ಕಾವೇರಿ ತೀರ್ಪು: ಮಂಡ್ಯದಲ್ಲಿ ನೀರು ಕುಡಿದು ಸಂಭ್ರಮಿಸಿದ ಜನ
ಮಂಡ್ಯ, ಫೆಬ್ರವರಿ 16: ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಕಾವೇರಿ ನದಿ ನೀರು ಹಂಚಿಕೆ ಕುರಿತ ನೀಡಿದ ಮಂಡ್ಯದ ಜನತೆಗೆ ತುಸು ಸಮಾಧಾನ ತಂದಿದ್ದು, ಈ ಹಿನ್ನಲೆಯಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು ವಿಭಿನ್ನವಾಗಿ ಸಂಭ್ರಮಾಚರಣೆ ಮಾಡಿದ್ದಾರೆ.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಕಾರ್ಯಕರ್ತರು ನೀರು ಕುಡಿಯುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಶತಮಾನದ ಕಾವೇರಿ ಚಳವಳಿಯಿಂದ ದಣಿದಿರುವ ಕಾವೇರಿ ಹೋರಾಟಗಾರರಿಗೆ ಈ ತೀರ್ಪಿನಿಂದ ನೀರು ಕುಡಿದಷ್ಟೇ ಸಮಾಧಾನವಾಗಿದೆ ಎಂದು ಹೇಳಿದ್ದಾರೆ.
ತೀರ್ಪು ಹೊರಬೀಳುತ್ತಿದ್ದಂತೆಯೇ ನಗರದ ಜೆ.ಸಿ. ವೃತ್ತದಲ್ಲಿ ಜಮಾಯಿಸಿದ ಜಾ.ದಳ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತ್ಯೇಕವಾಗಿ ಜಯಘೋಷ ಕೂಗುತ್ತಾ, ಸಿಹಿ ವಿತರಿಸಿ ಸಂಭ್ರಮಿಸಿದರು.
ಜೆಡಿಎಸ್ ಮುಖಂಡ ರಾಧಾಕೃಷ್ಣ ಮಾತನಾಡಿ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಬರದಿಂದ ತತ್ತರಿಸಿರುವ ಮಂಡ್ಯದ ರೈತರಿಗೆ ನೆಮ್ಮದಿ ತಂದಿದೆ. ಇದರ ಜತೆಗೆ ಬೆಂಗಳೂರು ಜನರಿಗೆ ಕುಡಿಯುವ ನೀರು ದೊರಕಿದೆ ಎಂದು ಹೇಳಿದರೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ಆರ್. ಅರವಿಂದ್ ಮಾತನಾಡಿ, 1924ರಲ್ಲಿ ಆಗಿದ್ದ ಕರಾಳ ಒಪ್ಪಂದವನ್ನು ಅಸಿಂಧುಗೊಳಿಸುವ ಮೂಲಕ ಕಾವೇರಿ ಹೋರಾಟಕ್ಕೆ ಗೆಲುವು ತಂದುಕೊಟ್ಟಿದ್ದು, ಇದನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪನ್ನು ರೈತ ಸಂಘದ ಸ್ವಾಗತಿಸಿದ್ದು, ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸುಪ್ರೀಂಕೋರ್ಟ್ಗೆ ಮನದಟ್ಟಾಗಿದೆ. ಅದೇ ಕಾರಣಕ್ಕೆ 14.75 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಕೊಟ್ಟಿರುವುದು ಸಮಾಧಾನ ತಂದಿದೆ ಎಂದು ರೈತ ಸಂಘದ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.