ಮಂಡ್ಯದಲ್ಲಿ ಮಾರ್ವಾಡಿ ಕೊಂದು ಚಿನ್ನಾಭರಣ ದೋಚಿದ ದುಷ್ಕರ್ಮಿಗಳು
ಮಂಡ್ಯ, ಜನವರಿ 22: ಮಧ್ಯರಾತ್ರಿ ಮನೆಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು, ಹೆಂಡತಿ ಮಕ್ಕಳ ಬಾಯಿಗೆ ಬಟ್ಟೆ ತುರುಕಿ ಗಂಡನ ಕತ್ತು ಸೀಳಿ ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ.
ವಿದ್ಯಾನಗರ ಎರಡನೇ ಕ್ರಾಸ್ನಲ್ಲಿ ವಾಸವಿದ್ದ ರಾಜಸ್ಥಾನ ಮೂಲದ ಬುಂಡಾರಾಮ್ ಜೀ ವರಪ (27) ಎಂಬಾತನೇ ಹತ್ಯೆಯಾದ ವ್ಯಕ್ತಿ. ಬುಂಡಾರಾಮ್ ರಾಜಸ್ಥಾನದವನಾಗಿದ್ದು, ಮಂಡ್ಯದ ಗುತ್ತಲು ರಸ್ತೆಯಲ್ಲಿ ಹಾರ್ಡ್ವೇರ್ ಅಂಗಡಿ ನಡೆಸುತ್ತಿದ್ದನು.
ಜನವರಿ 20ರ ಸೋಮವಾರ ರಾತ್ರಿ ಬುಂಡಾರಾಮ್ ಮೊಬೈಲ್ಗೆ ಕರೆ ಬಂದಿದ್ದು, ಮಾತನಾಡುತ್ತ ಮನೆಯಿಂದ ಕೆಳಗೆ ಇಳಿದು ಗೇಟ್ನ ಬಳಿ ಬಂದಾಗ ನಾಲ್ವರು ದುಷ್ಕರ್ಮಿಗಳು ಗನ್ ತೋರಿಸಿ ಮನೆಯ ಒಳಗೆ ಕರೆದುಕೊಂಡು ಬಂದಿದ್ದಾರೆ. ಮನೆಯಲ್ಲಿದ್ದ ಪತ್ನಿ ಇಬ್ಬರು ಮಕ್ಕಳನ್ನು ಕೋಣೆಯೊಳಗೆ ಕೂಡಿಹಾಕಿ ಬಾಯಿಗೆ ಬಟ್ಟೆ ತುರುಕಿದ ದುಷ್ಕರ್ಮಿಗಳು ಬಳಿಕ ಈತನನ್ನು ಚಾಕುವಿನಿಂದ ಇರಿದು ಕುತ್ತಿಗೆ ಸೀಳಿ ಹೆಂಡತಿ ಮೈಮೇಲಿದ್ದ ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ.

ಸ್ವಲ್ಪ ಹೊತ್ತಿನ ಹೆಂಡತಿ ಮಕ್ಕಳು, ಬಾಯಿಗೆ ತುರುಕಿದ್ದ ಬಟ್ಟೆ ಹೊರತೆಗೆದು, ಕಿರುಚಲು ಆರಂಭಿಸಿದ್ದಾರೆ. ನೆರೆ ಹೊರೆಯವರು ಮನೆಯೊಳಗೆ ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಬಂಡುರಾಮ್ ಸಾವನ್ನಪ್ಪಿದ್ದರು. ಆತನ ಪತ್ನಿ ಹೇಳಿಕೆ ಆಧರಿಸಿ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ.












Click it and Unblock the Notifications