ಮಂಡ್ಯ: ಕಾಲು ಕತ್ತರಿಸಿ ಪತ್ನಿ ಕೈಗೆ ಕೊಟ್ಟ ಪ್ರಕರಣ, ಮಿಮ್ಸ್ ನಿರ್ದೇಶಕ ಹೇಳಿದ್ದೇನು?
ಮಂಡ್ಯ, ಸೆಪ್ಟೆಂಬರ್ 7: ಒಂದಿಲ್ಲೊಂದು ಎಡವಟ್ಟುಗಳನ್ನು ಮಾಡುತ್ತಲೇ ಸುದ್ಧಿಯಾಗುತ್ತಿರುವ ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅನಾರೋಗ್ಯಕ್ಕೆ ಒಳಗಾಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿಗೆ ನೀಡುವ ಮೂಲಕ ಸಿಬ್ಬಂದಿಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಗ್ಯಾಂಗ್ರೀನ್ಗೆ ಒಳಗಾಗಿದ್ದ ತಾಲೂಕಿನ ಕೀಲಾರ ಗ್ರಾಮದ ಪ್ರಕಾಶ್ ಎಂಬುವವರು ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಗ್ಯಾಂಗ್ರೀನ್ಗೆ ಒಳಗಾಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದರು. ಅದಾದ ಬಳಿಕ ಆಸ್ಪತ್ರೆ ಸಿಬ್ಬಂದಿ ಕತ್ತರಿಸಲಾಗಿದ್ದ ಕಾಲನ್ನು ತಂದು ಪ್ರಕಾಶ್ ಅವರ ಪತ್ನಿ ಭಾಗ್ಯಮ್ಮ ಅವರಿಗೆ ನೀಡಿದ್ದಾರೆ. ಇದನ್ನು ಕಂಡು ತಬ್ಬಿಬ್ಬಾದ ಭಾಗ್ಯಮ್ಮ ಏನು ಮಾಡಬೇಕೆಂದು ತೋಚದೆ ಗಂಡನ ಕಾಲನ್ನು ಹಿಡಿದು ಕಣ್ಣೀರಿಟ್ಟಿದ್ದಾರೆ.
ಮಳೆಯಿಂದ ಮಂಡ್ಯ ಜಿಲ್ಲೆಯಲ್ಲಿ 750 ಕೋಟಿ ರೂ. ಹಾನಿ, ಹಂತ ಹಂತವಾಗಿ ಪರಿಹಾರ
ಆಸ್ಪತ್ರೆಗೆ ದಾಖಲಾಗಿ ಮೂರು ದಿನಗಳ ಬಳಿಕ ಕಾಲನ್ನು ಕತ್ತರಿಸಿದ ಆಸ್ಪತ್ರೆ ಸಿಬ್ಬಂದಿ, ಬಳಿಕ ಇದನ್ನು ಎಲ್ಲಾದರೂ ತೆಗೆದುಕೊಂಡು ಹೋಗಿ ಮಣ್ಣು ಮಾಡುವಂತೆ ಭಾಗ್ಯಮ್ಮನಿಗೆ ಹೇಳಿದ್ದರೆನ್ನಲಾಗಿದೆ. ತಾವೇ ಮಣ್ಣು ಮಾಡಿದರೆ ಸಾವಿರಾರು ರೂಪಾಯಿ ನೀಡಬೇಕು ಎಂದು ಆಸ್ಪತ್ರೆಯವರು ಕೇಳಿದ್ದಾರೆ ಎಂದು ಭಾಗ್ಯಮ್ಮ ಆರೋಪಿಸಿದ್ದು, ಮಿಮ್ಸ್ ಸಿಬ್ಬಂದಿ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಡಿ ಗ್ರೂಪ್ ನೌಕರನಿಗೆ ನೋಟೀಸ್, ತನಿಖೆಗೆ ಆದೇಶ
ಮಿಮ್ಸ್ ನಿರ್ದೇಶಕ ಡಾ. ಬಿ.ಜೆ. ಮಹೇಂದ್ ಪ್ರತಿಕ್ರಿಯೆ ನೀಡಿ,"ರೋಗಿಯ ಮೊಣಕಾಲಿನ ಕೆಳ ಭಾಗವನ್ನು ತೆಗೆಯಲಾಗಿತ್ತು. ಅದನ್ನು ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ಆ್ಯಂಡ್ ಆಡ್ಲಿಂಗ್ ರೂಲ್ಸ್ ಪ್ರಕಾರ ಕೊಡಬಾರದು. ಡಿಸ್ಪೋಸಲ್ ಅಗ್ರಿಮೆಂಟ್ ಮಾಡಿಕೊಂಡಿರುವವರ ಮೂಲಕ ಡಿಸ್ಪೋಸ್ ಮಾಡಿಸಬೇಕು. ದುರಾದೃಷ್ಟಾವಶಾತ್ ತೆಗೆದ ಕಾಲಿನ ಭಾಗವನ್ನು ರೋಗಿಯ ಪತ್ನಿಗೆ ಡಿ ಗ್ರೂಪ್ ಸಿಬ್ಬಂದಿ ಕೊಟ್ಟಿದ್ದಾರೆ. ಆಕೆಗೆ ಗಾಬರಿಯಾಗಿ ಕಣ್ಣೀರು ಹಾಕಿದ್ದಾರೆ. ಇದು ನನ್ನ ಗಮನಕ್ಕೆ ಬಂದ ತಕ್ಷಣ ವಾಪಸ್ ಪಡೆಯಲಾಗಿದೆ. ನಿಮಯಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತದೆ" ಎಂದು ತಿಳಿಸಿದರು.
ಪ್ರಸ್ತುತ ಘಟನೆ ಬಗ್ಗೆ 24 ಗಂಟೆಯೊಳಗೆ ವರದಿ ನೀಡುವಂತೆ ಸರ್ಜರಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ಆಸ್ಪತ್ರೆಯ ಯಾವುದೇ ತ್ಯಾಜ್ಯವನ್ನು ರೂಲ್ಸ್ ಪ್ರಕಾರವೇ ವಿಲೇವಾರಿ ಮಾಡುವಂತೆ ಸುತ್ತೋಲೆ ಹೊರಡಿಸಿದ್ದೇನೆ. ಕಾನೂನು ಬಾಹಿರವಾಗಿ ವಿಲೇವಾರಿ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ವಿಲೇವಾರಿ ಮಾಡಲು ಹಣ ಕೇಳಿರುವ ಬಗ್ಗೆ ಸಂಬಂಧಿಕರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.