ಭಾರಿ ಮಳೆಗೆ ನಲುಗಿದ ಮಂಡ್ಯ: ಬೀಡಿ ಕಾರ್ಮಿಕರು ಅತಂತ್ರ
ಮಂಡ್ಯ, ಆಗಸ್ಟ್, 02: ಮಂಡ್ಯ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಕೆರೆ-ಕಟ್ಟೆಗಳು ಒಡೆದುಹೋಗಿದ್ದು, ನೂರಾರು ಎಕರೆ ಬೆಳೆ ಜಲಾವೃತವಾಗಿವೆ. ವಿವೇಕಾನಂದನಗರ ಬಡಾವಣೆ, ಬೀಡಿ ಕಾಲೋನಿ ಸಂಪೂರ್ಣ ಜಲಾವೃತವಾಗಿದೆ.
ತಾಲೂಕಿನ ಬೂದನೂರು ಕೆರೆ ಕೋಡಿ ಒಡೆದು ಮದ್ದೂರು-ಮಂಡ್ಯ ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಭಾರಿ ಮಳೆಯಿಂದಾಗಿ ನಗರ ಬೀಡಿ ಕಾರ್ಮಿಕರ ಕಾಲೋನಿ ಜಲಾವೃತವಾಗಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಸ್ಥಳೀಯರನ್ನು ಬೋಟ್ ಮೂಲಕ ಹೊರಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ.
ಮದ್ದೂರು-ಮಂಡ್ಯ ರಸ್ತೆ ಬಂದ್ ಆಗಿರುವ ಕಾರಣ, ಕೆ.ಎಂ. ದೊಡ್ಡಿ ಮಳವಳ್ಳಿ ಮಾರ್ಗ ಬದಲಾಯಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಎರಡು ದಿನಗಳ ಕಾಲ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ವಾಹನ ಸವಾರರು ಪರದಾಡುವಂತೆ ಆಗಿದೆ. ಬೂದನೂರು ಕೆರೆ ಏರಿ ಒಡೆದ ಪಾರಿಣಾಮ ನೀರು ಗದ್ದೆಗೆ ನುಗ್ಗಿ ಬಳಿಕ ಹೆದ್ದಾರಿಯನ್ನು ಆವರಿಸಿಕೊಂಡಿದೆ. ಇದರಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ವೇಳೆ ಮಳೆರಾಯ ಅಬ್ಬರಿಸಿದ್ದಾನೆ. ಹೆದ್ದಾರಿಯ ಕಾಮಗಾರಿ ಸ್ಥಳಕ್ಕೆ ನೀರು ನುಗ್ಗಿದ ಪರಿಣಾಮ ಅಲ್ಲಿ ಹಾಕಲಾಗಿದ್ದ ಮಣ್ಣು ಕೊಚ್ಚಿಹೋಗಿದೆ. ಬೇಲೂರು ಕೆರೆ ತುಂಬಿ ಹರಿಯುತ್ತಿದ್ದು, ಕೆರೆಯ ಒಂದು ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆರೆ ತುಂಬಿ ಏರಿ ಮೇಲೆ ಹರಿದ ಪರಿಣಾಮ ಅಲ್ಲಿನ ಅಕ್ಕಪಕ್ಕದ ಜನರಿಗೆ ಆತಂಕ ಸೃಷ್ಠಿಯಾಗಿತ್ತು. ನಂತರ ಕೋಡಿ ತುಂಬಿ ಹರಿದಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಜನರಿಗೆ ಆತಂಕ ಕಡಿಮೆಯಾದಂತಾಗಿದೆ.
ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ಮಕ್ಕಳು, ಮಹಿಳೆಯರು, ವಯೋ ವೃದ್ಧರು ನೀರು ತುಂಬಿದ ಮನೆಗಳಲ್ಲಿ ಸಿಲುಕಿಕೊಂಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ಅವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದೆ. ಸಾತನೂರು ಕೆರೆ ಒಡೆದ ಪರಿಣಾಮ ಅಲ್ಲಿನ ಮನೆಗಳು ಸಂಪೂರ್ಣ ಜಲಾವೃತವಾಗಿವೆ. ವಿವೇಕಾನಂದ ಬಡಾವಣೆಯಲ್ಲಿರುವ ಎಲ್ಲ ರಸ್ತೆಗಳು ಮುಳುಗಡೆಯಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಅಹಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣ ಜಲಾವೃತವಾದ ಸ್ಥಳದಿಂದ ನಿವಾಸಿಗಳನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದರು.