ಹಿಂದೂಗಳ ಭಾವನೆಗೆ ಧಕ್ಕೆ: ಸತೀಶ್ ಜಾರಕಿಹೊಳಿ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ
ಮಂಡ್ಯ, ನವೆಂಬರ್ 9: ಹಿಂದೂ ಪದದ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಮಂಡ್ಯ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯದ ಸರ್.ಎಂ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು ಹಿಂದೂ ಎನ್ನುವ ಪದಕ್ಕೆ ಅಪಮಾನ ಮಾಡಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಸಾರ್ವಜನಿಕವಾಗಿ ಹಿಂದೂ ಎನ್ನುವ ಪದ ಅಶ್ಲೀಲ. ಆ ಪದದ ಅರ್ಥ ಕೇಳಿದರೆ ನಾಚಿಕೆಯಾಗುತ್ತದೆ. ಎಂದು ಹೇಳುವ ಮೂಲಕ ಈ ದೇಶದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ಮಾತುಗಳನ್ನಾಡಿದ್ದಾರೆ. ಈ ರೀತಿಯ ಮಾನಸಿಕತೆಯನ್ನು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿದೆ. ಹಿಂದೂಗಳನ್ನು ಅವಮಾನಿಸುವುದು, ಕಡೆಗಣಿಸುವುದು ಸೇರಿದಂತೆ ಇನ್ನಿತರೆ ಕಾರ್ಯಸೂಚಿಗಳನ್ನು ಕಾಂಗ್ರೆಸ್ ಪಕ್ಷ ತಮ್ಮ ವೃತ್ತಿಯಾಗಿಸಿಕೊಂಡಿದೆ ಎಂದು ಪ್ರತಿಭಟನಾ ನಿರತ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಭಾರತ ದೇಶದ ಸರ್ವೋಚ್ಛ ನ್ಯಾಯಾಲಯ ಹಿಂದೂ ಎಂಬುದು ಭಾರತದ ಜೀವನ ಪದ್ಧತಿ ಎಂದು ತೀರ್ಪು ನೀಡಿದೆ. ನಮ್ಮ ರಾಷ್ಟ್ರಗೀತೆಯ ಕೊನೆಯ ಸಾಲಿನಲ್ಲಿ ಜೈ ಹಿಂದ್ ಎನ್ನುವ ಶಬ್ಧವೂ ಇದೆ. ಹೀಗಾಗಿ ಈ ದೇಶದಲ್ಲಿ ವಾಸವಿಸುವ ಬಹುಸಂಖ್ಯಾತ ಹಿಂದೂಗಳಿಗೆ ಮಾನಸಿಕವಾಗಿ ನೋವುಂಟು ಮಾಡುವಂತಹ ಹೇಳಿಕೆಯನ್ನು ನೀಡುವ ಮೂಲಕ, ರಾಷ್ಟ್ರಗೀತೆಗೆ ಹಾಗೂ ರಾಷ್ಟ್ರದ ಬಹುಸಂಖ್ಯಾತರಿಗೆ ಅಪಮಾನ ಮಾಡಿರುತ್ತಾರೆ. ಈ ಕೂಡಲೇ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಆಯೋಜನೆ ಮಾಡಿದ್ದ ಹಿಂದೂ ವಿರೋಧಿ ನಡವಳಿಕೆ ಸೇರಿದಂತೆ ಹಿಂದೂ ಧರ್ಮವನ್ನು ಜಾಗತಿಕವಾಗಿ ನಾಶ ಮಾಡುವಂತಹ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಇದರ ಟೂಲ್ಕಿಟ್ ಅಂಗವಾಗಿ ಸತೀಶ್ ಜಾರಕಿಹೊಳಿ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಹಿಂದೂಗಳು, ಹಿಂದುತ್ವವನ್ನು ಅಪಮಾನಿಸುತ್ತಿದ್ದಾರೆ. ರಾಷ್ಟ್ರದ ಹಿತದೃಷ್ಟಿಯಿಂದ ಸಮಾಜದಲ್ಲಿ ಶಾಂತಿ ನೆಲೆಸುವ ದೃಷ್ಟಿಯಿಂದ ಇಂತಹ ಹೇಳಿಕೆ ಕೊಟ್ಟಂತಹ ಸತೀಶ್ ಜಾರಕಿಹೊಳಿ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ಸಿ.ಟಿ. ಮಂಜುನಾಥ್, ನಗರಾಧ್ಯಕ್ಷ ವಿವೇಕ್, ಮುಖಂಡರಾದ ಚಂದಗಾಲು ಶಿವಣ್ಣ, ವಸಂತ್ಕುಮಾರ್, ಹೊಸಹಳ್ಳಿ ನಾಗೇಶ್, ಎಚ್.ಆರ್. ಅರವಿಂದ್, ಸಿದ್ದರಾಜು, ಮಹೇಶ್, ನಗರಸಭಾ ಸದಸ್ಯರಾದ ಪ್ರಸನ್ನಕುಮಾರ್, ಚಂದ್ರು, ಶಿವಕುಮಾರ್, ನಾಗಾನಂದ ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.