ಮಹಿಳಾ ಪೊಲೀಸ್ ಅಧಿಕಾರಿಗೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಬೆದರಿಕೆ
ಮಂಡ್ಯ, ಮೇ 7: ಮಂಡ್ಯದಲ್ಲಿ ಕೊರೊನಾ ವಾರಿಯರ್ಸ್ ಮೇಲೆ ರಾಜಕೀಯ ಪುಡಾರಿಗಳು ಬೆದರಿಕೆ ಹಾಕಿದ್ದಾರೆ. ಪತ್ರಕರ್ತರ ನಂತರ ಪೊಲೀಸರ ಮೇಲೆಯೂ ಕಿಡಿಗೇಡಿಗಳು ದೌರ್ಜನ್ಯ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಕೆಆರ್ಪೇಟೆಯ ಮಹಿಳಾ ಪ್ರೊಬೇಷನರಿ ಪಿಎಸ್ಐ ನಿಖಿತಾ ಮೇಲೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್ಕುಮಾರ್ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ವಿಜಯ್ಕುಮಾರ್ ಮಂಗಳವಾರ ಸಂಜೆ ಏಳು ಗಂಟೆಯ ನಂತರ ಕೆಆರ್ಪೇಟೆಯಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದು, ಇದನ್ನು ನಿಖಿತಾ ಪ್ರಶ್ನೆ ಮಾಡಿದ್ದಾರೆ.
ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ್ದ ಕಾರಣ, ವಿಜಯ್ ಕುಮಾರ್ ಕಾರು ತಡೆದು, ಈ ರೀತಿ ಓಡಾಟ ಮಾಡಬಾರದು ಎಂದು ಹೇಳಿದ್ದಾರೆ. ಆದರೆ, ವಿಜಯ್ ಕುಮಾರ್ ಮಹಿಳಾ ಪ್ರೊಬೇಷನರಿ ಪಿಎಸ್ಐಗೆ ಅವಾಜ್ ಹಾಕಿದ್ದಾರೆ.

''ನಾನು ಬಿಜೆಪಿ ಜಿಲ್ಲಾಧ್ಯಕ್ಷ. ನನ್ನ ನೀನು ಕೇಳುವ ಹಾಗೆ ಇಲ್ಲ. ನಿನ್ನದು ಅತಿಯಾಗುತ್ತಿದೆ.ನೀನು ಪಿಎಸ್ಐ ಅಲ್ಲ.. ಇನ್ನೂ ಪ್ರೊಪೇಷನರಿ. ನಾನು ಬೇಕಿದ್ರೆ, ಸಿಎಂ, ಡಿಎಂ, ಡಿಸಿ, ಎಸ್ಪಿಗೆ ಕಾಲ್ ಮಾಡ್ತೀನಿ. ನೀನು ನನ್ನ ಮೇಲೆ ಹಲ್ಲೆ ಮಾಡಿದೆ ದೂರು ನೀಡುತ್ತೀನಿ. ನಿನ್ನ ಕೆಲಸದಿಂದ ತೆಗೆಸುತ್ತೇನೆ'' ಎಂದು ವಿಜಯ್ಕುಮಾರ್ ಧಮ್ಕಿ ಹಾಕಿದ್ದಾನೆ.
ನಿಖಿತಾ ಅವರ ಕೆಲಸಕ್ಕೆ ಅಡ್ಡಿ ಪಡಿಸಿ ವಿಜಯ್ಕುಮಾರ್ ಬೆದರಿಕೆ ಹಾಕಿದ್ದಾನೆ.
ಹೀಗಾಗಿ ವಿಜಯ್ಕುಮಾರ್ ವಿರುದ್ಧ ನಿಖಿತಾ ಕೆಆರ್ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ವಿಜಯ್ಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆದರೆ, ಎಫ್ಐಆರ್ ಆದ ಬಳಿಕ ಸ್ಟೇಷನ್ ಬೇಲ್ನಲ್ಲಿ ವಿಜಯ್ ಕುಮಾರ್ನನ್ನು ಕಳುಹಿಸಿದ್ದಾರೆ. ದಿಟ್ಟತನದಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ನಿಕಿತಾಗೆ ಬೆಲೆಯೇ ಇಲ್ಲದಂತಾಗಿದೆ.












Click it and Unblock the Notifications