'ಅಂಬಿಗೆ ನೀಡಿದ ದುಡ್ಡನ್ನು ಬಡ್ಡಿ ಸಮೇತ ಕಿತ್ತುಕೊಳ್ಳಿ!'
ಮಂಡ್ಯ, ಸೆಪ್ಟೆಂಬರ್ 24 : ಕಾವೇರಿ ನದಿ ನೀರು ವಿಚಾರವಾಗಿ ಶುಕ್ರವಾರ ನಡೆದ ವಿಶೇಷ ಅಧಿವೇಶನಕ್ಕೆ ಮಂಡ್ಯ ಕ್ಷೇತ್ರದ ಶಾಸಕ, ಮಾಜಿ ಸಚಿವ ಅಂಬರೀಶ್ ಗೈರಾದ ಹಿನ್ನೆಲೆಯಲ್ಲಿ ಆರ್ಟಿಐ ಕಾರ್ಯಕರ್ತ ಕೆ.ಆರ್. ರವೀಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ.
ಕಾವೇರಿ ವಿಚಾರವಾಗಿ ಇಡೀ ರಾಜ್ಯವೇ ಹೋರಾಟ ಮಾಡುತ್ತಿದ್ದರೆ ಶಾಸಕ ಅಂಬರೀಶ್ ಮಾತ್ರ ಮೋಜು -ಮಸ್ತಿಯಲ್ಲಿ ತೊಡಗಿದ್ದರು. ಅಲ್ಲದೆ, ವಿಶೇಷ ಅಧಿವೇಶನಕ್ಕೆ ಗೈರಾಗುವ ಮೂಲಕ ತಾನೊಬ್ಬ ಬೇಜವಾಬ್ದಾರಿ ಮನುಷ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಲ್ಲದೆ ಕಡ್ಡಾಯವಾಗಿ ಎಲ್ಲಾ ಶಾಸಕರು ಭಾಗವಹಿಸಬೇಕೆಂದು ಕೆಪಿಸಿಸಿ ಅಧ್ಯಕ್ಷರು ವ್ಹಿಪ್ ಜಾರಿ ಮಾಡಿದ್ದರೂ ವಿಶೇಷ ಅಧಿವೇಶನಕ್ಕೆ ಗೈರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ. [ಅಂಬಿಗೆ ಚುಂಚಶ್ರೀ ಪ್ರಶಸ್ತಿ ನೀಡಿದರೆ ಮಠಕ್ಕೆ ಮುತ್ತಿಗೆ ಹಾಕ್ತೀವಿ]

ಬಡ್ಡಿ ಸಮೇತ ಹಣ ವಸೂಲಿ ಮಾಡಿ : ಅಂಬರೀಶ್ ಅನಾರೋಗ್ಯಕ್ಕೆ ಒಳಗಾದಾಗ ಸಿಂಗಪೂರದಲ್ಲಿ ಚಿಕಿತ್ಸೆ ಕೊಡಿಸಲು ಸರ್ಕಾರದಿಂದ ನೀಡಲಾಗಿದ್ದ 1.5 ಕೋಟಿ ರೂ.ಗಳನ್ನು ಬಡ್ಡಿ ಸಮೇತ ವಸೂಲಿ ಮಾಡಿ ಕ್ಷೇತ್ರದ ಬಡವರಿಗೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರವೀಂದ್ರ ಒತ್ತಾಯಿಸಿದ್ದಾರೆ. ['ಅಂಬರೀಷ್- ಮೀರ್ ಸಾದಿಕ್, ಹೆಣ್ಣು ವಿರೋಧಿ']
ಅಲ್ಲದೆ, ಅಂಬರೀಶ್ ಅವರಿಗೆ ನೀಡಲಾಗುತ್ತಿರುವ ಪ್ರತಿಷ್ಠಿತ ಚುಂಚಶ್ರೀ ಪ್ರಶಸ್ತಿಯನ್ನು ಕೂಡಲೆ ಹಿಂಪಡೆಯಬೇಕು. ಈ ಪ್ರಶಸ್ತಿಯನ್ನು ಮಂಡ್ಯದ ಯಾವುದೇ ಬಡ ರೈತನಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಅವರಿಗೆ ಪ್ರಶಸ್ತಿ ನೀಡಿದ್ದೇ ಆದಲ್ಲಿ ಆದಿಚುಂಚನಗಿರಿ ಮಠಕ್ಕೆ ಮುತ್ತಿಗೆ ಹಾಕುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ. ರೈತರ ಹೋರಾಟದ ಬಗ್ಗೆ ಒಂದು ಹೇಳಿಕೆಯನ್ನೂ ಅಂಬರೀಶ್ ನೀಡದಿರುವುದು ರೈತರನ್ನು ರೊಚ್ಚಿಗೆಬ್ಬಿಸಿದೆ. [ರಾಜಕೀಯ ಪತನ: ಅಂಬರೀಶ್ ಗೆ ಮುಳುವಾದ 5 ಅಂಶ]

ಪ್ರತಾಪ್ ವಿರುದ್ಧವೂ ಆಕ್ರೋಶ : ಬೆಂಗಳೂರಿನಲ್ಲಿ ಒಂದು ದಿನದ ವಿಶೇಷ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಹಾಜರಾಗಿದ್ದ ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಇಷ್ಟೆಲ್ಲ ಹೋರಾಟ ನಡೆಯುತ್ತಿದ್ದರೂ ರಾಜೀನಾಮೆ ನೀಡಲು ಕರ್ನಾಟಕದ ಸಂಸದರು ಮುಂದಾಗಲಿಲ್ಲ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು.












Click it and Unblock the Notifications