ಗುರುವಾರ ರಾಜ್ಯದಲ್ಲಿ ಐಟಿ ದಾಳಿ: ಕುಮಾರಸ್ವಾಮಿಯಿಂದ ಸ್ಪೋಟಕ ಮಾಹಿತಿ
ಮಂಡ್ಯ, ಮಾರ್ಚ್ 27: ನಾಳೆ (ಗುರುವಾರ) ರಾಜ್ಯದಲ್ಲಿ ಕೆಲ ಮುಖಂಡರ ಮೇಲೆ ಐಟಿ ದಾಳಿ ನಡೆಯಲಿದೆ ಎಂದು ಸಿಎಂ ಕುಮಾರಸ್ವಾಮಿ ಅವರು ಶಾಕಿಂಗ್ ಮಾಹಿತಿ ನೀಡಿದ್ದಾರೆ.
200-300 ಐಟಿ ಅಧಿಕಾರಿಗಳು ಹೊರರಾಜ್ಯದಿಂದ ನಾಳೆ ರಾಜ್ಯಕ್ಕೆ ಬರುತ್ತಿದ್ದಾರೆ, ಅವರನ್ನು ವಿಮಾನ ನಿಲ್ದಾಣದಿಂದ ಪಿಕ್-ಅಪ್ ಮಾಡಲು ಕ್ಯಾಬ್ ಗಳು ಕೂಡ ತಯಾರಾಗಿ ನಿಂತಿವೆ ಎಂದು ಕುಮಾರಸ್ವಾಮಿ ಹೇಳಿದರು. ಅವರು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಈ ವಿಷಯ ಹಂಚಿಕೊಂಡರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸ್ಥಳೀಯ ಪೊಲೀಸರ ನೆರವನ್ನು ಅವರು ಪಡೆಯದೆ ಸಿಆರ್ಪಿಎಫ್ ಪಡೆಯನ್ನೂ ಸಹ ಅವರು ಕರೆತರಲಿದ್ದಾರೆ ಎಂದು ಮಾಹಿತಿ ನೀಡಿರುವ ಅವರು, ಇಲ್ಲಿನ ಐಟಿ ಅಧಿಕಾರಿಗಳು ಬಿಜೆಪಿಯ ಏಜೆಂಟ್ಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತೊಂದು ಶಾಕಿಂಗ್ ಸುದ್ದಿ ಹೇಳಿರುವ ಅವರು ಐಟಿ ದಾಳಿ ವಿಷಯವನ್ನು ಬಿಜೆಪಿಯಲ್ಲಿ ಇರುವ ಸ್ನೇಹಿತರೊಬ್ಬರು ನನಗೆ ಕರೆ ಮಾಡಿ ನೀಡಿದ್ದಾರೆ ಎಂದಿದ್ದಾರೆ.

'ಎಸಿಬಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇನೆ'
ಚುನಾವಣೆ ಸಮಯದಲ್ಲಿ ಐಟಿ ಅಧಿಕಾರಿಗಳನ್ನು ಬಳಸಿಕೊಂಡು ಬಿಜೆಪಿ ದಬ್ಬಾಳಿಕೆ ಮಾಡಲು ಯತ್ನಿಸುತ್ತಿದೆ. ನಾನು ಎಸಿಬಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದು, ಐಟಿ ಅಧಿಕಾರಿಗಳು ದಬ್ಬಾಳಿಕೆ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

'ಪಶ್ಚಿಮ ಬಂಗಾಳ ಸಿಎಂ ಮಾಡಿದಂತೆ ಮಾಡುತ್ತೇನೆ'
ಪಶ್ಚಿಮ ಬಂಗಾಳ ಸಿಎಂ ಮಾಡಿದ ರೀತಿಯಲ್ಲಿಯೇ ನಾನೂ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಕುಮಾರಸ್ವಾಮಿ ನೀಡಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಸಿಬಿಐ ಅಧಿಕಾರಿಗಳನ್ನೇ ಬಂಧಿಸುವಂತೆ ಆದೇಶ ನೀಡಿದ್ದರು.

'ಬಿಜೆಪಿಯ ಕೀಳು ಮಟ್ಟದ ರಾಜಕೀಯ'
ಮಂಡ್ಯ ಚುನಾವಣಾ ಪ್ರಚಾರದಲ್ಲಿರುವ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತುಕತೆ ಮಾಡುವಾಗ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ಬಿಜೆಪಿ ಕೀಳು ರಾಜಕೀಯ ಮಾಡುತ್ತಿದೆ ಎಂದು ಸಹ ಅವರು ಆರೋಪಿಸಿದ್ದಾರೆ.

ಐಟಿ ದಾಳಿ ನಡೆದರೆ ರಾಜಕೀಯ ಅಲ್ಲೋಕೋಲ
ಕುಮಾರಸ್ವಾಮಿ ಅವರು ಹೇಳಿದಂತೆ ಐಟಿ ದಾಳಿ ನಿಜವಾಗಿಯೇ ನಡೆದರೆ ರಾಜ್ಯ ರಾಜಕಾರಣದಲ್ಲಿ ಅದು ಭಾರಿ ತಲ್ಲಣ ಸೃಷ್ಟಿಸುವ ಸಾಧ್ಯತೆ ಇದೆ. ಕುಮಾರಸ್ವಾಮಿ ಅವರು ಹೇಳಿದಂತೆ 200-300 ಅಧಿಕಾರಿಗಳು ಬರುವಂತಿದ್ದರೆ ಹಲವು ಮುಖಂಡರ ಮೇಲೆ ದಾಳಿಗೆ ನೀಲನಕ್ಷೆ ತಯಾರಿಸಿರುವ ಸಾಧ್ಯತೆ ಇದೆ.












Click it and Unblock the Notifications