ಮಂಡ್ಯ ಧರಣಿಯಲ್ಲಿ ಮಹದಾಯಿ, ಕಳಸಾ ಬಂಡೂರಿ ರೈತ ಒಕ್ಕೂಟ
ಮಂಡ್ಯ, ಸೆಪ್ಟೆಂಬರ್ 13: ಮಹದಾಯಿ, ಕಳಸಾ ಬಂಡೂರಿ ರೈತ ಒಕ್ಕೂಟದ ಅಧ್ಯಕ್ಷ ವಿಜಯ್ ಕುಲಕರ್ಣಿ ನೇತೃತ್ವದಲ್ಲಿ ಒಕ್ಕೂಟ ಹುಬ್ಬಳ್ಳಿ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಸರ್ ಎಂ.ವಿ. ಪ್ರತಿಮೆ ಎದುರು ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದರು.
ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಪೇಟೆ ಬೀದಿ, ಜೈನರ ಬೀದಿ, ನೂರಡಿ ರಸ್ತೆ, ಗುತ್ತಲು ರಸ್ತೆಗಳಲ್ಲಿ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಬಕ್ರೀದ್ ಇದ್ದ ಕಾರಣ ಒಂದು ರೀತಿಯಲ್ಲಿ ಮಂಡ್ಯ ನಗರ ಬಂದ್ ರೀತಿಯಂತಾಗಿತ್ತು.[ತಮಿಳು ಭಾಷಿಕರಿಗೆ ಮಂಡ್ಯದಲ್ಲಿ ರಕ್ಷಣೆ ಕೊಡ್ತೀವಿ]
ಕಾವೇರಿ ಹೋರಾಟ ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ, ಪಾಂಡವಪುರ ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಅರೆಸೇನಾ ಪಡೆ, ಇಂಡೋ ಟಿಬೇಟಿಯನ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಮತ್ತು ಪೊಲೀಸರು ನಗರದ ವಿವಿಧ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.
ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಸುತ್ತಿರುವ ಧರಣಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಭಾವಹಿಸಿದ್ದರು. ನಗರಸಭೆ ಮಾಜಿ ಸದಸ್ಯ ಅಮ್ಜದ್ ಪಾಷಾ ಉಪವಾಸ ಮಾಡುವ ಮೂಲಕ ಬೆಂಬಲ ಸೂಚಿಸಿದರು.['ಗಂಟೆಗೊಂದು ಮಾತಾಡುವ ಸಿದ್ದರಾಮಯ್ಯನ್ನ ನಾವು ನಂಬಲ್ಲ']
ಮಹದಾಯಿ, ಕಳಸಾ ರೈತ ಒಕ್ಕೂಟ ಹಾಗೂ ಇಲ್ಲಿನ ಕೆಲ ಸಂಘಟನೆಗಳ ವತಿಯಿಂದ ನಗರದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸುವ ಮೂಲಕ ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಲಾಯಿತು.
ಮಾಜಿ ಸಂಸದ ಜಿ.ಮಾದೇಗೌಡ, ಮುಖಂಡರಾದ ಆತ್ಮಾನಂದ, ಎಚ್.ಡಿ.ಚೌಡಯ್ಯ, ಅಂಬುಜಮ್ಮ, ಎನ್.ರಾಜು, ಶಂಭೂನಹಳ್ಳಿ ಸುರೇಶ್, ಮಂಜುನಾಥ್, ಬೇಕ್ರಿ ರಮೇಶ್, ಎಂ.ಬಿ.ಶ್ರೀನಿವಾಸ್, ಸಿ.ಟಿ.ಮಂಜುನಾಥ್, ಎಂ.ಎಸ್.ಸತ್ಯಾನಂದ, ಮಾ.ಸೋ.ಚಿದಂಬರ್, ಎಚ್.ಡಿ. ಜಯರಾಂ, ಸೇರಿದಂತೆ ಹಲವರು ಧರಣಿಯಲ್ಲಿ ಭಾಗವಹಿಸಿದ್ದರು.[ಕಾವೇರಿ ವಿವಾದದ ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ]
ನಗರದ ಸರ್ ಎಂ.ವಿ. ಪ್ರತಿಮೆ ಬಳಿ ನಡೆಯುತ್ತಿರುವ ಧರಣಿಯಲ್ಲಿ ಮಾತನಾಡಿದ ಜಿ.ಮಾದೇಗೌಡ, ಕಾವೇರಿ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅನ್ಯಾಯವನ್ನು ಪ್ರತಿಭಟಿಸುವುದೇ ಮಹಾಪರಾಧವಲ್ಲ. ಕಾವೇರಿ ವಿಷಯದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ನಿಷೇಧಾಜ್ಞೆ ಉಲ್ಲಂಘಿಸಿ ಜೈಲಿಗೆ ಹೋಗಲು ಸಿದ್ಧ ಎಂದು ಘೋಷಿಸಿದರು.