ಸಾಲಬಾಧೆಗೆ ರೈತ ಆತ್ಮಹತ್ಯೆ, ಅಂತಿಮ ಕಾರ್ಯಕ್ಕೆ ಸಿಎಂ ಬರಲೆಂಬ ಕೊನೆಯಾಸೆ
ಮಂಡ್ಯ, ಸೆಪ್ಟೆಂಬರ್ 12: ರೈತರ ಆತ್ಮಹತ್ಯೆ ತಡೆಯುವ ಮಹತ್ ಉದ್ದೇಶದಿಂದ ಸಾಲಮನ್ನಾ ಮಾಡಿದ ಮೈತ್ರಿ ಸರ್ಕಾರ. ಆದರೂ ರೈತರ ಆತ್ಮಹತ್ಯೆ ಪೂರ್ಣ ನಿಂತಿಲ್ಲ.
ಸಾಲದ ಸುಳಿಗೆ ಸಿಲುಕಿದ್ದ ಮಂಡ್ಯ ಜಿಲ್ಲೆಯ ಮಲಗರನಹಳ್ಳಿ ರೈತ ರಾಜೇಶ್ ಸೋಮವಾರ ರಾತ್ರಿ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಬರೆದಿರುವ ಪತ್ರದಲ್ಲಿ ತನ್ನ ಅಂತಿಮ ಕಾರ್ಯದಲ್ಲಿ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಮಂತ್ರಿ ಅಂಬರೀಶ್ ಭಾಗವಹಿಸಬೇಕು ಎಂದು ಕೋರಿಕೊಂಡಿದ್ದಾನೆ.
ಸಾಲದ ಋಣದಿಂದ ಬಿಡುಗಡೆ: ದುರ್ಬಲ ವರ್ಗದವರಿಗೆ ರಾಜ್ಯ ಸರ್ಕಾರದ ಕೊಡುಗೆ
ಆದರೆ ಮದ್ದೂರು ಪೊಲೀಸರು ಈ ವಿಷಯವನ್ನು ತಳ್ಳಿ ಹಾಕಿದ್ದು, ರಾಜೇಶ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದ ಬಳಿ ಈ ರೀತಿಯ ಯಾವುದೇ ಆತ್ಮಹತ್ಯೆ ಪತ್ರ ದೊರೆತಿಲ್ಲ ಎಂದಿದ್ದಾರೆ.
ರಾಜೇಶ್ಗೆ 5 ಲಕ್ಷ ಸಾಲ ಇತ್ತು ಎನ್ನಲಾಗಿದೆ. 1.75 ಲಕ್ಷ ರೂಪಾಯಿ ಬ್ಯಾಂಕ್ ಸಾಲವಾಗಿದ್ದರೆ. ಇನ್ನುಳಿದ ಮೊತ್ತವನ್ನು ಆತ ಖಾಸಗಿ ಸಾಲವಾಗಿ ಕೆಲವರಿಂದ ಪಡೆದಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಐದು ಎಕರೆ ಕೃಷಿ ಭೂಮಿ ಹೊಂದಿದ್ದ ಎಂ.ರಾಜೇಶ್ ರಾಗಿ ಸೇರಿದಂತೆ ಕೆಲವು ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದ. ನಿನ್ನೆ ಸಂಜೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ತಡರಾತ್ರಿಯಾದರೂ ಮನೆಗೆ ಬಾರದಿದ್ದನ್ನು ಕಂಡು ಸ್ಥಳೀಯರು ಹುಡುಕಿದಾಗ ಆತ ತನ್ನ ಜಮೀನಿನಲ್ಲೇ ನೇಣು ಹಾಕಿಕೊಂಡಿದ್ದನ್ನು ಕಂಡಿದ್ದಾರೆ.
ದಿನದ ಮಟ್ಟಿಗೆ ಬಡ್ಡಿರಹಿತ ಸಾಲ ನೀಡುವ ಎಚ್ಡಿಕೆ ಜನಪ್ರಿಯ ಯೋಜನೆ!
ಆತ ನೇಣು ಹಾಕಿಕೊಂಡ ಜಾಗದಲ್ಲಿ ಆತ್ಮಹತ್ಯೆ ಪತ್ರವೊಂದು ದೊರೆತಿದೆ. ಅದರಲ್ಲಿ ತನ್ನ ಅಂತಿಮ ಕ್ರಿಯೆಗೆ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಮತ್ತು ಅಂಬರೀಶ್ ಬರಬೇಕೆಂದು ಬರೆದಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.