ಈ ಬಾರಿ ಸೋತರೆ ನಾನು ಬದುಕೋದಿಲ್ಲ ಎಂದು ಕಣ್ಣೀರಿಟ್ಟ ಮಾಜಿ ಸಚಿವ
ಮಳವಳ್ಳಿ, ನವೆಂಬರ್ 15 : ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆ ನನ್ನ ಪಾಲಿಗೆ ಸಾವು-ಬದುಕಿನ ಹೋರಾಟ, ಈಗಾಗಲೇ ಮೂರು ಬಾರಿ ಸೋತಿರುವ ನಾನು, ಈ ಬಾರಿ ಸೋತರೆ ಖಂಡಿತ ಜೀವಂತವಾಗಿ ಉಳಿಯುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಸೋಮಶೇಖರ್ ಕಣ್ಣೀರು ಹಾಕಿದ್ದಾರೆ.
ಈ ಹೇಳಿಕೆ ಗಮನಿಸಿದರೆ ಆಗಲೇ ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಕಳೆ ಕಟ್ಟುತ್ತಿದೆ ಎನಿಸುತ್ತದೆ. ಪಟ್ಟಣದ ಸಮೀಪದ ಚೋಳನಹಳ್ಳಿ ರಾವಳೇಶ್ವರ ದೇವಾಲಯದ ಆವರಣದಲ್ಲಿ ಬುಧವಾರ ಸಭೆಯಲ್ಲಿ ಸೋಮಶೇಖರ್ ಕಣ್ಣೀರು ಇಟ್ಟಿದ್ದಾರೆ.

16 ವರ್ಷ ಶಾಸಕನಾಗಿ ಮಾದರಿ ಕ್ಷೇತ್ರವಾಗಿ ರೂಪಿಸಿದ್ದೀನಿ. ನನ್ನ ಅಧಿಕಾರಾವಧಿಯಲ್ಲಿ ನೀರು, ರಸ್ತೆ, ಚರಂಡಿ, ವಿದ್ಯುತ್, ನಿವೇಶನ, ಶಾಲೆ, ಅಂಗನವಾಡಿ ಕೇಂದ್ರಗಳನ್ನು ಒದಗಿಸಿದ್ದೇನೆ. ಬೇರೆಯವರೆಲ್ಲಾ ಸ್ವಂತಕ್ಕೆ ಶಾಲಾ-ಕಾಲೇಜುಗಳನ್ನು ಆರಂಭಿಸಿ ಕೋಟಿಗಟ್ಟಲೆ ಆದಾಯ ಬರುವಂತೆ ಮಾಡಿಕೊಂಡಿದ್ದಾರೆ ಎಂದರು.
ಆದರೆ, ನಾನು ಸರಕಾರಿ ಶಾಲಾ-ಕಾಲೇಜುಗಳ ಜೊತೆಗೆ ಟಿಸಿಎಚ್, ಐಟಿಐ, ಜೆಒಸಿ ಕಾಲೇಜುಗಳನ್ನು ಆರಂಭಿಸಿ ಕ್ಷೇತ್ರದ ಬಡವರ್ಗದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದ್ದೇನೆ. ಇದರ ಜೊತೆಗೆ ಶಿಕ್ಷಣ ಮಂತ್ರಿಯಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮರು ತಿಂಗಳಲ್ಲೇ ಮತ್ತೆ ಪರೀಕ್ಷೆ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದೇನೆ ಎಂದರು.
ಕಂದಾಯ ಮಂತ್ರಿಯಾಗಿಯೂ ಉತ್ತಮ ಕೆಲಸ ಮಾಡಿದ್ದೀನಿ. ಇಂತಹ ಉತ್ತಮ ಆಡಳಿತ ನೀಡಿದ ನಾನು, ನನ್ನ ಮನೆ ಬಾಗಿಲಿಗೆ ಅಲೆದು ನೀವು ಹಣ, ಸಮಯವನ್ನು ವ್ಯಯ ಮಾಡಬೇಡಿ. ನಾನೇ ನಿಮ್ಮ ಮನೆ ಬಾಗಿಲಿಗೆ ಬರುತ್ತೇನೆ ಎಂದಿದ್ದನ್ನೇ ಅಪಾರ್ಥ ಮಾಡಿಕೊಂಡು ಕಳೆದ ಮೂರು ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದೀರಿ. ನನ್ನ ಮಾತಿನಿಂದ ನಿಮಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದರು.
ಮುಂಬರುವ ಚುನಾವಣೆಯಲ್ಲಿ ನಾನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ಈ ಬಾರಿ ನನ್ನ ಗೆಲುವು ಖಚಿತ. ಇದನ್ನು ಮನಗಂಡ ಕೆಲವರು ಕ್ಷೇತ್ರಕ್ಕೆ ನಾನೇ ಬಿಜೆಪಿ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತ ಕ್ಷೇತ್ರದ ಕಾರ್ಯಕರ್ತರು ಹಾಗೂ ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎಂದು ದೂರಿದರು.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಅವರು ತಾನೇ ಮಳವಳ್ಳಿ ಕ್ಷೇತ್ರದ ಅಭ್ಯರ್ಥಿ ಎಂದು ಸ್ಪಷ್ಟವಾಗಿ ಹೇಳಿದ್ದು, ಕಾರ್ಯಕರ್ತರು ಮತದಾರರು ಯಾವುದೇ ಗೊಂದಲಕ್ಕೆ ಒಳಗಾಗದೆ ಮುಂದಿನ ಚುನಾವಣೆಯಲ್ಲಿ ಕೊನೆಯದಾಗಿ ನನ್ನನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು. ಈ ಚುನಾವಣೆಯಲ್ಲೂ ಸೋತರೆ ನಾನು ಜೀವಂತ ಉಳಿಯುವುದಿಲ್ಲ ಎಂದು ಕಣ್ಣೀರಿಟ್ಟರು.












Click it and Unblock the Notifications