. ಈಗಾಗಲೇ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿದ್ದು, ಮೊದಲ ಹಂತದಲ್ಲಿ ಏಪ್ರಿಲ್ 26ರಂದು ಮಂಡ್ಯದಲ್ಲಿ ಚುನಾವಣೆ ನಡೆಯಲಿದೆ.
ಮಂಡ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು) ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಜೆಡಿಎಸ್ಗೆ ಸಿಕ್ಕಿದೆ. ಅಭ್ಯರ್ಥಿಯನ್ನು ಮಾರ್ಚ್ 25ಕ್ಕೆ ಘೋಷಣೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.

ಕ್ಷೇತ್ರದ ಹಾಲಿ ಸಂಸದೆ ಸುಮಲತಾ. ಮೈತ್ರಿಯ ಕಾರಣ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಅವರ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ. ಅವರು ಚಿಕ್ಕಬಳ್ಳಾಪುರದಿಂದ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಇನ್ನೂ ಬಿಜೆಪಿ ಚಿಕ್ಕಬಳ್ಳಾಪುರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಜೆ. ಪಿ. ನಡ್ಡಾ ಭೇಟಿ: ಸೋಮವಾರ ದೆಹಲಿಯಲ್ಲಿ ಸುಮಲತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಭೇಟಿ ಮಾಡಿದರು. ಮಂಗಳವಾರ ಅಮಿತ್ ಶಾ ಭೇಟಿಗಾಗಿ ಸಮಯವನ್ನು ಪಡೆದಿದ್ದಾರೆ. ಜೆ. ಪಿ. ನಡ್ಡಾ ಭೇಟಿ ಬಳಿಕ ಮಾಧ್ಯಮಗಳ ಜೊತೆ ಸುಮಲತಾ ಮಾತನಾಡಿದರು. ಅದರ ಪ್ರಮುಖ ಅಂಶಗಳು ಹೀಗಿವೆ.
* ಕಳೆದ ಚುನಾವಣೆಯಲ್ಲಿ ಅಂಬರೀಶ್ ಬೆಂಬಲಿಗರಿಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದೆ. ಬೆಂಬಲಿಗರ ಮನವಿಯಂತೆಯೇ ಬಿಜೆಪಿಗೆ ಬಾಹ್ಯ ಬೆಂಬಲ ಘೋಷಣೆ ಮಾಡಿದೆ.
* ಬಿಜೆಪಿ-ಜೆಡಿಎಸ್ ಮೈತ್ರಿಯ ಸಂದರ್ಭದಲ್ಲಿ ಮಂಡ್ಯ ಬಿಜೆಪಿಗೆ ಇರಲಿ ಎಂದು ನಾನು ಹೇಳಿದ್ದೆ. ನಾನು ನನ್ನ ಸಂಸದ ಸ್ಥಾನದ ಅವಧಿ ಮುಕ್ತಾಯಗೊಂಡ ಬಳಿಕ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ.
* ನಾನು ಚಿಕ್ಕಬಳ್ಳಾಪುರದಿಂದ ಈ ಬಾರಿಯ ಚುನಾವಣಾ ಕಣಕ್ಕಿಳಿಯುತ್ತೇನೆ ಎಂಬುದು ಕೇವಲ ಉಹಾಪೋಹ ಮಾತ್ರ. ಅಮಿತ್ ಶಾ ಭೇಟಿ ಬಳಿಕ ಮುಂದಿನ ತೀರ್ಮಾನವನ್ನು ನಾನು ಕೈಗೊಳ್ಳುತ್ತೇನೆ.
* ಬೆಂಬಲಿಗರ ಜೊತೆ ಸಭೆ ನಡೆಸಿದ ಬಳಿಕ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇನೆ. ಮಂಡ್ಯ ಜೆಡಿಎಸ್ ಪಕ್ಷಕ್ಕೆ ಎಂದು ಈಗಾಗಲೇ ಪಕ್ಷದ ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಇಂದು ಸಂಜೆ ಸಭೆ ನಡೆಯಲಿದ್ದು, ಬಳಿಕ ಎಲ್ಲವೂ ತೀರ್ಮಾನವಾಗಲಿದೆ.
* ನನ್ನ ಜೊತೆ ಸಂಧಾನ ನಡೆಸುವ ಯಾವುದೇ ಪ್ರಯತ್ನ ಆಗಿಲ್ಲ. ಬೆಂಬಲಿಗರನ್ನು ಬಿಟ್ಟು ನಾನು ಯಾವುದೇ ತೀರ್ಮಾನವನ್ನು ಕೈಗೊಳ್ಳಲ್ಲ. ಮಂಗಳವಾರದ ಬಳಿಕ ಮಂಡ್ಯಕ್ಕೆ ಭೇಟಿ ನೀಡುತ್ತೇನೆ. ಬೆಂಬಲಿಗರ ಜೊತೆ ಸಭೆ ನಡೆಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ.
* ಅಮಿತ್ ಶಾ ಕಛೇರಿಯಿಂದ ಬಂದು ಭೇಟಿಯಾಗುವಂತೆ ಕರೆ ಬಂದಿದೆ. ಮಂಗಳವಾರ ಸಮಯ ಸಿಕ್ಕರೆ ಭೇಟಿಯಾಗುತ್ತೇನೆ. ಬಿಜೆಪಿ ಹೈಕಮಾಂಡ್ ನಾಯಕರ ತೀರ್ಮಾನಕ್ಕೆ ನಾನು ಬದ್ಧಳಾಗಿರುತ್ತೇನೆ ಎಂದುದ ಸುಮಲತಾ ಹೇಳಿದ್ದಾರೆ.
2019ರ ಚುನಾವಣೆಯಲ್ಲಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾಗೆ ಬಿಜೆಪಿ ಬೆಂಬಲ ಘೋಷಣೆ ಮಾಡಿತ್ತು. ಅಭ್ಯರ್ಥಿಯನ್ನು ಸಹ ಕಣಕ್ಕಿಳಿಸಿರಲಿಲ್ಲ. ಈಗ ಸುಮಲತಾ ಬಿಜೆಪಿಗೆ ಬಾಹ್ಯ ಬೆಂಬಲ ಘೋಷಣೆ ಮಾಡಿದ್ದಾರೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಯ ಕಾರಣ ಮಂಡ್ಯ ಜೆಡಿಎಸ್ ಪಾಲಾಗಿದೆ.
ಸೋಮವಾರ ಇತ್ತ ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ಜೆಡಿಎಸ್ ಪಕ್ಷ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಮಂಡ್ಯ, ಕೋಲಾರ ಮತ್ತು ಹಾಸನ ಕ್ಷೇತ್ರ ಪಕ್ಷಕ್ಕೆ ಸಿಕ್ಕಿದೆ" ಎಂದರು.
ಕಳೆದ ವಾರ ಮಂಡ್ಯದಲ್ಲಿ ಎಚ್. ಡಿ. ಕುಮಾರಸ್ವಾಮಿ ಅಭ್ಯರ್ಥಿ ಆಯ್ಕೆ ಕುರಿತು ಸ್ಥಳೀಯ ನಾಯಕರ ಜೊತೆ ಸಭೆಯನ್ನು ನಡೆಸಿದರು. ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳಿವೆ. ಅಭ್ಯರ್ಥಿಯನ್ನು ಮಾರ್ಚ್ 25ಕ್ಕೆ ಘೋಷಣೆ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications