ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ: ದಂಪತಿ ಸೇರಿ ಮೂವರ ದುರ್ಮರಣ
ಮಂಡ್ಯ, ಜೂನ್ 20: ಅತಿ ವೇಗವಾಗಿ ಚಲಿಸುತ್ತಿದ್ದ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಅಪ್ಪಳಿಸಿದ ಪರಿಣಾಮ ದಂಪತಿ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಸಮೀಪದ ಬೆಂಗಳೂರು ಮೈಸೂರು ಹೆದ್ದಾರಿಯ ಕಿಟ್ಟಿ ಡಾಬಾ ಬಳಿ ಇಂದು ಬೆಳಗ್ಗೆ ನಡೆದಿದೆ.
ಉತ್ತರ ಪ್ರದೇಶ ಲಕ್ನೋದ ನಿವಾಸಿಗಳಾದ ಧೀರಜ್ಕುಮಾರ್ (55) ಆತನ ಪತ್ನಿ ಶೈಲ್ವಿ (50) ಹಾಗೂ ಕಾರು ಚಾಲಕ ಮಂಡ್ಯದ ಗಾಂಧಿನಗರ ನಿವಾಸಿ ನಿರಂಜನ್ಕುಮಾರ್ (30) ಮೃತರು ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಲಕ್ನೋದ ಶ್ರೀವಾಸ್ತವ್ (30) ತೀವ್ರವಾಗಿ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶ ಲಕ್ನೋದ ಧೀರಜ್ ಕುಮಾರ್ ಪತ್ನಿ ಶೈಲ್ವಿ ಹಾಗೂ ಶ್ರೀವಾಸ್ತವ್ ಅವರು ಮಾರುತಿ ಸ್ವಿಫ್ ಡಿಸೈರ್ ಕಾರನ್ನು ಬಾಡಿಗೆಗೆ ಪಡೆದು ತೆರಳುತ್ತಿದ್ದರು. ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟಾಟಾ ಎಸ್ ಕಾರು ಅತಿ ವೇಗವಾಗಿ ಚಾಲಕನ ನಿರ್ಲಕ್ಷತೆಯಿಂದ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ನಂತರ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ದಂಪತಿ ತೆರಳುತ್ತಿದ್ದ ಕಾರಿಗೆ ಅಪ್ಪಳಿಸಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಧೀರಜ್, ಶೈಲ್ವಿ ಹಾಗೂ ಕಾರು ಚಾಲಕ ನಿರಂಜನ್ಕುಮಾರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ತೀವ್ರವಾಗಿ ಗಾಯಗೊಂಡಿದ್ದ ಶ್ರೀವಾಸ್ತವ್ ಅವರನ್ನು ತಕ್ಷಣ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ಗೆ ರವಾನಿಸಲಾಗಿದೆ.
ಟಾಟಾ ಎಸ್ ಕಾರಿನಲ್ಲಿ ತೆರಳುತ್ತಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಗ್ಗೆ ತಿಳಿದ ತಕ್ಷಣ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಇನ್ಸ್ಪೆಕ್ಟರ್ ಸಂತೋಷ್, ಪಿಎಸ್ಐ ಅಯ್ಯನ್ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಭೀಕರ ಅಪಘಾತ ಸಂಬಂಧ ಮದ್ದೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications