'ಆರಗ ಜ್ಞಾನೇಂದ್ರ ಅಲ್ಲ, ಅಜ್ಞಾನದ ಜ್ಞಾನಿ' ಡಿಕೆಶಿ ವ್ಯಂಗ್ಯ
ಮಂಡ್ಯ ಜನವರಿ 10: ಪಾದಯಾತ್ರೆ ಮಾಡದಂತೆ ನಮಗೆ ನೋಟೀಸ್ ಕೊಟ್ಟಿದ್ದಾರೆ. ಪಾಪ ಹುಡುಗ ಕೊಡಲಿ. ಆತ ಆರಗ ಜ್ಞಾನೇಂದ್ರ ಅಲ್ಲ ಅಜ್ಞಾನದ ಜ್ಞಾನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ದೊಡ್ಡಆಲಹಳ್ಳಿಯಲ್ಲಿ ನಿನ್ನೆ ಮೊದಲನೇ ದಿನದ ಪಾದಯಾತ್ರೆ ಅಂತ್ಯಕೊಂಡಿತ್ತು. ಇಂದು ಮತ್ತೆ ಪಾದಯಾತ್ರೆ ಹೊರಟ ಡಿಕೆ ಶಿವಕುಮಾರ್ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಅಜ್ಞಾನದ ಜ್ಞಾನಿ ಎಂದು ಕರೆದಿದ್ದಾರೆ. ಅಜ್ಞಾನದ ಜ್ಞಾನಿ ಮಾತನ್ನು ತುಂಬಾ ಶ್ರದ್ಧೆಯಿಂದ ನಾನು ಕೇಳುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ.
Recommended Video
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನನ್ನ ಮತದಾರರ ಓಟರ್ ಐಡಿ ಕೊಡುತ್ತೇನೆ. ಅವರನ್ನು ಬಂದು ಅರೆಸ್ಟ್ ಮಾಡಲಿ ನೋಡುತ್ತೇನೆ. ಕರ್ಫ್ಯೂ ಹೇರಿ ಜನ ಜೀವನದ ಜೊತೆ ಆಟ ಆಡಬೇಡಿ. ನನ್ನ ಮತದಾರರ ಓಟರ್ ಐಡಿ ಕೊಡುತ್ತೇನೆ ಬಂದು ಬಂಧನ ಮಾಡಿ' ಎಂದು ಸವಾಲು ಹಾಕಿದ್ದಾರೆ. ಪಾಸಿಟಿವ್ ನಂಬರ್ ಹೆಚ್ಚಾದರೆ ಪರಿಹಾರ ಕೊಡಲಿ. ಅದನ್ನು ಬಿಟ್ಟು ಪರೀಕ್ಷೆಗಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಅವರು ಪರಿಹಾರ ಕೊಡಲಿ ಆಗ ಜನರೇ ಸ್ವತಃ ಬಂದು ಟೆಸ್ಟ್ ಮಾಡಿಸಿಕೊಳ್ಳುತ್ತಾರೆ. ಬಿಜೆಪಿ ಅವರಿಗೇನು ಗೊತ್ತು ಪಾದಯಾತ್ರೆ ಬಗ್ಗೆ? ಎಂದು ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ಹರಿಹಾಯ್ದಿದ್ದಾರೆ. ಟೆಸ್ಟ್ಗಳು ಕೇವಲ ಬೋಗಸ್ ಆಗಿವೆ. ನ್ಯಾಯಬದ್ಧವಾಗಿ ಟೆಸ್ಟ್ ಮಾಡಬೇಕು ಎಂದು ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ. ಈಗಾಗಲೇ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸರ್ಕಾರದ ನಿಯಮ ಏನೇ ಇರಲಿ ಆದರೆ ನೀರಿಗಾಗಿ ಪಾದಯಾತ್ರೆ ಮಾಡೇ ತೀರುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗದೇ ಇರಲು ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಕಾಂಗ್ರೆಸ್ ಉದ್ದೇಶಿತ ಪಾದಯಾತ್ರೆಯಿಂದ ಕೊರೊನಾ ನಿಯಮ ಸಡಿಲಗೊಳಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಎಲ್ಲರಿಗೂ ಒಂದೇ ನಿಯಮ, ಒಂದೇ ಕಾನೂನು. ಕಾಂಗ್ರೆಸ್ ನಾಯಕರಿಗಾಗಿ ಕಾನೂನನ್ನು ಬದಲಿಸಲು ಸಾಧ್ಯವಿಲ್ಲ. ಒಂದು ವೇಳೆ ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ಆದರೂ ಕೈ ನಾಯಕರು ಪಾದಯಾತ್ರೆ ಮುಂದುವರೆಸಿದ್ದಾರೆ. ಇದಲ್ಲದೇ ಪಾದಯಾತ್ರೆಯಿಂದ ರಾಜ್ಯಕ್ಕೆ ಮತ್ತಷ್ಟು ಕಂಟಕ ಎದುರಾಗುತ್ತದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಗ್ಯ ಸಚಿವರ ಬಳಿ ಆತಂಕ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರ ಹಿತವನ್ನು ಬಲಿಕೊಟ್ಟು ಪಾದಯಾತ್ರೆ ಮಾಡುತ್ತಿರುವ ಡಿಕೆ ಶಿವಕುಮಾರ್ ಅವರು ಮಂಡಿಯೂರಿ ಕ್ಷಮೆ ಕೇಳಬೇಕು ಎಂದು ಆರಗ ಜ್ಞಾನೇಂದ್ರ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಅಜ್ಞಾನದ ಜ್ಞಾನಿ ಎಂದು ಕರೆದಿದ್ದಾರೆ.
ಆದರೆ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆ ಜಾರಿಗೆ ತರಲು ಒತ್ತಾಯಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ನಾವು ನೀರಿಗಾಗಿ ಹೋರಾಟ ಮಾಡುತ್ತೇವೆ ಎಂದು ವಿಪಕ್ಷ ನಾಯಕರು ಪಣ ತೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಕಾರ್ಯಕರ್ತರ ಬೆಂಬಲದೊಂದಿಗೆ ನೀರಿಗಾಗಿ ಪಾದಯಾತ್ರೆ ಮಾಡುತ್ತಿದ್ದು ಕೈ ಕಾರ್ಯಕರ್ಯರು ರಾಜ್ಯದ ಮೂಲೆ ಮೂಲೆಗಳಿಂದ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಇದರಲ್ಲಿ ರಾಜ್ಯದಲ್ಲಿ ಕೊರೊನಾ ಹರಡುವ ಆತಂಕ ಹೆಚ್ಚಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್,'ರಾಜ್ಯದ ಜನರ ಹಿತವನ್ನು ಬಲಿ ಕೊಟ್ಟು ಪಾದಯಾತ್ರೆ ಮಾಡುತ್ತಿದ್ದಾರೆ. ಎಲ್ಲರಿಗೂ ಒಂದೇ ಕಾನೂನು. ನಿಯಮ ಗಾಳಿಗೆ ತೂರಿ ಇವರು ಪಾದಯಾತ್ರೆ ಮಾಡುತ್ತಿದ್ದಾರೆ. ಜನರ ಆರೋಗ್ಯದ ಹಿತವನ್ನು ಬಲಿಕೊಟ್ಟು ಪಾದಯಾತ್ರೆ ಮಾಡುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಜನರನ್ನು ಕರಿಸಿಕೊಂಡು ಈ ಪಾದಯಾತ್ರೆ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ. ನಮ್ಮ ಆರೋಗ್ಯ ಅಧಿಕಾರಿಗಳು ಆರೈಕೆ ಮತ್ತು ಪರೀಕ್ಷೆ ಮಾಡಲಿಕ್ಕೂ ನಿಂದಿಸಲಾಗುತ್ತಿದೆ. ಇಂಥಹ ಕೆಟ್ಟ ಸಂಸ್ಕೃತಿಯನ್ನು ಕೈ ನಾಯಕರು ಹೊಂದಿದ್ದಾರೆ. ಜನರನ್ನು ಹಾಳು ಮಾಡುವಂತ ಕೆಲಸ ಮಾಡುತ್ತಿದ್ದಾರೆ. ಆದರೂ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ನಮ್ಮ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲು ಸಮರ್ಥರಾಗಿದ್ದಾರೆಂದು' ಸುಧಾಕರ್ ಹೇಳಿದ್ದಾರೆ.
ಇನ್ನ ನಿಯಮ ಮೀರಿ ಪಾದಯಾತ್ರೆ ಮಾಡುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಒಟ್ಟು ಮೂವತ್ತು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.