ಮಂಡ್ಯ ಕಾಂಗ್ರೆಸ್ನಲ್ಲಿ ಭಿನ್ನಮತ: ರವೀಂದ್ರ ರಾಜೀನಾಮೆ!
ಬೆಂಗಳೂರು, ಮಾರ್ಚ್ 06: ಲೋಕಸಭೆ ಚುನಾವಣೆ 2024ಕ್ಕೂ ಮೊದಲು ಮಂಡ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಉಂಟಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಯಾರಿಗೆ ಟಿಕೆಟ್? ನೀಡಲಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮಂಡ್ಯ ಕಾಂಗ್ರೆಸ್ ಭಿನ್ನಮತದ ಹಿನ್ನಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಡಾ. ಹೆಚ್. ಎನ್. ರವೀಂದ್ರ ರಾಜೀನಾಮೆ ನೀಡಿದ್ದಾರೆ. ಸ್ಟಾರ್ ಚಂದ್ರುಗೆ ಮಂಡ್ಯ ಟಿಕೆಟ್ ಸಿಗುವ ನಿರೀಕ್ಷೆ ಇದ್ದು, ಇದು ರವೀಂದ್ರ ಅಸಮಾಧಾನಕ್ಕೆ ಕಾರಣ.

ಮಾಧ್ಯಮಗಳ ಜೊತೆ ಮಾತನಾಡಿದ ಡಾ. ಹೆಚ್. ಎನ್. ರವೀಂದ್ರ, "ವಿಧಾನಸಭೆ ಚುನಾವಣೆ ವೇಳೆ ನನಗೆ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ ಕೊನೆ ಕ್ಷಣದಲ್ಲಿ ಮೇಲುಕೋಟೆಯನ್ನು ರೈತ ಸಂಘಕ್ಕೆ ಬಿಟ್ಟುಕೊಡುವ ತೀರ್ಮಾನ ಆಯಿತು" ಎಂದರು.
"ಮೇಲುಕೋಟೆ ಬಿಟ್ಟುಕೊಡುವಾಗ ಸೌಜನ್ಯಕ್ಕೂ ನನ್ನ ಜೊತೆ ಚರ್ಚಿಸಿಲ್ಲ. ಆದರೆ ಪಕ್ಷದ ಸೂಚನೆಯಂತೆ ದರ್ಶನ್ ಪುಟ್ಟಣ್ಣಯ್ಯ ಪರ ಕೆಲಸ ಮಾಡಿದೆ. ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದರು" ಎಂದು ರವೀಂದ್ರ ತಿಳಿಸಿದರು.
"ಡಿ. ಕೆ. ಶಿವಕುಮಾರ್ ನನ್ನ ಮೇಲೆ ನಂಬಿಕೆ ಇಟ್ಟು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದರು. ಆದರೆ ಈಗ ವಾತಾವರಣ ಕಲುಷಿತವಾಗಿದೆ. ಆದ್ದರಿಂದ ರಾಜೀನಾಮೆ ನೀಡಿದ್ದೇನೆ" ಎಂದು ಹೇಳಿದರು.
ಸ್ಟಾರ್ ಚಂದ್ರು ಅಭ್ಯರ್ಥಿ: ಮಂಡ್ಯ ರಾಜ್ಯದ ಕುತೂಹಲ ಕೆರಳಿಸಿರುವ ಕ್ಷೇತ್ರ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಕ್ಷೇತ್ರ ಯಾರಿಗೆ? ಎಂಬುದು ಎಲ್ಲರ ಕುತೂಹಲ. ಮತ್ತೊಂದು ಕಡೆ ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದು ಸೋತಿದ್ದರು.
ಈ ಬಾರಿ ಉದ್ಯಮಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಇದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪತ್ನಿಯೂ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಇದೆ. ಆದರೆ ಕಾಂಗ್ರೆಸ್ ನಾಯಕರು ಈ ಕುರಿತು ಮೌನವಾಗಿದ್ದಾರೆ.
ಮಂಡ್ಯದಲ್ಲಿ ಈಗಾಗಲೇ ಸ್ಟಾರ್ ಚಂದ್ರು ಅಭ್ಯರ್ಥಿ ಎಂಬ ಫೆಕ್ಸ್ ಕಾಣಿಸುತ್ತಿವೆ. ಅವರ ಸಹೋದರ ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ. ಕೆಲವು ದಿನಗಳ ಹಿಂದೆ ಅವರು ನೀಡಿದ ಹೇಳಿಕೆ ಸಹ ಸ್ಟಾರ್ ಚಂದ್ರುಗೆ ಎಂಪಿ ಟಿಕೆಟ್ ಪಕ್ಕಾ ಎಂಬ ಮಾಹಿತಿ ನೀಡುವಂತೆಯೇ ಇದೆ.
ಮಂಡ್ಯ ಜಿಲ್ಲೆಯಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಉತ್ಸಾಹದಲ್ಲಿದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮಳವಳ್ಳಿ (ಕಾಂಗ್ರೆಸ್), ಮದ್ದೂರು (ಕಾಂಗ್ರೆಸ್), ಮೇಲುಕೋಟೆ (ಸರ್ವೋದಯ ಪಕ್ಷ) ಕಾಂಗ್ರೆಸ್ ಬೆಂಬಲಿತ, ಮಂಡ್ಯ (ಕಾಂಗ್ರೆಸ್), ಶ್ರೀರಂಗಪಟ್ಟಣ (ಕಾಂಗ್ರೆಸ್), ನಾಗಮಂಗಲ (ಕಾಂಗ್ರೆಸ್), ಕೆ. ಆರ್. ಪೇಟೆ (ಕಾಂಗ್ರೆಸ್) ಶಾಸಕರು ಇದ್ದಾರೆ.
ಮಂಡ್ಯ ಜಿಲ್ಲೆ ಜೆಡಿಎಸ್ನ ಭದ್ರಕೋಟೆ ಎಂಬುದನ್ನು ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಯಲ್ಲಿ ಸುಳ್ಳಾಗಿಸಿದೆ. ಈಗ ಕಾಂಗ್ರೆಸ್ ಟಿಕೆಟ್ಗೆ ಭಾರೀ ಪೈಪೋಟಿ ನಡೆದಿದೆ. ಸ್ಟಾರ್ ಚಂದ್ರುಗೆ ಟಿಕೆಟ್ ಎಂಬುದು ಅಸಮಾಧಾನವನ್ನು ಹುಟ್ಟು ಹಾಕಿದೆ.
ಡಾ. ಹೆಚ್. ಎನ್. ರವೀಂದ್ರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಪಕ್ಷ ತೊರೆಯುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಹೋರಾಟ ಮುಂದುವರೆಯಲಿದೆ. ಹಣ ಇದೆ ಎಂದು ಹೊರಗಿನಿಂದ ಅಭ್ಯರ್ಥಿ ಕರೆತಂದು ನಿಲ್ಲಿಸಿದರೆ ಚುನಾವಣೆಯಲ್ಲಿ ನಾವು ತೀರ್ಮಾನ ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಮಂಡ್ಯದಲ್ಲಿ ಈ ಬಾರಿ ಮೈತ್ರಿ ಅಭ್ಯರ್ಥಿ, ಕಾಂಗ್ರೆಸ್ ಅಭ್ಯರ್ಥಿ? ಯಾರು ಎಂಬುದು ಸದ್ಯದ ಕುತೂಹಲವಾಗಿದೆ.












Click it and Unblock the Notifications