ದೆವ್ವ ಕರೆದರೆ ಹೋಗಲು ಆಗುತ್ತಾ..?: ಸುಮಲತಾ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಕಿಡಿ
ಮೈಸೂರು, ಅಕ್ಟೋಬರ್ 19: "ಮಂಡ್ಯ ಸಂಸದೆ ಸುಮಲತಾ ಅವರ ವಿರುದ್ಧ ತಿರುಗಿ ಜನರು ಬಿದ್ದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ಮಂಡ್ಯ ಜಿಲ್ಲೆ ಜೆಡಿಎಸ್ ಶಾಸಕರನ್ನು ಆಣೆ ಪ್ರಮಾಣ ಮಾಡಲು ಬರುವಂತೆ ಸಂಸದೆ ಸುಮಲತಾ ಆಹ್ವಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಸುಮಲತಾ ಅವರು ಕರೆದ ತಕ್ಷಣ ಹೋಗಲಾಗುವುದಿಲ್ಲ. ಉತ್ತಮರು ಕರೆದರೆ ಹೋಗಬಹುದು, ದೆವ್ವ ಕರೆದರೆ ಹೋಗಲು ಆಗುತ್ತಾ..? ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಲು ಸಾಧ್ಯವೇ..?," ಎಂದು ಸುಮಲತಾ ವಿರುದ್ಧ ಲೇವಡಿ ಮಾಡಿದ್ದಾರೆ.
"ನಾವು ದೇವರನ್ನು ನಂಬಿರುವ ಜನ, ಅದರಲ್ಲೂ ಜೆಡಿಎಸ್ ಪಕ್ಷದ ಶಾಸಕರು ದೇವರನ್ನು ನಂಬಿರುವ ಜನ, ಸುಮಲತಾ ಕರೆಯುತ್ತಾರೆ ಎಂದು ದೇವಸ್ಥಾನಕ್ಕೆ ಹೋಗಲು ಆಗುತ್ತದಾ..? ನಾವೆಲ್ಲಾ ದೇವಸ್ಥಾನಕ್ಕೆ ದಿನಾ ಹೋಗುತ್ತೇವೆ. ನ್ಯಾಯವಾಗಿ, ಧರ್ಮವಾಗಿ ಪೂಜೆ ಮಾಡುತ್ತೇವೆ. ಇವರು ಕರೆದ ತಕ್ಷಣ ಹೋಗಲಾಗುವುದಿಲ್ಲ," ಎಂದರು.

"ಸಂಸದೆ ಸುಮಲತಾ ಅವರು ಹೋಟೆಲ್ನಲ್ಲಿ ಕುಳಿತದ್ದು ಯಾಕೆ ಎನ್ನುವುದಕ್ಕೆ ಮೊದಲು ಉತ್ತರ ಕೊಡಬೇಕು. ಒಂದು ವೇಳೆ ಅವರು ಕೂತಿಲ್ಲ ಎಂದು ಹೇಳಿದರೆ. ನಾವು ವಿಡಿಯೋ ಕೊಡುತ್ತೇವೆ. ಅದರ ಬಗ್ಗೆ ಅವರು ಸ್ಪಷ್ಟನೆ ಕೊಡಬೇಕು. ಯಾಕಾಗಿ ಹೋಗಿದ್ದರು, ವ್ಯಾಪಾರಕ್ಕೆ ಹೋಗಿದ್ದಾರಾ..? ರೈತರ ಜಮೀನುಗಳನೆಲ್ಲಾ ವ್ಯಾಪಾರ ಮಾಡಿ ಮೋಸ ಮಾಡಿದ್ದರಲ್ಲಾ ಈಗ, ಹೆಚ್ಚು ಕಮ್ಮಿ ನನ್ನ ಜಿಲ್ಲೆಯಲ್ಲಿ ನೂರಾರು ಕೋಟಿ ದುರುಪಯೋಗ ಆಗಿದೆ," ಎಂದು ಆರೋಪಿಸಿದರು.
'ಇನ್ನು ಎಲ್ಲೆಲ್ಲಿ ಅವಕಾಶ ಸಿಗುತ್ತೆ ಅಲ್ಲಿ, ಯಾರ್ಯಾರು ಗಿರಾಕಿಗಳು ಸಿಗುತ್ತಾರೆ ಅವರಿಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ದಾಖಲಾತಿಗಳನ್ನು ಸಂಗ್ರಹಿಸುತ್ತಿದ್ದೇವೆ. ಜಿಲ್ಲಾಡಳಿತ ನನಗಿನ್ನೂ ಪೂರ್ಣ ಪ್ರಮಾಣದ ದಾಖಲಾತಿ ಕೊಟ್ಟಿಲ್ಲ. ಐದು ಸಾವಿರದಲ್ಲಿ ಮೂರು ಸಾವಿರ ದಾಖಲಾತಿಯ ವಿಚಾರಗಳು ನನಗೆ ತಲುಪಿದೆ. ಇನ್ನೂ ಎರಡು ಸಾವಿರ ದಾಖಲಾತಿಯ ಪ್ರಿಂಟ್ ತೆಗೆಯುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಕನರ್ವಷನ್ ಆಗದೇ ಇರುವುದು ಹಾಗೂ ನಕಲಿ ದಾಖಲಾತಿ ಸಿದ್ಧಪಡಿಸಿ ನೂರಾರು ಕೋಟಿ ರೂಪಾಯಿ ಜಮೀನು ವಂಚನೆ ಮಾಡಿದ್ದಾರೆ. ಇವರ ಅನುಯಾಯಿಗಳು, ದಿನ ಬೆಳಗ್ಗೆ ಮಂಡ್ಯದಲ್ಲಿ ಇವರ ಜೊತೆ ನಿಲ್ಲುತ್ತಾರಲ್ಲ ಅವರೆಲ್ಲರೂ ಸಾಮೂಹಿಕವಾಗಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ," ಎಂದು ಸಂಸದೆ ಸುಮಲತಾ ಬೆಂಬಲಿಗರ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ.
ಮಂಡ್ಯ ಸಂಸದರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಕಮಿಷನ್ ಪಡೆದಿದ್ದಾರೆ ಎನ್ನುವ ಜೆಡಿಎಸ್ ಆರೋಪಕ್ಕೆ ಸಂಸದೆ ಸುಮಲತಾ ತಿರುಗೇಟು ನೀಡಿ ಶಾಸಕರಿಗೆ ಆಣೆ ಪ್ರಮಾಣಕ್ಕೆ ಪಂಥಾಹ್ವಾನ ನೀಡಿದ್ದರು.
"ಚುನಾವಣೆಗಳಲ್ಲಿ ಸೋತು ಸೋತು ಕೊನೆಗೊಮ್ಮೆ ಗೆದ್ದು ಬಂದಿದ್ದಾರೆ. ಇದೇ ಕೊನೆ ಎಂದು ತೀರ್ಮಾನಕ್ಕೆ ಬಂದಿರುವಾಗ ಯಾರು ಏನು ಮಾಡಲು ಸಾಧ್ಯ. ನಾವು ಮಾತನಾಡಬಾರದು. ನಮ್ಮ ಕೆಲಸಗಳು ಮಾತನಾಡಬೇಕು. ಅದು ಬಿಟ್ಟು ಗಾಳಿಯಲ್ಲಿ ಗುಂಡು ಹಾರಿಸುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಯಾರು ಏನು ಬೇಕಾದರೂ ಹೇಳಬಹುದು," ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಪರೋಕ್ಷವಾಗಿ ಸುಮಲತಾ ಟಾಂಗ್ ನೀಡಿದ್ದರು.












Click it and Unblock the Notifications