ಭಕ್ತರ ಹರ್ಷೋದ್ಗಾರದ ನಡುವೆ ಸಂಭ್ರಮದ ವೈರಮುಡಿ ಉತ್ಸವ
ಮಂಡ್ಯ, ಜುಲೈ 24: ಭಕ್ತರ ಹರ್ಷೋದ್ಗಾರದ ನಡುವೆ ಮಂಗಳವಾರ ರಾತ್ರಿ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ನೆರವೇರಿತು.
ವಜ್ರಖಚಿತ ಕಿರೀಟ ಧರಿಸಿದ ಚೆಲುವನಾರಾಯಣಸ್ವಾಮಿ ಉತ್ಸವ ಮೂರ್ತಿ ದೇವಾಲಯದ ಹೊರಕ್ಕೆ ಬರುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿದರು. ವೈರಮುಡಿಗೆ ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಪ್ರಥಮ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಇಂದಿನಿಂದ ಮೇಲುಕೋಟೆಯಲ್ಲಿ ವೈಭವದ ವಜ್ರಮುಡಿ ಉತ್ಸವ
ವೈರಮುಡಿಯನ್ನು ಕಣ್ತುಂಬಿಕೊಂಡ ಭಕ್ತರು ಗೋವಿಂದ ಗೋವಿಂದ ಮಂತ್ರ ಜಪಿಸಿದರು. ಚೆಲುವನಾರಾಯಣಸ್ವಾಮಿ ಉತ್ಸವ ಮೂರ್ತಿಯ ಕಿರೀಟವನ್ನು ತಿರುವಾಭರಣಗಳಿಂದ ಅಲಂಕರಿಸಲಾಗಿತ್ತು. ಗರುಡದೇವನ ಮೆರವಣಿಗೆಯೊಂದಿಗೆ ಬ್ರಹ್ಮೋತ್ಸವ ಆರಂಭವಾಯಿತು. ಪಟಾಕಿ ಸಿಡಿಸಿ ಪಲ್ಲಕ್ಕಿಗೆ ಸ್ವಾಗತ ಕೋರಲಾಯಿತು.
ಚೆಲುವನಾರಾಯಣ ಸ್ವಾಮಿಯ ಪಲ್ಲಕ್ಕಿಯನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಮೆರವಣೆಗೆ ತೆರಳುವ ರಾಜಬೀದಿ ತಳಿರು, ತೋರಣ, ದೀಪಾಲಂಕಾರದಿಂದ ಬೆಳಗುತ್ತಿತ್ತು. ಬೀದಿಯ ಎರಡೂ ಬದಿಯಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ರಾಜ್ಯ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದಲೂ ಭಕ್ತರು ಬಂದಿದ್ದರು. ಮೇಲುಕೋಟೆಯ ವಸತಿ ಗೃಹಗಳು, ಛತ್ರಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದವು.
ಮಂಡ್ಯ : ಜುಲೈ 23ರಂದು ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವ
ಜಿಲ್ಲಾ ಖಜಾನೆಯಲ್ಲಿದ್ದ ವೈರಮುಡಿ ಹಾಗೂ ರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಜಿಲ್ಲಾಧಿಕಾರಿಗಳು ಹೊರ ತೆಗೆದರು. ನಂತರ ಮಂಡ್ಯದ ಲಕ್ಷ್ಮಿಜನಾರ್ದನ ದೇವಾಲಯದಲ್ಲಿ ಆಭರಣ ಪೆಟ್ಟಿಗೆಗೆ ಪ್ರಥಮ ಪೂಜೆ ಸಲ್ಲಿಸಿ ವಿಶೇಷ ವಾಹನದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಸಂಜೆ ವೈರಮುಡಿ, ರಾಜಮುಡಿ ಮೇಲುಕೋಟೆ ತಲುಪಿದವು.
ಸ್ಥಾನೀಕರಾದ ಕರಗಂ ನಾರಾಯಣ ಅಯ್ಯಂಗಾರ್, ಎಸ್.ತಿರುನಾರಾಯಣ ಅಯ್ಯಂಗಾರ್, ಶ್ರೀನಿವಾಸ ನರಸಿಂಹ ಗುರೂಜಿ, ಮುಕುಂದನ್, ನರಸಿಂಹಯ್ಯಂಗಾರ್, ಶ್ರೀರಾಮನ್, ಅರ್ಚಕರಾದ ವಿದ್ವಾನ್ ವಿ.ಬಿ.ಆನಂದಾಳ್ವಾರ್ ಭಾಗವಹಿಸಿದ್ದರು.