ಮಂಡ್ಯ; ಮಾರಮ್ಮ ದೇಗುಲದ ಪ್ರಸಾದ ಸೇವಿಸಿ 70ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಮಂಡ್ಯ, ಅಕ್ಟೋಬರ್ 28: ಮಾರಮ್ಮನ ದೇವಾಲಯದಲ್ಲಿ ವಿತರಿಸಿದ್ದ ಪುಳಿಯೋಗರೆ ಪ್ರಸಾದ ಸೇವಿಸಿ 70ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದಲ್ಲಿನ ಮಾರಮ್ಮನ ದೇವಾಲಯದಲ್ಲಿ ಅಕ್ಟೋಬರ್ 27ರ ರಾತ್ರಿ ಪ್ರಸಾದದ ರೂಪದಲ್ಲಿ ಪುಳಿಯೋಗರೆಯನ್ನು ದೇವಸ್ಥಾನಕ್ಕೆ ಬಂದಿದ್ದ ಭಕ್ತಾದಿಗಳಿಗೆ ಹಂಚಲಾಗಿತ್ತು. ಈ ಪ್ರಸಾದ ಸೇವಿಸಿ ನಂತರ ಸುಮಾರು ಎಪ್ಪತ್ತಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಸಾದ ಸೇವಿಸಿದ ನಂತರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಅಸ್ವಸ್ಥಗೊಂಡ 70ಕ್ಕೂ ಹೆಚ್ಚು ಜನರನ್ನು ಕೂಡಲೇ ಮಳವಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹಲಗೂರು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಪುಳಿಯೋಗರೆ ಪ್ರಸಾದದಲ್ಲಿ ಏನು ಬೆರೆತಿತ್ತು? ಫುಡ್ ಪಾಯ್ಸನ್ ನಿಂದ ಹೀಗೆ ಆಗಿರಬಹುದೇ ಅಥವಾ ಆಹಾರದಲ್ಲಿ ವಿಷಕಾರಿ ಅಂಶಗಳು ಇದ್ದವೇ ಎಂಬ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ.












Click it and Unblock the Notifications