Get Updates
Get notified of breaking news, exclusive insights, and must-see stories!

ಕೆಆರ್‌ಎಸ್‌ನಲ್ಲಿ ಆತಂಕ ಮೂಡಿಸಿದ ಚಿರತೆ; ಬೃಂದಾವನಕ್ಕೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

ಮಂಡ್ಯ, ನವೆಂಬರ್‌, 14: ವಿಶ್ವವಿಖ್ಯಾತ ಕೆಆರ್‌ಎಸ್ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡು ಅಲ್ಲಿನ ಪ್ರವಾಸಿಗರಿಗೆ ಆತಂಕ ಸೃಷ್ಟಿಸಿತ್ತು. ಇದೀಗ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸ್ಥಗಿತಗೊಳಿಸಿದೆ. ಮುಂಜಾಗ್ರತೆಯಾಗಿ ಬೃಂದಾವನಕ್ಕೆ ಪ್ರವಾಸಿಗರ ನಿಷೇಧವನ್ನು ಮುಂದುವರೆಸಿದೆ. ನಾರ್ತ್‌ಬ್ಯಾಂಕ್ ಬಳಿ ಬೆಳೆದುನಿಂತಿದ್ದ ಗಿಡ-ಗಂಟೆಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರೆದಿದೆ.

ಅಕ್ಟೋಬರ್‌ 22ರಂದು ಕೆಆರ್‌ಎಸ್ ಅಣೆಕಟ್ಟಿನ ಮೇಲ್ಭಾಗದಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಮತ್ತೆ ಅಕ್ಟೋಬರ್‌ 28ರಂದು ಸಂಜೆ ಬೃಂದಾವನದೊಳಗೆ ಚಿರತೆ ಕಾಣಿಸಿಕೊಂಡು ಪ್ರವಾಸಿಗರಲ್ಲಿ ಮತ್ತಷ್ಟು ಭಯ ಹುಟ್ಟುವಂತೆ ಮಾಡಿತ್ತು. ಚಿರತೆ ಕಾಣಿಸಿಕೊಂಡಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದರಿಂದ ಪ್ರವಾಸಿಗರಿಗೆ ಬೃಂದಾವನ ಪ್ರವೇಶವನ್ನು ನಿಷೇಧಿಸಲಾಗಿತ್ತು.

ನಂತರದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಬೃಂದಾವನದ ಉತ್ತರ ಮತ್ತು ದಕ್ಷಿಣ ದ್ವಾರದ ಮಾರ್ಗಗಳಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ್ದರು. ರಾಯಲ್ ಆರ್ಕಿಡ್ ಹೋಟೆಲ್ ಹಿಂಭಾಗ ಬೋನನ್ನು ಇರಿಸಿ ನಾಯಿಯೊಂದನ್ನು ಕಟ್ಟಿಹಾಕಿ ಚಿರತೆ ಸೆರೆಗೆ ಕಾದುಕುಳಿತಿದ್ದರು. ಆದರೆ ಇದುವರೆಗೂ ಕೂಡ ಚಿರತೆ ಬೋನಿನ ಬಳಿ ಸುಳಿಯಲೇ ಇಲ್ಲ.

ಮೊದಲು ದಕ್ಷಿಣ ದ್ವಾರದ ಬಳಿ ಕಾಣಿಸಿಕೊಂಡಿದ್ದ ಚಿರತೆ ಅಕ್ಟೋಬರ್‌ 28ರಂದು ಉತ್ತರ ಬೃಂದಾವನ ಬಳಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದ್ದರಿಂದ ಅಲ್ಲಿಯೂ ಸಹ ಒಂದು ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯವರು ನಡೆಸಿದ್ದರು. ಆದರೆ ಅದು ಫಲ ನೀಡಲೇ ಇಲ್ಲ.

 ಕಾರ್ಯಾಚರಣೆಗೆ ಅಡ್ಡಿಯಾಗಿದ್ದ ಗಿಡಗಳ ತೆರವು

ಕಾರ್ಯಾಚರಣೆಗೆ ಅಡ್ಡಿಯಾಗಿದ್ದ ಗಿಡಗಳ ತೆರವು

ಚಿರತೆ ಚಲನವಲನದ ಮೇಲೆ ನಿಗಾ ಇಡಲು ಹತ್ತು ಕಡೆಗಳಲ್ಲಿ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಕೂಂಬಿಂಗ್ ಕಾರ್ಯಾಚರಣೆಗೆ ಅಡ್ಡಿಯಾಗಿದ್ದ ಗಿಡ-ಗಂಟೆಗಳನ್ನೆಲ್ಲಾ ದಕ್ಷಿಣ ದ್ವಾರದ ಬಳಿ ತೆರವುಗೊಳಿಸಿದ್ದರು. ಆದರೂ ಚಿರತೆ ಮಾತ್ರ ಎಲ್ಲಿಯೂ ಕಾಣಸಿಗಲೇ ಇಲ್ಲ. ಕೊನೆಗೆ ಕಾವೇರಿ ನೀರಾವರಿ ನಿಗಮ ಹಾಗೂ ಅರಣ್ಯ ಇಲಾಖೆಯವರು ಸಭೆ ನಡೆಸಿ ಡ್ರೋನ್ ಕ್ಯಾಮೆರಾ ಬಳಸಿ ಚಿರತೆಯ ಇರುವಿಕೆಯ ಜಾಗ ಪತ್ತೆ ಹಚ್ಚುವುದರೊಂದಿಗೆ ಸೆರೆಹಿಡಿಯುವ ಕಾರ್ಯಾಚರಣೆಯ ನಿರ್ಧಾರವನ್ನು ಕೈಗೊಂಡರು. ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ವನ್ಯಜೀವಿ ವಲಯದವರ ನೆರವನ್ನು ಪಡೆಯುವುದಕ್ಕೂ ತೀರ್ಮಾನಿಸಲಾಗಿತ್ತು. ಆದರೆ ಸಭೆ ನಡೆಸಿ ಕೈಗೊಂಡ ತೀರ್ಮಾನದಂತೆ ಯಾವುದೂ ಜಾರಿಯಾಗಲೇ ಇಲ್ಲ.

 ಅಕ್ಟೋಬರ್‌ 28ರಂದು ಚಿರತೆ ಪ್ರತ್ಯಕ್ಷ

ಅಕ್ಟೋಬರ್‌ 28ರಂದು ಚಿರತೆ ಪ್ರತ್ಯಕ್ಷ

ಕಳೆದ ನಾಲ್ಕು ದಿನಗಳಿಂದಲೂ ಕೆಆರ್‌ಎಸ್‌ನಲ್ಲಿ ಚಿರತೆ ಸೆರೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಬೃಂದಾವನದಲ್ಲಿದೆಯೋ ಇಲ್ಲವೋ? ಗೊತ್ತಿಲ್ಲ ಎಂದು ಅಲ್ಲಿನ ಅಧಿಕಾರಿಗಳದ್ದಾಗಿದೆ. ಅಕ್ಟೋಬರ್‌ 28ರಂದು ಪ್ರತ್ಯಕ್ಷವಾಗಿದ್ದ ಚಿರತೆ ಇದುವರೆಗೂ ಎಲ್ಲಿಯೂ ಸಹ ಕಾಣಿಸಿಕೊಂಡಿಲ್ಲ. ಚಿರತೆ ಇನ್ನೂ ಬೃಂದಾವನದಲ್ಲೇ ಇದೆಯೋ ಅಥವಾ ಕಾಡಿಗೆ ಮರಳಿದೆಯೋ? ಎನ್ನುವ ಮಾಹಿತಿಯೂ ಇಲ್ಲದಂತಾಗಿದೆ. ಕಳೆದ 16 ದಿನಗಳಿಂದ ಚಿರತೆ ಕೆಆರ್‌ಎಸ್ ಸುತ್ತಮುತ್ತ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆ ಚಿರತೆ ಅಲ್ಲಿಂದ ವಾಪಸ್ ತೆರಳಿರುವ ಸಾಧ್ಯತೆಗಳಿವೆ ಎಂದು ಅರಣ್ಯ ಇಲಾಖೆಯವರು ನಂಬಿದ್ದಾರೆ. ಅದೇ ಕಾರಣಕ್ಕೆ ವ್ಯರ್ಥ ಕಾರ್ಯಾಚರಣೆ ನಡೆಸದೆ ಸುಮ್ಮನಾಗಿದ್ದಾರೆ ಎಂದು ತಿಳಿದುಬಂದಿದೆ.

 ತಲೆನೋವಾಗಿ ಪರಿಣಮಿಸಿದ ಚಿರತೆ ಸೆರೆ

ತಲೆನೋವಾಗಿ ಪರಿಣಮಿಸಿದ ಚಿರತೆ ಸೆರೆ

ಸಂತಾನಾಭಿವೃದ್ಧಿ ಕಾರಣದಿಂದ ಒಮ್ಮೊಮ್ಮೆ ಚಿರತೆಗಳು ಅರಣ್ಯದ ಹೊರಗೆ ಕಾಣಿಸಿಕೊಳ್ಳುತ್ತವೆ. ಚಿರತೆಗಳು ಆಹಾರವನ್ನು ಹುಡುಕಲು ಸುಲಭವಾಗುವುದರಿಂದ ಹಳ್ಳಿಗಳು, ಪಟ್ಟಣದ ಕಡೆಗಳಲ್ಲಿ ಅಲೆದಾಡುತ್ತವೆ. ನಂತರ ಕಾಡಿಗೆ ವಾಪಸಾಗುವ ನಿದರ್ಶನಗಳೂ ಇವೆ. ಹಾಗೆಯೇ ಕೆಆರ್‌ಎಸ್‌ನಲ್ಲಿ ಕಾಣಿಸಿಕೊಂಡಿರುವ ಚಿರತೆ ಆಹಾರ ಹುಡುಕಿಕೊಂಡು ಬಂದು ಕೆಲ ದಿನಗಳ ಬಳಿಕ ವಾಪಸಾಗಿರಬಹುದೆಂದು ಹೇಳಲಾಗುತ್ತಿದೆ.

ಚಿರತೆ ಕೆಆರ್‌ಎಸ್ ವ್ಯಾಪ್ತಿಯಲ್ಲೇ ಇದ್ದಿದ್ದರೆ ಇಷ್ಟೊತ್ತಿಗೆ ಎಲ್ಲಾದರೂ ಕಾಣಿಸಿಕೊಳ್ಳಬೇಕಿತ್ತು. ಬೇಟೆಗಾದರೂ ಬರಬೇಕಿತ್ತು. ಚಿರತೆ ಹಲವಾರು ದಿನಗಳಿಂದ ಕಾಣಿಸಿಕೊಳ್ಳದಿರುವುದರಿಂದ ಕೆಆರ್‌ಎಸ್‌ನಿಂದ ನಿರ್ಗಮಿಸಿರಬಹುದು ಎಂದು ಹೇಳಲಾಗುತ್ತಿದೆ. ಆದರೂ, ಒಳಗೊಳಗೆ ಆತಂಕ, ಭಯವೂ ಕೂಡ ಅರಣ್ಯ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಕಾಡುತ್ತಿದೆ.

 ಪ್ರವಾಸಿಗರಿಗೆ ಬೃಂದಾವನಕ್ಕೆ ಪ್ರವೇಶ ನಿಷೇಧ

ಪ್ರವಾಸಿಗರಿಗೆ ಬೃಂದಾವನಕ್ಕೆ ಪ್ರವೇಶ ನಿಷೇಧ

ವಾರಾಂತ್ಯದ ದಿನಗಳನ್ನು ಮಜವಾಗಿ ಕಳೆಯಲು ಬೃಂದಾವನಕ್ಕೆ ಬರುತ್ತಿದ್ದ ಸಾವಿರಾರು ಪ್ರವಾಸಿಗರಲ್ಲಿ ಇದೀಗ ನಿರಾಸೆ ಆವರಿಸಿದೆ. ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು ಹತ್ತು ದಿನಗಳಿಂದಲೂ ಬೃಂದಾವನ ಪ್ರವೇಶವನ್ನು ಪ್ರವಾಸಿಗರಿಗೆ ನಿಷೇಧಿಸಿದೆ. ಆದರೆ ಚಿರತೆ ಸೆರೆ ಆಗದಿರುವುದರಿಂದ ಪ್ರವಾಸಿಗರಿಗೆ ಪ್ರವೇಶ ನೀಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಚಿರತೆ ಕೆಆರ್‌ಎಸ್‌ನಲ್ಲಿ ಕಾಣಿಸಿಕೊಂಡ ನಂತರ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

ಇದರಿಂದ ಆದಾಯಕ್ಕೂ ಪೆಟ್ಟು ಬಿದ್ದಂತಾಗಿದೆ. ಸಾಮಾನ್ಯ ದಿನಗಳಲ್ಲಿ ನೂರಾರು ಹಾಗೂ ವಾರಾಂತ್ಯದ ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಬೃಂದಾವನ ವೀಕ್ಷಣೆಗೆ ಬರುತ್ತಿದ್ದರು. ರಜಾ ದಿನಗಳು ಒಟ್ಟಿಗೆ ಬಂದಿದ್ದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗುತ್ತಿತ್ತು. ಹತ್ತು ದಿನಗಳ ನಿಷೇಧದಿಂದ ನಿಗಮಕ್ಕೆ ಬರುತ್ತಿದ್ದ ಸುಮಾರು 25 ಲಕ್ಷಕ್ಕೂ ಹೆಚ್ಚಿನ ಆದಾಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಚಿರತೆ ಪ್ರತ್ಯಕ್ಷವಾದ ದಿನದಿಂದ ಬೃಂದಾವನ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ನಿಷೇಧದ ಕಾರಣದಿಂದ ಪ್ರವಾಸಿಗರು ಕೆಆರ್‌ಎಸ್‌ನತ್ತ ಸುಳಿಯುತ್ತಲೇ ಇಲ್ಲ. ಹದಿನೈದು ದಿನಗಳಿಂದ ಆದಾಯವೂ ಶೂನ್ಯವಾಗಿದೆ.

 ಇನ್ನೂ ಸೆರೆಯಾಗದ ಚಿರತೆ, ಆತಂಕ

ಇನ್ನೂ ಸೆರೆಯಾಗದ ಚಿರತೆ, ಆತಂಕ

ಚಿರತೆ ಸೆರೆ ಸಿಕ್ಕಿದ್ದರೆ ಎಲ್ಲರ ಮನಸ್ಸು ನಿರಾಳವಾಗುತ್ತಿತ್ತು. ಚಿರತೆ ಬಗೆಗಿನ ಆತಂಕ, ಭಯವೂ ದೂರವಾಗುತ್ತಿತ್ತು. ಆದರೆ ಚಿರತೆ ಸೆರೆ ಆಗದಿರುವುದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು ಭಯದ ನೆರಳಿನಲ್ಲೇ ಉಳಿಯುವಂತಾಗಿದೆ. ಪ್ರವಾಸಿಗರಿಗೆ ಕೆಆರ್‌ಎಸ್ ಬೃಂದಾವನಕ್ಕೆ ಪ್ರವೇಶ ನೀಡುವುದಕ್ಕೂ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಸೋಮವಾರದಿಂದ ಬೃಂದಾವನಕ್ಕೆ ಪ್ರವೇಶ ನೀಡುವುದೋ ಅಥವಾ ಇನ್ನು ಸ್ವಲ್ಪ ದಿನ ಕಾದು ನೋಡುವುದೋ ಎಂಬ ಗೊಂದಲದಲ್ಲೇ ಇದ್ದಾರೆ.

ಚಿರತೆ ಸೆರೆ ಕಾರ್ಯಾಚರಣೆ ಮಾಹಿತಿ ಪಡೆಯಲು ಮಂಡ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್ ಅವರಿಗೆ ಕರೆ ಮಾಡಿದರೆ ಅವರು ಕರೆಯನ್ನೇ ಸ್ವೀಕರಿಸುತ್ತಿಲ್ಲ. ಶ್ರೀರಂಗಪಟ್ಟಣ ವಲಯ ಆರಣ್ಯಾಧಿಕಾರಿ ಅನಿತಾ ಅವರಿಗೆ ಕರೆ ಮಾಡಿದರೂ ಉತ್ತರಿಸುತ್ತಿಲ್ಲ. ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡದೆ ಮೌನಕ್ಕೆ ಶರಣಾಗಿ ಕಾರ್ಯಾಚರಣೆಯಿಂದ ದೂರವೇ ಉಳಿದಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

 ನಿಗಮಕ್ಕೆ 25 ಲಕ್ಷ ರೂಪಾಯಿನಷ್ಟು ನಷ್ಟ

ನಿಗಮಕ್ಕೆ 25 ಲಕ್ಷ ರೂಪಾಯಿನಷ್ಟು ನಷ್ಟ

ಇದರಿಂದ ನಿಗಮಕ್ಕೆ 25 ಲಕ್ಷ ರೂಪಾಯಿನಷ್ಟು ನಷ್ಟವಾಗಿದೆ. ಈಗ ಹಲವಾರು ದಿನಗಳಿಂದ ಚಿರತೆ ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆಯಾಗಿ ನಮ್ಮ ವ್ಯಾಪ್ತಿಯಲ್ಲಿನ ಗಿಡ-ಗಂಟೆಗಳನ್ನು ತೆರವುಗೊಳಿಸಿದ್ದು, ಅರಣ್ಯ ಇಲಾಖೆಯವರೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೂರು ದಿನ ರಜೆ ಇದ್ದ ಕಾರಣ ಡ್ರೋನ್ ಕಾರ್ಯಾಚರಣೆ ನಡೆಸಲಾಗಿಲ್ಲ. ಚಿರತೆ ಎಲ್ಲಿಯೂ ಕಾಣಿಸಿಕೊಳ್ಳದಿರುವುದರಿಂದ ಕಾಡಿಗೆ ವಾಪಸಾಗಿರಬಹುದು ಎಂದು ಭಾವಿಸಿದ್ದೇವೆ. ಬೃಂದಾವನಕ್ಕೆ ಪ್ರವಾಸಿಗರಿಗೆ ಪ್ರವೇಶ ನೀಡುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಎಇಇ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+