ಮೇಲುಕೋಟೆ ಒಡೆಯನಿಗೆ ನಿಷೇಧಿತ ನೋಟಿನ ಕಾಣಿಕೆಯಿತ್ತ ಭಕ್ತರು!
ಮಂಡ್ಯ, ಏಪ್ರಿಲ್ 09 : ಇತ್ತೀಚೆಗೆ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ಅದ್ಧೂರಿಯಾಗಿ ನಡೆದಿದ್ದು, ಲಕ್ಷಾಂತರ ಜನರು ಇದರಲ್ಲಿ ಭಾಗವಹಿಸಿದ್ದರೂ ಬೇರೆ ದೇವಾಲಯಗಳಿಗೆ ಬೀಳುವಂತೆ ಕೋಟಿ ಹಣ ಸಂಗ್ರಹವಾಗದಿದ್ದರೂ ಈ ಬಾರಿ 12,63,793 ರೂ ಸಂಗ್ರಹವಾಗಿದ್ದು, ಇದು ದಾಖಲೆ ಸಂಗ್ರಹ ಎಂದು ಹೇಳಲಾಗಿದೆ.
ಇದಕ್ಕಿಂತ ವಿಶೇಷ ಏನೆಂದರೆ ಈಗಾಗಲೇ ಹಳೆಯ ಐನೂರು, ಸಾವಿರ ನೋಟುಗಳು ಅಮಾನ್ಯಗೊಂಡು ಒಂದೂವರೆ ವರ್ಷ ಕಳೆದಿದ್ದರೂ ಭಕ್ತರಾರೋ ಹಳೆಯ 500 ಮುಖ ಬೆಲೆಯ 11 ನೋಟು, 1000 ಮುಖ ಬೆಲೆಯ 2 ನೋಟುಗಳನ್ನು ಹರಕೆಯಾಗಿ ಹಾಕಿರುವುದು ಎಣಿಕೆ ವೇಳೆ ಪತ್ತೆಯಾಗಿದೆ.
ಉ.ಪ್ರದೇಶ: 100 ಕೋಟಿ ಮೌಲ್ಯದ ರದ್ದಾದ ನೋಟು ವಶ
ಮೊದಲೆಲ್ಲ ವೈರಮುಡಿ ಬ್ರಹ್ಮೋತ್ಸವದ ವೇಳೆ ಎರಡು ತಿಂಗಳಲ್ಲಿ ಹುಂಡಿಗಳಲ್ಲಿ ಬಾರಿ ಪ್ರಮಾಣದಲ್ಲಿ ಹಣ ಸಂಗ್ರಹವಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಮಾಣದ ಕಾಣಿಕೆ ಸಂಗ್ರಹವಾಗಿರಲಿಲ್ಲ. ಈ ಬಾರಿಯ ಸಂಗ್ರಹವೇ ಅತಿ ಹೆಚ್ಚು ಎಂದು ಹೇಳಲಾಗಿದೆ.
ಯೋಗಾನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಬೆಟ್ಟದ ಗರ್ಭಗುಡಿ ಸೇರಿದಂತೆ ಒಟ್ಟು 4 ಹುಂಡಿಗಳಲ್ಲಿ ಸಂಗ್ರಹವಾದ ಕಾಣಿಕೆ ಹಣವನ್ನು ಕಂದಾಯ ಮತ್ತು ಮುಜರಾಯಿ ಇಲಾಖೆ, ಬ್ಯಾಂಕ್ ನೌಕರರ ಸಹಕಾರದಲ್ಲಿ ಎಣಿಕೆ ಮಾಡಲಾಗಿದೆ.