ಮಂಡ್ಯ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಏನು?
ಮಳವಳ್ಳಿ, ಜನವರಿ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನವ ಕರ್ನಾಟಕ ನಿರ್ಮಾಣ ಯಾತ್ರೆ ಇಂದು ಮಂಡ್ಯ ಜಿಲ್ಲೆ ತಲುಪಿದೆ. ಜಿಲ್ಲೆಯ ಎರಡು ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.
ಸರ್ವ ಋತು ರಾಜಕಾರಣ ಜಿಲ್ಲೆಯೆಂದೇ ಖ್ಯಾತವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರುಗಳ ನಡುವೆ ಅಸಮಾಧಾನ ಹೊಗೆ ಆಡುತ್ತಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಂಡ್ಯಕ್ಕೆ ಭೇಟಿ ನೀಡುತ್ತಿರುವುದು ಕುತೂಹಲ ಕೆರಳಿಸಿದೆ.
ಚಾಮರಾಜನಗರ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರ ಕೊಟ್ಟಿರುವುದೇನು?
ಜಿಲ್ಲೆಯ ಪ್ರಮುಖ ರಾಜಕೀಯ ಕ್ಷೇತ್ರಗಳಾದ ಮಳವಳ್ಳಿ ಮತ್ತು ಶ್ರೀರಂಗಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗಲೇ ಮಳವಳ್ಳಿ ಕ್ಷೇತ್ರದ ಕಾರ್ಯಕ್ರಮ ಮುಗಿದಿದ್ದು, ಯಾತ್ರೆ ನಂಜನಗೂಡಿನತ್ತ ತೆರಳಿದೆ.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಜೊತೆಗೆ ಸ್ಥಳೀಯ ಶಾಸಕರು, ಮುಖಂಡರು, ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಫಲಾನುಭವಿಗಳಿಗೆ ಯೋಜನೆಗಳನ್ನು ವಿತರಿಸಲಿದ್ದಾರೆ.
ತಮ್ಮ ಭಾಷಣದಲ್ಲಿ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಸರ್ಕಾರ ನೀಡಿರುವ ಕೊಡುಗೆಗಳ ಬಗ್ಗೆ ಪ್ರಸ್ತಾಪ ಮಾಡಲಿರುವ ಸಿದ್ದರಾಮಯ್ಯ ಅವರು ಮಂಡ್ಯ ರಾಜಕೀಯದ ವಿಮರ್ಶೆ ಮಾಡಲಿದ್ದಾರೆ ಎನ್ನಲಾಗಿದೆ.
ಮಂಡ್ಯ ಜಿಲ್ಲೆಗೆ ಸರ್ಕಾರ ನೀಡಿರುವ ಕೊಡುಗೆಗಳ ಪಟ್ಟಿ ಇಲ್ಲಿದೆ...
ಜಿಲ್ಲೆಯ ರೈತರ 429 ಕೋಟಿ ಸಾಲ ಮನ್ನಾ
ಅನ್ನಭಾಗ್ಯ ಯೋಜನೆಯಡಿ ಮಂಡ್ಯ ಜಿಲ್ಲೆಯ 4.46 ಲಕ್ಷ ಬಿಪಿಎಲ್ ಹಾಗೂ 40,000 ಎಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದ್ದು ಜಿಲ್ಲೆಯ ಹಸಿವಿನ ಪ್ರಮಾಣ ಗಣನೀಯವಾಗಿ ತಗ್ಗಿದೆ. ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡ ಸರ್ಕಾರವು ಸಹಕಾರ ಸಂಸ್ಥೆಗಳಿಂದ ರೂ.50 ಸಾವಿರವರೆಗಿನ ಅಲ್ಪಾವಧಿ ಬೆಳೆ ಸಾಲ ಮನ್ನಾ ಮಾಡಿದ್ದು, ಮಂಡ್ಯ ಜಿಲ್ಲೆಯಲ್ಲಿ 1.16 ಲಕ್ಷ ರೈತರ ರೂ. 429 ಕೋಟಿ ಬೆಳೆ ಸಾಲವನ್ನು ಮನ್ನಾ ಮಾಡಿ, ರೈತರಿಗೆ ಹೆಗಲು ನೀಡಿದೆ.
ಜಿಲ್ಲೆಯ ರೈತರಿಗೆ 45 ಕೋಟಿ ಸಹಾಯಧನ ಧನ ವಿತರಣೆ
2016-17 ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಯು ಬರ ಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದರಿಂದ ಜಿಲ್ಲೆಯ ಮುಂಗಾರು ಹಾಗೂ ಹಿಂಗಾರು ಬೆಳೆ ನಷ್ಟದ ಪರಿಹಾರ ಮೊತ್ತವನ್ನು ಸರ್ಕಾರದಿಂದಲೇ ಪಾವತಿಸಲಾಗಿದ್ದು 1.45 ಲಕ್ಷ ರೈತ ಫಲಾನುಭವಿಗಳಿಗೆ ರೂ.80 ಕೋಟಿ ಮುಂಗಾರು ಬೆಳೆ ನಷ್ಟ ಪರಿಹಾರ ಹಾಗೂ 42 ಸಾವಿರ ರೈತ ಫಲಾನುಭವಿಗಳಿಗೆ ರೂ. 15.50 ಕೋಟಿ ಹಿಂಗಾರು ಬೆಳೆ ನಷ್ಟ ಪರಿಹಾರವನ್ನು ನೀಡಲಾಗಿದೆ. ರೈತರಿಗಾಗಿ ರಾಜ್ಯ ಸರ್ಕಾರ 2014-15ನೇ ಸಾಲಿನಿಂದ ಕೃಷಿಭಾಗ್ಯ ಯೋಜನೆಯನ್ನು ಘೋಷಿಸಿದ್ದು, 2014-15 ನೇ ಸಾಲಿನಿಂದ ಈವರೆಗೆ ರೂ.45 ಕೋಟಿ ಸಹಾಯಧನವನ್ನು 4,251 ರೈತ ಫಲಾನುಭವಿಗಳಿಗೆ ನೀಡಲಾಗಿದೆ.
ಅರಮನೆ ನಗರಿಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳು
ಕೃಷಿ ಭಾಗ್ಯ ಅಡಿ 4647 ಲಕ್ಷ ಸಹಾಯಧನ
ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿ ಸದರಿ ಯೋಜನೆಯಡಿ ಇದುವರೆಗೂ ರೂ. 458 ಲಕ್ಷ ಅನುದಾನವನ್ನು ಜಿಲ್ಲೆಗೆ ಬಿಡುಗಡೆ ಮಾಡಲಾಗಿದ್ದು, 900 ಫಲಾನುಭವಿಗಳಿಗೆ ರೂ. 394 ಲಕ್ಷ ವೆಚ್ಚಭರಿಸಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು 4554 ಫಲಾನುಭವಿಗಳು ಜಮೀನಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿದ್ದು, ಪಾಲಿಹೌಸ್ ಮತ್ತ್ತು ಪಾಲಿಹೌಸ್ ರಹಿತ ಮಾದರಿ ಅನುಷ್ಠಾನಗೊಳಿಸಿದ ರೈತರಿಗೆ ಇದುವರೆವಿಗೂ ಒಟ್ಟು ರೂ. 4647 ಲಕ್ಷ ಸಹಾಯಧನವನ್ನು ನೀಡಲಾಗಿದೆ.
ಈ ವರ್ಷ 10,300 ಮನೆ ನಿರ್ಮಾಣ ಗುರಿ
2016-17ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 12,136 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 139 ನಿವೇಶನವನ್ನು ಹಂಚಲಾಗಿದೆ. 2017-18ನೇ ಸಾಲಿನಲ್ಲಿ ಜಿಲ್ಲೆಗೆ ವಸತಿ ನಿಗಮದಿಂದ 10300 ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ನೀಡಲಾಗಿದ್ದು ಪ್ರಸ್ತುತ 3247 ಮನೆಗಳ ನಿರ್ಮಾಣವು ಪೂರ್ಣಗೊಂಡಿವೆ.
227 ಕೋಟಿ ವೆಚ್ಚದ ಮೆಗಾ ಡೈರಿಗೆ ಚಾಲನೆ
ಸಕ್ಕರೆ ಜಿಲ್ಲೆ ಈಗ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿನ ಎಲ್ಲಾ 234 ಗ್ರಾಮ ಪಂಚಾಯಿತಿಗಳು 2012ರ ಬೇಸ್ಲೈನ್ ಸಮೀಕ್ಷೆಯಲ್ಲಿ ಗುರುತಿಸಿದ ಎಲ್ಲಾ ಕುಟುಂಬಗಳಿಗೂ ವೈಯಕ್ತಿಕ ಗೃಹ ಶೌಚಾಲಯ ಕಲ್ಪಿಸುವ ಮೂಲಕ ಶೇ 100ರಷ್ಠು ಸಾಧನೆ ಮಾಡಿದೆ. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಡೇರಿ ಆವರಣದಲ್ಲಿ ದಿನವಹಿ 12 ಲಕ್ಷ ಲೀಟರ್ ಸಾಮಥ್ರ್ಯದ ರೂ.227 ಕೋಟಿ ವೆಚ್ಚದ ನೂತನ ಮೆಗಾ ಡೈರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ.
62 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) ಅಡಿಯಲ್ಲಿ ಮದ್ದೂರು ತಾಲ್ಲೂಕಿನ ಕೌಡ್ಲೆ ಗ್ರಾಮದಿಂದ ಮಂಡ್ಯ ನಗರದವರೆಗೆ 16.5 ಕಿ.ಮೀ ಉದ್ದದ ರಸ್ತೆ ನಿರ್ಮಿಸಲಾಗಿದ್ದು ರೂ.114 ಕೋಟಿ ವೆಚ್ಚದ ಮಂಡ್ಯ ಜಿಲ್ಲೆಯ ಮಳವಳ್ಳಿ, ಮದ್ದೂರು ಹಾಗೂ ಛತ್ರಲಿಂಗನದೊಡ್ಡಿವರೆಗೆ 35.76 ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ರೂ.53 ಕೋಟಿ ವೆಚ್ಚದಲ್ಲಿ ಅರಳುಕುಪ್ಪೆ ಹಾಗೂ ಇತರೆ 62 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಯನ್ನು ರೂಪಿಸಲಾಗಿದ್ದು 84,374 ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
155 ಕೋಟಿ ವೆಚ್ಚದಲ್ಲಿ ಬಹುಗ್ರಾಮಕ್ಕೆ ಕುಡಿಯುವ ನೀರು
ಮಂಡ್ಯ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ರೂ. 696 ಕೋಟಿ ವೆಚ್ಚದಲ್ಲಿ ಒಟ್ಟು 750 ಕಿ.ಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದು, ರೂ. 12 ಕೋಟಿ ವೆಚ್ಚದಲ್ಲಿ 13 ಸೇತುವೆಗಳು ಹಾಗೂ ರೂ. 51 ಕೋಟಿ ವೆಚ್ಚದಲ್ಲಿ 23 ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಹಾಗೂ ಇತರೆ 128 ಗ್ರಾಮಗಳ ರೂ.154.62 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ನವೆಂಬರ್ 20 ರಂದು ಚಾಲನೆ ನೀಡಲಾಗಿದೆ.
458 ಕಿ.ಮಿ ಉದ್ದದ ನಾಲಾ ಅಭಿವೃದ್ಧಿ
ವಿಶ್ವೇಶ್ವರಯ್ಯ ನಾಲಾ ಜಾಲದ ಮೊದಲನೇ ಹಂತದ ಅಭಿವೃದ್ಧಿಯಲ್ಲಿ 5 ಪ್ಯಾಕೇಜ್ಗಳಿಂದ ಒಟ್ಟು 458 ಕಿ.ಮೀ. ಉದ್ದದ ನಾಲಾಗಳನ್ನು ಅಭಿವೃದ್ಧಿ ಪಡಿಸಲು ರೂ.330 ಕೋಟಿಗಳ ಮೊತ್ತದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ನಾಲಾ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ. ಚಿಕ್ಕದೇವರಾಯಸಾಗರ ಅಣೆಕಟ್ಟು ನಾಲೆ 17ನೇ ಶತಮಾನದಲ್ಲಿ ಮಹಾರಾಜರ ಕಾಲದಲ್ಲಿ ನಿರ್ಮಿತವಾಗಿದ್ದು, 104 ಕಿ.ಮೀ. ಉದ್ದದ ನಾಲೆಯನ್ನು ರೂ.240 ಕೋಟಿಗಳಲ್ಲಿ ಅಭಿವೃದ್ಧಿಪಡಿಸಿ, ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ವರ್ಷದಲ್ಲಿ 54800 ಕ್ವಿಂಟಲ್ ಸಕ್ಕರೆ ಉತ್ಪಾದಿಸಿದೆ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ 602 ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮಂಜೂರಾತಿ ನೀಡಲಾಗಿದ್ದು, 402 ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಗಿದ್ದು ಇದಕ್ಕಾಗಿ ಸುಮಾರು ರೂ. 29.58 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.ಮೈ ಷುಗರ್ ಸಕ್ಕರೆ ಕಾರ್ಖಾನೆಯ 2017-18 ನೇ ಸಾಲಿನ ಕಬ್ಬು ಅರೆಯುವ ಕಾರ್ಯವು ಜುಲೈ 07, 2017 ರಂದು ಆರಂಭಗೊಂಡಿದ್ದು, 82094 ಮೆ.ಟನ್ ಕಬ್ಬನ್ನು ಅರೆದು 54800 ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ. ಅಲ್ಲದೇ ಈಗಾಗಲೇ ನುರಿಸಿರುವ ಕಬ್ಬಿಗೆ ರೂ.1282 ಲಕ್ಷವನ್ನು ಪಾವತಿಸಲಾಗಿದೆ. 2013-14 ರಿಂದ ಈವರೆಗೆ ಕಾರ್ಖಾನೆಯ ಪುನಶ್ಚೇತನಕ್ಕಾಗಿ ರೂ.150 ಕೋಟಿ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಿದೆ.