ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗ ಕಾಮಗಾರಿ ಪೂರ್ಣ
ಮಂಡ್ಯ, ನವೆಂಬರ್ 07 : ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ರೈಲ್ವೆ ಇಲಾಖೆಯ ಉನ್ನತಾಧಿಕಾರಿಗಳ ತಂಡ ಮಾರ್ಗದಲ್ಲಿ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿದೆ. ಟಿಪ್ಪು ಸುಲ್ತಾನ್ ಕಾಲದ ಶಸ್ತ್ರಾಗಾರ ಸ್ಥಳಾಂತರ ಪ್ರಕ್ರಿಯೆಯಿಂದಾಗಿ ಕಾಮಗಾರಿ ವಿಳಂಬವಾಗಿತ್ತು.
ಶ್ರೀರಂಗಪಟ್ಟಣದ ಕಾವೇರಿ ನದಿಯ ಎರಡೂ ಸೇತುವೆಗಳ ನಡುವಿನ 1.5 ಕಿ.ಮೀ. ಉದ್ದದ ಮಾರ್ಗದಲ್ಲಿ ಸೋಮವಾರ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಟ್ರ್ಯಾಲಿ ಮೂಲಕ ಸಂಚಾರ ನಡೆಸಿದ ರೈಲ್ವೆ ಸುರಕ್ಷತಾ ಆಯುಕ್ತ ಮನೋಹರ್ ನೇತೃತ್ವದ ತಂಡ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿತು.
ಬೆಂ-ಮೈ ಜೋಡಿ ಹಳಿಗೆ ಅಡ್ಡಿಯಾದ ಟಿಪ್ಪು ಮದ್ದಿನ ಮನೆ
ಬೆಂಗಳೂರು-ಮೈಸೂರು ನಡುವಿನ 140 ಕಿ.ಮೀ. ಉದ್ದದ ಜೋಡಿ ಮಾರ್ಗ ಕಾಮಗಾರಿ ಶ್ರೀರಂಗಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿತ್ತು. ರೈಲ್ವೆ ಮಾರ್ಗದಲ್ಲಿದ್ದ ಟಿಪ್ಪು ಸುಲ್ತಾನ್ ಕಾಲದ ಶಸ್ತ್ರಾಗಾರವನ್ನು ಸ್ಥಳಾಂತರ ಮಾಡಿ ಬಳಿಕ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ರೈಲ್ವೆ ಹಳಿಗೆ ಇನ್ನೂ ಕಗ್ಗಂಟಾಗೇ ಉಳಿದ ಟಿಪ್ಪು ಶಸ್ತ್ರಾಗಾರ
ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ಮುಗಿಸಿದ್ದು, ಕೆಂಗೇರಿಯಿಂದ ಯಲಿಯೂರು ವರೆಗೆ ವಿದ್ಯುದೀಕರಣ ಕಾಮಗಾರಿ ಬಾಕಿ ಇದೆ. ನವೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬಳಿಕ ಜೋಡಿ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅನುಮತಿ ಸಿಗಲಿದೆ.