ಕೆಆರ್ ಪೇಟೆ ಜೆಡಿಎಸ್ ಕಾರ್ಯಕರ್ತನ ಕೊಲೆ ಆರೋಪಿಗಳ ಬಂಧನ
ಮಂಡ್ಯ, ಜನವರಿ 4: ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತನ ಹತ್ಯೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ವಿಭಾಗದ ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾಕರ್ ನೇತೃತ್ವದ ತಂಡ ಯಶಸ್ವಿಯಾಗಿದೆ. ಗ್ರಾಮದ ನಿವಾಸಿಗಳು, ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ರಕ್ಷಿತ್ (23) ಮತ್ತು ಯೋಗೇಶ್ (28) ಬಂಧಿತರು.
ಡಿಸೆಂಬರ್ 31ರಂದು ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತ ಹರೀಶ್(ಗುಂಡ) ಎಂಬಾತನನ್ನು ಹತ್ಯೆಗೈದಿದ್ದರು. ರಾತ್ರಿ 12ರ ಸಮಯದಲ್ಲಿ ಮುರುಕನಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಮುಂಭಾಗದಿಂದ ತಮ್ಮ ಮನೆಯ ಕಡೆ ಹೊರಟಿದ್ದ ಹರೀಶ್ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದರು.[ಕೆಆರ್ ಪೇಟೆ ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತನ ಕೊಲೆ]

ಘಟನೆಯ ಬಳಿಕ ಮುರುಕನಹಳ್ಳಿ ಗ್ರಾಮ ಹೊತ್ತಿ ಉರಿದಿತ್ತು. ಅಲ್ಲದೆ ಆರೋಪಿಗಳ ಬಂಧನಕ್ಕೆ ಭಾರೀ ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಅಪರಾಧ ವಿಭಾಗದ ಇನ್ ಸ್ಪೆಕ್ಟರ್ ಪ್ರಭಾಕರ್ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಿ, ತನಿಖೆ ಕೈಗೊಳ್ಳಲಾಗಿತ್ತು.[ಜೆಡಿಎಸ್ ಕಾರ್ಯಕರ್ತರ ಸರಣಿ ಕೊಲೆ, ಜ 4ರಂದು ಮಂಡ್ಯ ಬಂದ್ ಗೆ ಕರೆ]

ಆರೋಪಿಗಳ ಸ್ನೇಹಿತರು ಮತ್ತು ಸಂಬಂಧಿಕರ ಮೊಬೈಲ್ ಕರೆಗಳನ್ನು ಆಧರಿಸಿ ಹೊರ ಜಿಲ್ಲೆಗಳಲ್ಲಿ ತಲೆ ಮರೆಸಿಕೊಂಡಿದ್ದ ರಕ್ಷಿತ್ ಮತ್ತು ಯೋಗೇಶ್ ನನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು ಹತ್ಯೆಗೆ ನಿಖರ ಕಾರಣವನ್ನು ಕಲೆ ಹಾಕುತ್ತಿದ್ದಾರೆ. ಸದ್ಯಕ್ಕೆ ಗ್ರಾಮದಲ್ಲಿ ಸ್ಮಶಾನ ಮೌನ ಮುಂದುವರೆದಿದ್ದು, ಬಹುತೇಕ ಮನೆಗಳು ಬಾಗಿಲು ಬಂದ್ ಮಾಡಿಕೊಂಡ ಸ್ಥಿತಿಯಲ್ಲಿವೆ. ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.












Click it and Unblock the Notifications