ಕೆ.ಆರ್.ಪೇಟೆ ಜನಕ್ಕೆ ಬಿಎಸ್ ವೈ ಉಡುಗೊರೆಯಾಗಿ ನೀರು ಕೊಟ್ರು..!
ಮಂಡ್ಯ, ಜುಲೈ 29: ಹೇಮಾವತಿ ನದಿಯಲ್ಲಿ ಹರಿಯುತ್ತಿದ್ದ ನೀರಿನ ಪ್ರಮಾಣ ಇಳಿಮುಖವಾದ ಕಾರಣ ಕೆ.ಆರ್.ಪೇಟೆ ಪಟ್ಟಣಕ್ಕೆ ಕುಡಿಯುವ ನೀರಿನ ಕೊರತೆಯಾಗಿತ್ತಲ್ಲದೆ, ರೈತರು ಬೆಳೆದ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದವು. ಹೀಗಾಗಿ ರೈತರು ಹೇಮಾವತಿ ಜಲಾಶಯದಿಂದ ನೀರು ಬಿಡುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಪ್ರಯೋಜನವಾಗಿರಲಿಲ್ಲ.
ಆದರೆ ಇದೀಗ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬೆನ್ನಲ್ಲೇ ಹೇಮಾವತಿ ಜಲಾಶಯದಿಂದ 2500 ಕ್ಯುಸೆಕ್ ನೀರು ಹರಿಸುವ ಮೂಲಕ ಹುಟ್ಟೂರಿನ ಜನತೆಗೆ ಮೊದಲ ಉಡುಗೊರೆ ನೀಡಿದ್ದಾರೆ. ಇದರಿಂದ ಕೆ.ಆರ್.ಪೇಟೆ ಪಟ್ಟಣದ ಜನರು ಮತ್ತು ರೈತರು ಖುಷಿ ಪಡುವಂತಾಗಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಹುಟ್ಟೂರು ಬೂಕನಕೆರೆಗೆ ಆಗಮಿಸಿದ ವೇಳೆ ಕೆ.ಆರ್.ಪೇಟೆ ತಾಲೂಕಿನಲ್ಲಿ ಒಣಗುತ್ತಿರುವ ಬೆಳೆಗಳನ್ನು ಉಳಿಸುವಂತೆ ಮತ್ತು ಕೆ.ಆರ್.ಪೇಟೆ ಪಟ್ಟಣದ ಜನರಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಹೇಮಗಿರಿ ಬಳಿಯ ಹೇಮಾವತಿ ನದಿಯ ಒಡಲು ಬತ್ತಿಹೋಗಿ ಬರಿದಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ರೈತ ಮುಖಂಡರು ಮತ್ತು ಪುರ-ಪ್ರಮುಖರು ಹೇಮಾವತಿ ಜಲಾಶಯದಿಂದ ನೀರು ಹರಿಸುವಂತೆ ಮನವಿ ಸಲ್ಲಿಸಿದ್ದರು.

ಇದನ್ನು ಪರಿಗಣಿಸಿದ ಸಿಎಂ ಯಡಿಯೂರಪ್ಪ ಅವರು ಗೊರೂರು ಜಲಾಶಯದಿಂದ 2500 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯಬಿಟ್ಟಿದ್ದಾರೆ. ಇದರಿಂದ ರೈತರು ಮತ್ತು ಜನರು ನೆಮ್ಮದಿಯುಸಿರು ಬಿಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಕೃಷ್ಣರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಹೇಮಗಿರಿಯ ಪಂಪ್ ಹೌಸಿನ ಬಳಿ ನೀರಿಲ್ಲದೆ ಬತ್ತಿಹೋಗಿತ್ತು. ಇದೀಗ ಈ ಸ್ಥಳದಲ್ಲಿ ನೀರು ಕಾಣಿಸಿಕೊಂಡಿದೆ.
ಈ ಕುರಿತಂತೆ ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ಮಾತನಾಡಿ, "ಕೃಷ್ಣರಾಜಸಾಗರ ವ್ಯಾಪ್ತಿಯ ರೈತರಿಗೆ ವಿಶ್ವೇಶ್ವರಯ್ಯ ನಾಲೆಯ ಮೂಲಕ ನೀರು ಹರಿಸಿದ ಮಾದರಿಯಲ್ಲಿ ಗೊರೂರು ಜಲಾಶಯ ವ್ಯಾಪ್ತಿಯ ಕೃಷ್ಣರಾಜಪೇಟೆ ತಾಲೂಕಿಗೆ ಅನುಕೂಲವಾಗುವಂತೆ ನದಿಗೆ ನೀರು ಬಿಟ್ಟಿರುವುದರಿಂದ, ಕಾಲುವೆಗಳಾದ ಮಂದಗೆರೆ ಎಡದಂಡೆ ಮತ್ತು ಬಲದಂಡೆ ಹಾಗೂ ಹೇಮಗಿರಿ ನಾಲೆಯಿಂದ ನೀರನ್ನು ಹರಿಸುವ ಜೊತೆಗೆ ಗೊರೂರು ಜಲಾಶಯದ ಎಡದಂಡೆ ನಾಲೆಯಾದ ಸಾಹುಕಾರ್ ಚನ್ನಯ್ಯ ನಾಲೆಗೆ ನೀರನ್ನು ಕನಿಷ್ಠ ಹತ್ತು ದಿನಗಳ ಕಾಲ ಹರಿಸಿಕೊಟ್ಟು ಕೆರೆಕಟ್ಟೆಗಳಿಗೆ ನೀರನ್ನು ತುಂಬಿಸಿಕೊಳ್ಳಲು ಹಾಗೂ ಬೆಳೆಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications