ಬಿಎಸ್ ಎನ್ಎಲ್ ಗುತ್ತಿಗೆ ನೌಕರ ಸಾವು: ಪ್ರತಿಭಟನೆ
ಮಂಡ್ಯ, ಫೆಬ್ರವರಿ 10: ಮಂಡ್ಯದ ಬಿಎಸ್ ಎನ್ಎಲ್ ಕಚೇರಿಯ ಜನರೇಟರ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗುತ್ತಿಗೆ ನೌಕರ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಫೆ.9 ರಂದು ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸಿಐಟಿಯು ಕಾರ್ಯಕರ್ತರು ಜನರೇಟರ್ ವಿಭಾಗದಲ್ಲಿ ಬಿಡುಗಡೆಯಾದ ಮಾನಾಕ್ಸೈಡ್ ಶ್ವಾಸಕೋಶಕ್ಕೆ ಹಾನಿಯಾಗಿ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಇದಕ್ಕೆ ಇಲಾಖೆ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಚಂದ್ರಶೇಖರ (52) ಮೃತಪಟ್ಟ ಗುತ್ತಿಗೆ ನೌಕರ. ಈತ ಕಳೆದ ಐದು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದನಲ್ಲದೆ, ತನ್ನ ಮಗನನ್ನೂ ಅದೇ ಪಾಳಿ ಕೆಲಸಕ್ಕೆ ನಿಯೋಜಿಸಿದ್ದನಲ್ಲದೆ, ಇಬ್ಬರ ಕೆಲಸವನ್ನೂ ತಾನೇ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು.

ಬಿಎಸ್ ಎನ್ಎಲ್ ಜಿಲ್ಲಾ ಕೇಂದ್ರ ಕಚೇರಿಯ ಜನರೇಟರ್ ವಿಭಾಗದಲ್ಲಿ ಕಳೆದ ಐದು ವರ್ಷಗಳಿಂದ ವಿಶ್ರಾಂತಿಯಿಲ್ಲದ ದುಡಿಮೆಯಿಂದಾಗಿ ರಕ್ತದೊತ್ತಡ ಸೇರಿದಂತೆ ಇತರೆ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಶುಕ್ರವಾರವೂ ಕೆಲಸಕ್ಕೆ ಹಾಜರಾಗಿದ್ದು ಕಾರ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ಜನರೇಟರ್ ಕೊಠಡಿಯಲ್ಲೇ ಸಾವನ್ನಪ್ಪಿದ್ದಾರೆ.
ಅಲ್ಲದೆ, ಮೃತ ಚಂದ್ರು ಅವರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು. ಭವಿಷ್ಯತ್ ನಿಧಿ ಪರಿಹಾರ ಕೊಡಿಸಬೇಕು. ಇಲಾಖೆ ಮತ್ತು ಗುತ್ತಿಗೆದಾರರ ಹೊಣೆ ಹೊತ್ತು ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ಸಂತೋಷ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications