ಮಂಡ್ಯದ ರೌಡಿ ಶೀಟರ್ ಅಶೋಕ್ ಪೈ ಬಂಧನ
ಮಂಡ್ಯ, ಫೆಬ್ರವರಿ. 13 : ರೌಡಿ ಜಡೇಜಾರವಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲ್ ಸೇರಿ ಖುಲಾಸೆಗೊಂಡು ಬಂದಿದ್ದ ರೌಡಿ ಶೀಟರ್ ಅಶೋಕ್ ಪೈ ಕಪ್ಪು ಹಣ ಬಿಳಿ ಮಾಡುವ ಸಲುವಾಗಿ ಹಣ ಪಡೆದು ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಜೈಲು ಸೇರುವಂತಾಗಿದೆ.
ಮಂಡ್ಯದ ರಾಘವೇಂದ್ರ ಎಂಬಾತ ತನ್ನ ಮನೆ ಮಾರಿದ ವೇಳೆ ಬಂದ ಲಕ್ಷಾಂತರ ರೂ. ಹಳೆಯ 500 ಮತ್ತು 1000 ನೋಟುಗಳನ್ನು ಬದಲಾಯಿಸಿ ಕೊಡಲು ಅಶೋಕ್ ಪೈಗೆ ನೀಡಿದ್ದನು. ಕಮೀಷನ್ ಆಧಾರದಲ್ಲಿ ವ್ಯವಹಾರ ಕುದುರಿಸಿದ ಅಶೋಕ್ ಪೈ ಬಳಿಕ ಹಣವನ್ನು ಹಿಂತಿರುಗಿಸದೆ ಎಳ್ಳುನೀರು ಬಿಟ್ಟಿದ್ದನು. [ಮಂಡ್ಯದ ಅಶೋಕ್ ಪೈ ಹತ್ಯೆ ಯತ್ನ ಪ್ರಕರಣದ 11 ಆರೋಪಿಗಳ ಬಂಧನ]

ಇದರಿಂದ ರೊಚ್ಚಿಗೆದ್ದ ರಾಘವೇಂದ್ರ ಕಳೆದ ಫೆಬ್ರವರಿ 6ರಂದು ಮಧ್ಯ ರಾತ್ರಿ 10 ಮಂದಿ ಸಹಚರರೊಂದಿಗೆ ಅತ್ತೆ ಮನೆಯ ಮೇಲೆಯಲ್ಲಿ ಮಲಗಿದ್ದ ಅಶೋಕ್ ಪೈ ಮೇಲೆ ದಾಳಿ ನಡೆಸಿ ಹತ್ಯೆಗೆ ಯತ್ನ ನಡೆಸಲಾಗಿತ್ತು.
ಈ ವೇಳೆ ಆತ ಮನೆಯ ಅಟ್ಟದ ಮೇಲಿಂದ ಛಾವಣಿಯ ಕಲ್ನಾರ್ ಶೀಟ್ ಒಡೆದು ಸಿನಿಮೀಯ ಮಾದರಿಯಲ್ಲಿ ಪರಾರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದನು.
ಮಧ್ಯರಾತ್ರಿ ನಡೆದ ಘಟನೆಯಿಂದ ಎಚ್ಚರಗೊಂಡ ಸಾರ್ವಜನಿಕರು ಹಾಗೂ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ರಾಘವೇಂದ್ರ ಮತ್ತು ತಂಡ ಎಸ್ಕೇಪ್ ಆಗಿತ್ತು.
ಆರೋಪಿಗಳು ತಪ್ಪಿಸಿಕೊಳ್ಳುವ ಸಂದರ್ಭ ಬಿದ್ದು ಹೋದ ಮೊಬೈಲ್ ನಿಂದ ಮಾಹಿತಿ ಪಡೆದ ಪೊಲೀಸರು ಇಂಡುವಾಳಿನಲ್ಲಿ ಅಡಗಿದ್ದ ರಾಘವೇಂದ್ರನ ಗ್ಯಾಂಗ್ ನ್ನು ಬಂಧಿಸಿತ್ತು.
ಈ ಸಂದರ್ಭ ವಿಚಾರಣೆ ನಡೆಸಿದಾಗ ಅಶೋಕ್ ಪೈ ಕಪ್ಪು ಹಣವನ್ನು ಬಿಳಿ ಮಾಡಿಕೊಡುವ ಸಂಬಂಧ ಹಣ ಪಡೆದು ಮೋಸ ಮಾಡಿರುವುದು ಬೆಳಕಿಗೆ ಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು ಅಶೋಕ್ ಪೈನನ್ನು ಬಂಧಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications