ಮಂಡ್ಯದಲ್ಲಿರುವ ಅಂಬಿ ಪಾಲಿನ ಈ ಲಕ್ಕಿ ಮನೆ ಸುಮಲತಾರ ಕೈ ಹಿಡಿಯಿತಾ?
Recommended Video

ಮಂಡ್ಯ, ಮಾರ್ಚ್ 21: ಕಲಾವಿದರ ಬಣ್ಣದ ಮಾತುಗಳಿಗೆ ಮರುಳಾಗಿ ಮತ ನೀಡಿದರೆ ಅವರು ಚುನಾವಣೆ ಬಳಿಕ ಬೆಂಗಳೂರು ಸೇರುತ್ತಾರೆ ಅಥವಾ ಪ್ರವಾಸ ಮಾಡುತ್ತಾ ಜಾಲಿಯಾಗಿರುತ್ತಾರೆ. ನಿಮ್ಮ ಕಷ್ಟ ಸುಖಕ್ಕೆ ಅವರು ಬರಲ್ಲ. ಎಂಬಂತಹ ಮಾತುಗಳನ್ನು ಆಡುತ್ತಾ ಮತದಾರರ ಮನವೊಲಿಸುವ ಪ್ರಯತ್ನದಲ್ಲಿದ್ದ ಎದುರಾಳಿ ರಾಜಕೀಯ ನಾಯಕರಿಗೆ ಸುಮಲತಾ ಅವರ ಬೆಂಬಲಕ್ಕೆ ಬಂದಂತಹ ಜನ ಸಮೂಹ ಭಾರೀ ಅಘಾತವನ್ನೇ ನೀಡಿದ್ದು, ಇದಕ್ಕೆಲ್ಲ ಅವರ ಲಕ್ಕಿ ಮನೆಯೇ ಕಾರಣ ಎಂಬಂತಹ ಮಾತುಗಳು ಕೇಳಿ ಬರುತ್ತಿವೆ.
ಹಾಗೆ ನೋಡಿದರೆ ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸುವ ವೇಳೆ ನಡೆದ ಸಮಾವೇಶಕ್ಕೆ ಬಂದವರೆಲ್ಲರೂ ಸ್ವಂತ ಖರ್ಚಿನಿಂದಲೇ ಬಂದವರು. ಅವರನ್ನು ಯಾರೂ ಕರೆ ತಂದಿರಲಿಲ್ಲ. ಮಂಡ್ಯದ ಜನತೆಯ ಈ ಅಭಿಮಾನವನ್ನು ಹತ್ತಿರದಿಂದ ಕಂಡ ಸುಮಲತಾ ಅವರು ಮಂಡ್ಯದಿಂದ ಹೊರ ಹೋಗುವ ಮಾತೇ ಇಲ್ಲದಾಗಿದೆ. ಮಂಡ್ಯದಲ್ಲಿದ್ದು ಜನತೆಯ ಸೇವೆ ಮಾಡುವ ತುಡಿತ ಅವರಲ್ಲಿ ಹುಟ್ಟಿಕೊಂಡಿದೆ.
ಈಗಾಗಲೇ ಸುಮಲತಾ ಅವರು ಮಂಡ್ಯದ ಚಾಮುಂಡೇಶ್ವರಿ ನಗರದ 3ನೇ ಕ್ರಾಸ್ನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಬೆಂಗಳೂರಿನಿಂದ ಬಂದು ರಾಜಕೀಯ ಮಾಡುವವರಿಗೆ ಮಣೆ ಹಾಕಬೇಡಿ ಎಂದ ಹೇಳುತ್ತಿದ್ದ ಎದುರಾಳಿಗಳ ಬಾಯಿ ಮುಚ್ಚಿಸಿದ್ದಾರೆ.
ಈ ಹಿಂದೆಯೂ ಅಂಬರೀಶ್ ಅವರು ಬಾಡಿಗೆಗೆ ಇದೇ ಮನೆಯನ್ನು ಪಡೆದಿದ್ದರು. ಅಂಬಿ ಪಾಲಿಗೆ ಲಕ್ಕಿ ಮನೆ ಇದಾಗಿತ್ತು. ಇದೇ ಮನೆಯಲ್ಲಿ ಅಂಬಿ ಗೆಲುವು ಕಂಡಿದ್ದರು. ವಾಸ್ತು ಪ್ರಕಾರವೇ ಸುಸಜ್ಜಿತವಾಗಿರುವ ಈ ಮನೆ ಸುಮಲತಾಗೂ 'ಲಕ್ಕಿ' ಮನೆಯಾಗಲಿದೆ ಎಂಬಂತಹ ಮಾತುಗಳು ಕೇಳಿ ಬರುತ್ತಿವೆ. ಮುಂದೆ ಓದಿ...

ಈ ಮನೆಗೆ ಬಂದ ಮೇಲೆ ಸಚಿವರಾದರು
ಅಂಬರೀಶ್ ಅವರು 2013ರ ವಿಧಾನಸಭಾ ಚುನಾವಣೆಗೂ ಮುನ್ನ ಈ ಮನೆ ಬಾಡಿಗೆಗೆ ಪಡೆದಿದ್ದರು. 2008ರ ವಿಧಾನಸಭೆ, 2009ರ ಲೋಕಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಅಂಬರೀಶ್ ಅದೃಷ್ಟದ ಈ ಮನೆಗೆ ಬಂದ ಮೇಲೆ ಗೆದ್ದು ಸಚಿವರೂ ಆಗಿದ್ದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕ ಮನೆ ಖಾಲಿ ಮಾಡಿದ್ದರು.

ಇದೆಲ್ಲವೂ ಲಕ್ಕಿ ಮನೆಯ ಪವಾಡ
ಇದೀಗ ಸುಮಲತಾ ಅವರು ಅಂಬರೀಶ್ರ ಅದೃಷ್ಟದ ಮನೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಗೆಲುವು ಅವರಿಗೆ ಖಚಿತ ಎಂದು ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಸುಮಲತಾ ಅವರ ಬೆಂಬಲಕ್ಕೆ ನಿಂತ ಜನ ಸಮೂಹವನ್ನು ನೋಡಿದ ಬಳಿಕ ಇದೆಲ್ಲವೂ ಲಕ್ಕಿ ಮನೆಯ ಪವಾಡ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸ್ವಂತ ಮನೆ ನಿರ್ಮಾಣದ ತೀರ್ಮಾನ
ಇನ್ನೊಂದೆಡೆ ಎದುರಾಳಿಗಳ ಮಾತನ್ನು ಗಂಭೀರವಾಗಿಯೇ ಪರಿಗಣಿಸಿರುವ ಸುಮಲತಾ ಅವರು ಸದ್ಯಕ್ಕೆ ಬಾಡಿಗೆ ಮನೆಯಲ್ಲಿದ್ದು, ಬಳಿಕ ಸ್ವಂತ ಮನೆ ನಿರ್ಮಿಸಿಸುವ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಂಡ್ಯದ ಬಂದೀಗೌಡ ಬಡಾವಣೆಯ ಸಂಬಂಧಿಕರ ನಿವೇಶನ ಅಥವಾ ಮಂಡ್ಯ ಹೊರವಲಯದ ಮಂಜುನಾಥ್ ನಗರದಲ್ಲಿ ಸ್ವಂತ ನಿರ್ಮಾಣದ ತೀರ್ಮಾನ ಮಾಡಿದ್ದಾರೆ.

ಯಾವ ರೀತಿಯಲ್ಲಿ ಬೆಂಬಲ ನೀಡುತ್ತಾರೆ?
ಮಂಡ್ಯದ ಜನ ನೀಡುತ್ತಿರುವ ಬೆಂಬಲವನ್ನು ಹತ್ತಿರದಿಂದ ಕಂಡಿರುವ ಅವರು ಮಂಡ್ಯದಲ್ಲಿ ನೆಲೆಯೂರುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದ್ದು, ಜನರ ಅಭಿಮಾನಕ್ಕೆ ಚ್ಯುತಿಯಾಗದಂತೆ ಎಚ್ಚರಿಕೆಯ ಹೆಜ್ಜೆಯಿಡುತ್ತಿದ್ದಾರೆ ಎನ್ನವುದರಲ್ಲಿ ಎರಡು ಮಾತಿಲ್ಲ. ಪತಿ ಅಂಬರೀಶ್ ಅವರ ಹೆಸರನ್ನೇ ಮುಂದಿಟ್ಟುಕೊಂಡು ರಾಜಕೀಯಕ್ಕೆ ಇಳಿದಿರುವ ಸುಮಲತಾ ಮುಂದೆ ಮಂಡ್ಯದೆಲ್ಲೆಡೆ ಪ್ರಚಾರ ನಡೆಸಲಿದ್ದು, ಅವರಿಗೆ ಯಾವ ರೀತಿಯಲ್ಲಿ ಜನ ಬೆಂಬಲ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications