ರಾಜಕೀಯ ಬಿಟ್ಟರೂ, ಮಂಡ್ಯವನ್ನು ಮಾತ್ರ ಬಿಡಲ್ಲ: ಸಂಸದೆ ಸುಮಲತಾ
ಮಂಡ್ಯ, ನವೆಂಬರ್ 17: ಸಕ್ಕರೆ ನಾಡು ಮಂಡ್ಯ ಅಂಬರೀಶ್ ಅವರ ಕರ್ಮಭೂಮಿ ಹಾಗಾಗಿ ರಾಜಕೀಯ ಬಿಟ್ಟರೂ ಮಂಡ್ಯವನ್ನು ಬಿಡಲ್ಲ ಎಂದು ಸಂಸದೆ ಸುಮಲತಾ ಸ್ಪಷ್ಟಪಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, " ಹೊಸ ಕ್ಷೇತ್ರ ಹುಡುಕುತ್ತಿರುವವರು ಯಾರು ಅಂತ ಗೊತ್ತಿಲ್ಲ. ಸುಮಲತಾ ಮಂಡ್ಯ ಬಿಟ್ಟು ಹೋಗುತ್ತಾರೆ ಎಂದು ಒಂದಷ್ಟು ಜನ ಕನಸು ಕಾಣುತ್ತಿದ್ದಾರೆ. ನಾನು ಕ್ಷೇತ್ರ ಬಿಟ್ಟು ಹೋಗಲ್ಲ ಎನ್ನುವುದು ಅವರ ಕನಸಿಗೆ ನೀರು ಚೆಲ್ಲಿದಂತಾಗಿರಬಹುದು" ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ಜಾಮಿಯಾ ಮಸೀದಿ ವಿವಾದ: ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ಬಜರಂಗದಳ
ನಾನು ರಾಜಕೀಯಕ್ಕೆ ಬಂದಿರುವುದು ಮಂಡ್ಯ ಜನಕ್ಕೋಸ್ಕರ. ರಾಜಕೀಯದಿಂದ ಏನೇನೋ ಆಗಲು ಬಂದಿಲ್ಲ. ರಾಜಕೀಯದಲ್ಲಿ ಬೇಕಿದ್ರೆ ಇಂದು ಇರುತ್ತೇನೆ, ನಾಳೆ ಬಿಡುತ್ತೇನೆ, ಆದರೆ ಮಂಡ್ಯ ಮಾತ್ರ ಬಿಡಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ನನ್ನನ್ನು ಬೆಂಬಲಿಸಿದ್ದಾರೆ. ಯಾರ ಪರ, ವಿರೋಧ ಎಂಬ ಧೋರಣೆ ಅನುಸರಿಸದೆ ತಟಸ್ಥವಾಗಿರುವುದು ಒಳ್ಳೆಯದು. ಯಾರಿಗೂ ಕೂಡ ನೋಯಿಸಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಭಿಷೇಕ್ ರಾಜಕೀಯ ಪ್ರವೇಶದ ನಿರ್ಧಾರ ನನ್ನದಲ್ಲ
ವಿಧಾನ ಸಭಾ ಚುನಾವಣೆಯಲ್ಲಿ ನಾನೇನು ಸ್ಪರ್ಧಿಸುವುದಿಲ್ಲ. ನಾನು ಯಾರಿಗೆ ಬೆಂಬಲ ಕೊಡಬೇಕು ಎನ್ನುವುದು ಮುಂದೆ ನೋಡೋಣ. ಇನ್ನೂ ಯಾರ್ಯಾರು ಕ್ಯಾಂಡಿಡೇಟ್ಸ್ ಎನ್ನುವುದೇ ಗೊತ್ತಿಲ್ಲ. ಈಗಲೇ ನಾನು ಯಾರಿಗೆ ಅಂತ ಬೆಂಬಲ ಸೂಚಿಸಲಿ ಎಂದು ಪ್ರಶ್ನಿಸಿದರು.
ರಾಜಕೀಯಕ್ಕೆ ಬರಬೇಕೋ ಬೇಡವೋ ಎಂಬುದನ್ನು ಅಭಿಷೇಕ್ ಅಂಬರೀಶ್ ಅವರೇ ನಿರ್ಧರಿಸುತ್ತಾರೆ. ಇದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಈಗ ಸದ್ಯಕ್ಕೆ ಅವನು ಎರಡು ಮೂರು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾನೆ. ಅವರ ರಾಜಕೀಯ ಭವಿಷ್ಯವನ್ನು ಅವನೇ ಡಿಸೈಡ್ ಮಾಡಬೇಕು ಎಂದು ಉತ್ತರಿಸಿದರು.
ಮೈಲೇಜ್ಗಾಗಿ ನನ್ನ ಬಗ್ಗೆ ಮಾತನಾಡ್ತಾರೆ
40 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಶಾಸಕ, ಮಂತ್ರಿ , ಸಂಸದರು ಎಲ್ಲವೂ ಆಗಿದ್ದಾರೆ. ಆದರೂ ಅಭಿವೃದ್ಧಿ ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ನನ್ನ ಬಗ್ಗೆ ಮಾತನಾಡಿದರೆ ಮಾಧ್ಯಮಗಳಲ್ಲಿ ಒಳ್ಳೆಯ ಮೈಲೇಜ್ ಬರುತ್ತದೆ ಎಂಬ ಕಾರಣಕ್ಕೆ ಹೀಗೆಲ್ಲಾ ಮಾತನಾಡುತ್ತಿರಬಹುದು ಎಂದು ಜೆಡಿಎಸ್ ಶಾಸಕರ ವಿರುದ್ಧ ಹರಿಹಾಯ್ದರು.
ಬೆಂಗಳೂರು-ಮೈಸೂರು ಹೆದ್ದಾರಿ ಸಮಸ್ಯೆ ಕುರಿತಂತೆ ಕಳೆದ ಮೂರು ವರ್ಷಗಳಿಂದಲೂ ಹೋರಾಟ ಮಾಡಿದ್ದೇನೆ. ನನಗೆ ಯಾರೂ ಬೆಂಬಲ ನೀಡಲಿಲ್ಲ. ಆದರೂ ನನ್ನ ಹೋರಾಟ ಮುಂದುವರಿಸಿದ್ದೇನೆ. ಮೈಸೂರು ಸಂಸದರು ಕೇವಲ ಆರೋಪಗಳನ್ನೇ ಮಾಡುತ್ತಿದ್ದಾರೆ. ಅವರೇ ಜವಾಬ್ದಾರಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಲಿ ಎಂದು ಸವಾಲು ಹಾಕಿದರು.
ಜಿಲ್ಲೆ ಅಭಿವೃದ್ಧಿಗೆ 300 ಕೋಟಿ ರೂ.ಗೆ ಬೇಡಿಕೆ
ಮಂಡ್ಯ ಜಿಲ್ಲೆಯಲ್ಲಿರುವ ಹಲವಾರು ರಸ್ತೆಗಳು ಹಾಳಾಗಿವೆ, ಕೆರೆಗಳ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 300 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ, ಖುದ್ದು ಭೇಟಿ ಮಾಡಿಯೂ ಚರ್ಚೆ ನಡೆಸಿ ಮನವಿ ಮಾಡಿದ್ದೆ. ಅವರೂ ಸಹ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಅದು ಕಾರ್ಯರೂಪಕ್ಕೆ ಬರಬೇಕಷ್ಟೇ ಎಂದು ಹೇಳಿದರು.
ಅಧಿಕಾರಿಗಳ ಬೇಜವಾಬ್ದಾರಿ ಕಾರಣ
ನರೇಗಾ ಯೋಜನೆಯಲ್ಲಿ ಮಂಡ್ಯಕ್ಕೆ ಕೊನೆ ಸ್ಥಾನ ಬಂದಿರುವುದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ. ಪ್ರತೀ ದಿಶಾ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಿಇಓ ನಾನು ಈಗತಾನೇ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳುತ್ತಾರೆ. ಕೆಲಸ ಮಾಡಬೇಕಾದವರು ಯಾರು, ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಬರುತ್ತೆ ಎಂದು ಹೇಳಿದರು.
ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಸಿಇಓ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಎಲ್ಲ ಸರ್ಕಾರಿ ಯೋಜನೆಗಳೂ ಹಳ್ಳ ಹಿಡಿಯುತ್ತವೆ ಎಂದು ತಿಳಿಸಿದರು. ಶುಕ್ರವಾರ ಮಧ್ಯಾಹ್ನ 3.30ಕ್ಕೆ ವಿಶೇಷ ಸಭೆ ಕರೆದಿದ್ದೇನೆ. ಸಭೆಯಲ್ಲಿ ಈ ಬಗ್ಗೆಯೂ ಪ್ರಸ್ತಾಪಿಸಿ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಮೈಷುಗರ್ ವಿಚಾರದಲ್ಲಿ ಶೇ. 100ರಷ್ಟು ಹೋರಾಟ ನಡೆಸಿದ್ದೇನೆ. ಅದರ ಸಲವಾಗಿ ಇಂದು ಮೈಷುಗರ್ ಪ್ರಾರಂಭವಾಗಿದೆ. ಆದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಖಾನೆ ನಡೆಯುವಂತಾಗಬೇಕು. ಇದರ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದರು.