ಮಂಡ್ಯ : ಕನಗನಮರಡಿಯಲ್ಲಿ ಸರ್ಕಾರಿ ಬಸ್ ಸೇವೆಗೆ ಚಾಲನೆ
ಮಂಡ್ಯ, ನವೆಂಬರ್ 27 : ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ 2 ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸಲಾಗಿದೆ. ಶನಿವಾರ ಖಾಸಗಿ ಬಸ್ ವಿ.ಸಿ.ನಾಲೆಗೆ ಉರುಳಿ ಬಿದ್ದು 30 ಜನರು ಮೃತಪಟ್ಟಿದ್ದರು.
ಮಂಡ್ಯ-ಕನಗನಮರಡಿ-ಪಾಂಡವಪುರ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಎರಡು ಬಸ್ ಸಂಚಾರವನ್ನು ಆರಂಭಿಸಿದೆ. ಸೋಮವಾರ ಬೆಳಗ್ಗೆಯಿಂದಲೇ ಬಸ್ ಸಂಚಾರ ಆರಂಭವಾಗಿದ್ದು, ಮಾರ್ಗದಲ್ಲಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ.
ಮಂಡ್ಯ-ಪಾಂಡವಪುರ ಮಾರ್ಗದಲ್ಲಿ ಓಡಾಡುವ ಖಾಸಗಿ ಬಸ್ ಹಾಗೂ ಆಟೋಗಳ ನಡುವೆ ಪೈಪೋಟಿ ಇತ್ತು. ಪ್ರಯಾಣಿಕರ ಸುರಕ್ಷತೆಗಿಂತ ಹಣಗಳಿಸುವುದೇ ಇವರ ಗುರಿಯಾಗಿತ್ತು. ಅದರ ಪ್ರತಿಫಲವಾಗಿಯೇ ದುರಂತ ನಡೆದಿದೆ.

ದುರಂತಕ್ಕೂ ಮೊದಲು ಪಾಂಡವಪುರ-ಕನಗನಮರಡಿ-ಮಂಡ್ಯ ಮಾರ್ಗದಲ್ಲಿ 1 ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಸುತ್ತಿತ್ತು. ಬೆಳಗ್ಗೆ 6 ಹಾಗೂ ಸಂಜೆ 7 ಗಂಟೆಗೆ ಸಂಚಾರ ನಡೆಸುತ್ತಿದ್ದ ಬಸ್, ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಸ್ಥಗಿತಗೊಂಡಿತ್ತು.
ಆರ್ಟಿಓಗಳು ನೀಡುವ ಮಾಹಿತಿಯಂತೆ ಜಿಲ್ಲೆಯಲ್ಲಿ 465 ಅನುಮತಿ ಪಡೆದ ಖಾಸಗಿ ಬಸ್ಗಳಿವೆ. ಆದರೆ, ಅನುಮತಿಯನ್ನು ಪಡೆಯದೇ 100ಕ್ಕೂ ಅಧಿಕ ಬಸ್ಗಳು ಸಂಚಾರ ನಡೆಸುತ್ತಿವೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಈ ಬಸ್ ಮಾಲೀಕರು ತಲೆಕೆಡಿಸಿಕೊಳ್ಳುವುದಿಲ್ಲ.
ಶನಿವಾರ ಕನಗನಮರಡಿ ಸಮೀಪ ರಾಜ್ಕುಮಾರ್ ಹೆಸರಿನ ಖಾಸಗಿ ಬಸ್ ವಿ.ಸಿ.ನಾಲೆಗೆ ಉರುಳಿ ಬಿದ್ದಿತ್ತು. ಬಸ್ನಲ್ಲಿದ್ದ 30 ಪ್ರಯಾಣಿಕರು ಜಲಸಮಾಧಿಯಾಗಿದ್ದರು. ಇಬ್ಬರು ಮಾತ್ರ ಜೀವ ಉಳಿಸಿಕೊಂಡಿದ್ದರು. ಬಸ್ ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆತ ನಾಪತ್ತೆಯಾಗಿದ್ದಾನೆ.












Click it and Unblock the Notifications