ವಿದ್ಯುತ್ ಸ್ಪರ್ಶಕ್ಕೆ ಕೃಷಿಕ ಅಪ್ಪ , ಬಿಇ ಪದವೀಧರ ಮಗ ಸಾವು
ಮಂಡ್ಯ, ಜೂನ್ 14: ವಿದ್ಯುತ್ ಸ್ಪರ್ಶದಿಂದ ಅಪ್ಪ- ಮಗ ಮೃತಪಟ್ಟ ಹೃದಯವಿದ್ರಾವಕ ಘಟನೆ ಮಂಡ್ಯ ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಗುರುವಾರ ಸಂಭವಿಸಿದ್ದು, ರೇಷ್ಮೆ ಹುಳುಗಳಿಗೆ ಹಿಪ್ಪುನೇರಳೆ ಸೊಪ್ಪು ಹಾಕಲು ಹೋದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಕರಿಗುಂಡೇಗೌಡ (62), ಮಗ ಸತೀಶ್ (32) ಮೃತಪಟ್ಟವರು. ಗ್ರಾಮದಲ್ಲಿ ರೇಷ್ಮೆ ಕೃಷಿ ಮಾಡಿಕೊಂಡಿದ್ದರು. ಮೃತ ಸತೀಶ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ತಂದೆಯೊಂದಿಗೆ ರೇಷ್ಮೆ ಕೃಷಿ ಮಾಡುತ್ತಿದ್ದರು.
ಗುರುವಾರ ಬೆಳಗ್ಗೆ 4ರ ಸಮಯದಲ್ಲಿ ಇಬ್ಬರೂ ರೇಷ್ಮೆ ಹುಳುಗಳಿಗೆ ಹಿಪ್ಪು ನೇರಳೆ ಸೊಪ್ಪು ಹಾಕಲು ಪಕ್ಕದಲ್ಲೇ ಇದ್ದ ರೇಷ್ಮೆ ಸಾಕಾಣಿಕೆ ಕೇಂದ್ರಕ್ಕೆ ಹೋಗಿದ್ದು, ಈ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಕರಿಗುಂಡೇಗೌಡ ಅವರು ತುಳಿದಿದ್ದಾರೆ. ತಕ್ಷಣ ವಿದ್ಯುತ್ ಸ್ಪರ್ಶದಿಂದ ಕೂಗಿದ್ದಾರೆ. ಆಗ ತಂದೆಯ ರಕ್ಷಣೆಗೆ ತೆರಳಿದ ಮಗ ಸತೀಶ್ ಗೂ ವಿದ್ಯುತ್ ಸ್ಪರ್ಶವಾಗಿದ್ದು, ಸ್ಥಳದಲ್ಲೇ ಇಬ್ಬರೂ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದು ತಹಸೀಲ್ದಾರ್ ಎಲ್.ನಾಗೇಶ್ ಅವರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ಡಿವೈಎಸ್ ಪಿ ಗಂಗಾಧರಸ್ವಾಮಿ, ಮಂಡ್ಯ ಗ್ರಾಮಾಂತರ ಎಸ್ಸೈ ಸುರೇಶ್ ಕುಮಾರ್, ಪಿಎಸ್ ಐ ಅಜರುದ್ದೀನ್, ಸೆಸ್ಕ್ ಮಂಡ್ಯ ಗ್ರಾಮಾಂತರ ಎಇಇ ಜಯಪ್ರಕಾಶ್, ಮೈಸೂರು ವಿಭಾಗದ ಪರಿವೀಕ್ಷಕ ಕಾಂತರಾಜು ಸ್ಥಳಕ್ಕೆ ಭೇಟಿ ನೀಡಿದ್ದರು.












Click it and Unblock the Notifications