ಶಾಸಕರನ್ನು ಕಾಡಲಿರುವ ಮಂಡ್ಯ ಲೋಕ ಸಭಾ ಕ್ಷೇತ್ರ ಫಲಿತಾಂಶ
Recommended Video
ಮಂಡ್ಯ, ಮೇ 21: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಮೇಲೆ ಜಿಲ್ಲೆಯ ಎಂಟು ಜೆಡಿಎಸ್ ಶಾಸಕರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆಯೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಕೆಲವು ಸಮೀಕ್ಷೆಗಳು ಸುಮಲತಾ ಅವರೇ ಗೆಲ್ಲುತ್ತಾರೆ ಎಂದು ಹೇಳುತ್ತಿದ್ದರೆ, ಇನ್ನು ಕೆಲವು ಸಮೀಕ್ಷೆಗಳು ನಿಖಿಲ್ ಗೆಲುವು ಖಚಿತ ಎನ್ನುತ್ತಿವೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಆದರೆ ಸಮೀಕ್ಷೆಗಳು ಏನೇ ಹೇಳಲಿ, ಫಲಿತಾಂಶವೇ ಅಂತಿಮವಾಗಿರುವುದರಿಂದ ಕಾಯುವುದು ಅನಿವಾರ್ಯವಾಗಿದೆ. ಆದರೂ ಈ ಫಲಿತಾಂಶ ಅಭ್ಯರ್ಥಿಗಳಿಗಿಂತ ಸ್ಥಳೀಯ ಶಾಸಕರನ್ನು ಹೆಚ್ಚು ಕಾಡುತ್ತಿದೆ. ಹೀಗಾಗಿ ಭಯಗೊಂಡಿರುವುದು ಅಭ್ಯರ್ಥಿಗಳಲ್ಲ, ಶಾಸಕರು ಎಂಬುದನ್ನು ತಳ್ಳಿಹಾಕುವಂತಿಲ್ಲ.
ಎಲ್ಲ ಶಾಸಕರು, ಏನೇ ಆಗಲೀ ನಿಖಿಲ್ ಕುಮಾರ್ಸ್ವಾಮಿ ಅವರನ್ನು ಗೆಲ್ಲಿಸಿಯೇ ತೀರುವುದಾಗಿ ಭರವಸೆ ನೀಡಿದ್ದರು. ಅದರಲ್ಲೂ ಸಚಿವರಾಗಿರುವ ಡಿ.ಸಿ.ತಮ್ಮಣ್ಣ ಮತ್ತು ಪುಟ್ಟರಾಜು ಅವರ ಮೇಲೆ ಈ ವಿಷಯವಾಗಿ ವರಿಷ್ಠರು ಹೆಚ್ಚಿನ ಜವಾಬ್ದಾರಿ ವಹಿಸಿದ್ದರು. ಜತೆಗೆ ಎಲ್ಲ ಶಾಸಕರಿಗೂ ಒಂದೊಂದು ಜವಾಬ್ದಾರಿ ವಹಿಸಲಾಗಿತ್ತು. ಆದರೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಚುನಾವಣೆ ಕಠಿಣವಾಗಿ ಪರಿಣಮಿಸಿತ್ತಲ್ಲದೆ, ಸ್ವತಂತ್ರ ಅಭ್ಯರ್ಥಿಯಾಗಿದ್ದ ಸುಮಲತಾ ಅವರ ತೀವ್ರ ಪೈಪೋಟಿ ಗೊಂದಲವನ್ನೂ ಉಂಟು ಮಾಡಿತ್ತು. ಆರೋಪಗಳ ಮೂಲಕ ಸುಮಲತಾ ಅವರ ನೈತಿಕ ಸ್ಥೈರ್ಯ ಕುಗ್ಗಿಸುವ ಯತ್ನ ಮಾಡಿದರಾದರೂ ಇದು ಜೆಡಿಎಸ್ ಗೆ ಲಾಭ ತರುವ ಬದಲು ನಷ್ಟವನ್ನೇ ತಂದಿದ್ದು ಸುಳ್ಳಲ್ಲ.

ಸುಮಲತಾ v/s ನಿಖಿಲ್: ಗೆಲುವು ಯಾರೆಡೆಗೆ?
ಒಂದು ವೇಳೆ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆದ್ದರೆ ಮಂಡ್ಯದ ಜೆಡಿಎಸ್ ಕೋಟೆ ಇನ್ನಷ್ಟು ಸುಭದ್ರಗೊಳ್ಳಲಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆದ್ದರೆ ಕಾಂಗ್ರೆಸ್ನಲ್ಲಿ ರಾಜಕೀಯ ಮನ್ವಂತರವೇ ಆಗಲಿದ್ದು, ಜಿಲ್ಲೆಯಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭಗೊಳ್ಳಲಿದೆ. ಆದರೆ ಈ ನಿರೀಕ್ಷೆಗಳಲ್ಲಿ ಯಾವುದು ನಿಜವಾಗಲಿದೆ, ಯಾವುದು ಹುಸಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆಯಷ್ಟೆ.

ಮಂಡ್ಯದಲ್ಲಿ ಎಂಟು ಕ್ಷೇತ್ರ: ಛಿದ್ರಗೊಳ್ಳುವುದೇ ಜೆಡಿಎಸ್ ಭದ್ರಕೋಟೆ?
ಮಂಡ್ಯ ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಅಸ್ತಿತ್ವ ಕಾಯ್ದುಕೊಂಡಿರುವ ಜೆಡಿಎಸ್ ಗೆ ಸೋಲಾದರೆ ಭಾರೀ ಮುಖಭಂಗಕ್ಕೆ ಕಾರಣವಾಗಲಿದೆ. ಇದು ಜತನದಿಂದ ಕಾಪಾಡಿಕೊಂಡು ಬಂದಿದ್ದ ಜೆಡಿಎಸ್ ಕೋಟೆಯನ್ನೇ ಛಿದ್ರ ಮಾಡಿದಂತಾಗುತ್ತದೆ. ಈ ಸೋಲನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ದೇವೇಗೌಡರು ಸಹಿಸಿಕೊಳ್ಳಲು ಸಾಧ್ಯವಿದೆಯಾ ಎಂಬುದೇ ಪ್ರಶ್ನೆಯಾಗಿ ಕಾಡುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಆಗಿರುವ ಹೆಚ್ಚುವರಿ ಮತದಾನ, ಗುಪ್ತಚರ ಇಲಾಖೆ ಸಲ್ಲಿಸಿರುವ ನಾಲ್ಕು ಸಮೀಕ್ಷಾ ವರದಿಗಳು ಶಾಸಕರಲ್ಲಿ ಆತಂಕ ಸೃಷ್ಠಿಸಿರುವುದರಿಂದ ಚುನಾವಣಾ ಫಲಿತಾಂಶ ವ್ಯತಿರಿಕ್ತವಾಗಿ ಬಂದಲ್ಲಿ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ? ವರಿಷ್ಠರ ಕೆಂಗಣ್ಣಿಗೆ ಗುರಿಯಾಗದಂತೆ ಪಾರಾಗುವ ಬಗೆ ಹೇಗೆ ಎಂಬ ಬಗ್ಗೆ ಶಾಸಕರು ಚಿಂತಾಕ್ರಾಂತರಾಗಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಜೊತೆ ವಿರಸ; ಪರಿಣಾಮ ಬೀರಬಹುದೇ?
ಕೆಲವು ದಿನಗಳಿಂದ ಜೆಡಿಎಸ್ ನ ಶಾಸಕರು ಒಬ್ಬರಾದ ಮೇಲೆ ಒಬ್ಬರಂತೆ ಕಾಂಗ್ರೆಸ್ನ ಮುಖಂಡರ ಮೇಲೆ ಗೂಬೆ ಕೂರಿಸುವ ಯತ್ನವನ್ನು ಮಾಡುತ್ತಲೇ ಬಂದಿದ್ದು, ಅದು ಅಷ್ಟೊಂದು ಪರಿಣಾಮ ಬೀರುವಂತೆ ಕಂಡು ಬರುತ್ತಿಲ್ಲ.
ಹಾಗೆ ನೋಡಿದರೆ ಜೆಡಿಎಸ್ ಶಾಸಕರು ಮಾಡುತ್ತಿರುವ ಆರೋಪದಂತೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಪ್ರಚಾರದ ಅಖಾಡದಲ್ಲೆಲ್ಲೂ ಕಾಂಗ್ರೆಸ್ ನಾಯಕರು ಕಾಣಿಸಿಕೊಳ್ಳದೆ ಬೆಂಬಲಿಗರನ್ನಷ್ಟೇ ಮುಂದೆ ಬಿಟ್ಟು ಚಾಣಾಕ್ಷತೆ ಮೆರೆದಿದ್ದರು. ಈ ಚಾಣಾಕ್ಷತನ ಕಾಂಗ್ರೆಸ್-ಜೆಡಿಎಸ್ ನಡುವೆ ಭಿನ್ನಾಭಿಪ್ರಾಯ ಮೂಡಿಸಿದ್ದು ಹೌದಾದರೂ ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದು ಪ್ರಶ್ನೆಯಾಗಿದೆ.

ಫಲಿತಾಂಶ: ಶಾಸಕರ ಮೇಲೆ ಒತ್ತಡ!
ಏನೇ ಮಾಡಿದರೂ ಜೆಡಿಎಸ್ ಶಾಸಕರು ತಮ್ಮ ಪಕ್ಷದ ವರಿಷ್ಠರಿಂದ ತಪ್ಪಿಸಿಕೊಳ್ಳುವುದು ಕಷ್ಟವೇ. ಒಂದು ವೇಳೆ ನಿಖಿಲ್ ಗೆದ್ದರೆ ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿ ಮುಂದುವರೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸರಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಶಾಸಕರೆಲ್ಲರೂ ನಿಖಿಲ್ ಗೆಲುವಿನ ರೂವಾರಿಗಳಾಗಿ ದೇವೇಗೌಡರ ಕುಟುಂಬದ ಪ್ರಶಂಸೆಗೆ ಪಾತ್ರವಾಗಲಿದ್ದಾರೆ. ಫಲಿತಾಂಶ ವ್ಯತಿರಿಕ್ತವಾದರೆ ಏನಾಗಬಹುದು ಎಂಬುದು ಮಾತ್ರ ಮೇ 23ಕ್ಕಷ್ಟೇ ತಿಳಿಯಬೇಕಿದೆ. ಒಟ್ಟಾರೆ ಫಲಿತಾಂಶ ಅಭ್ಯರ್ಥಿಗಳಿಗಿಂತ ಕ್ಷೇತ್ರದ ಶಾಸಕರ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂಬುದಂತು ಸತ್ಯ.












Click it and Unblock the Notifications