ಚಾಲಕ ಆತ್ಮಹತ್ಯೆ ಹಿಂದೆ ಪ್ರಭಾವಿಗಳ ಹೆಸರು, ಲಂಚದ ಆರೋಪ
ಮದ್ದೂರಿನ ಶಿವಪುರದಲ್ಲಿ ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಭೀಮಾ ನಾಯ್ಕ್ ಅವರ ಚಾಲಕ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅತ ಬರೆದಿರುವ ಹನ್ನೊಂದು ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಸ್ಫೋಟಕ ಮಾಹಿತಿಗಳಿವೆ.
ಮಂಡ್ಯ, ಡಿಸೆಂಬರ್ 7: ಮದ್ದೂರಿನ ಶಿವಪುರದಲ್ಲಿ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಮೇಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ಹನ್ನೊಂದು ಪುಟಗಳ ಮರಣ ಪತ್ರ ಬರೆದಿಟ್ಟಿದ್ದು, ಬೆಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾ ನಾಯ್ಕ್ ಹಾಗೂ ಅವರ ಚಾಲಕ ಮಹಮ್ಮದ್ ನನ್ನು ತನ್ನ ಸಾವಿಗೆ ಹೊಣೆ ಎಂದು ಬರೆದಿರುವುದಾಗಿ ತಿಳಿದುಬಂದಿದೆ.
ಭೀಮಾನಾಯ್ಕ್ ನೂರು ಕೋಟಿಗೂ ಹೆಚ್ಚಿನ ಸಂಪಾದನೆ ಮಾಡಿದ್ದಾರೆ. ಹಿಂದಿನ ಕಂದಾಯ ಸಚಿವರ ಆಪ್ತ ಕಾರ್ಯದರ್ಶಿಗೆ ಇಪ್ಪತ್ತೈದು ಲಕ್ಷ ಲಂಚ ನೀಡಿದ್ದರು. ತಮ್ಮ ವಿರುದ್ಧ ಇದ್ದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರಿಗೂ ಲಂಚ ನೀಡಿದ್ದರು ಎಂದು ರಮೇಶ್ ತನ್ನ ಮರಣಪತ್ರದಲ್ಲಿ ಬರೆದಿದ್ದಾನೆ.[ಸಾಲದ ಸುಳಿಗೆ ಸಿಲುಕಿ ತಿರುಮಲಾಪುರ ರೈತ ಮಹಿಳೆ ಆತ್ಮಹತ್ಯೆ]
ಮುಂದಿನ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಸಂಸದ ಶ್ರೀರಾಮುಲು ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಹಣ ನೀಡಿದ್ದಾರೆ ಎಂದು ಆರೋಪಿಸಿರುವ ರಮೇಶ್, ಈ ಎಲ್ಲ ವಿಚಾರಗಳು ನನಗೆ ಗೊತ್ತಿರುವುದರಿಂದ ಜೀವ ಬೆದರಿಕೆ ಇತ್ತು. ನನ್ನ ಸಾವಿಗೆ ಭೀಮಾನಾಯ್ಕ್ ಹಾಗೂ ಅವರ ಮನೆ ಚಾಲಕ ಮಹಮ್ಮದ್ ಕಾರಣ ಎಂದು ತಿಳಿಸಿದ್ದಾನೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.