ಗಡಿ ವಿವಾದ: ಕೇಂದ್ರ ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹ
ಮಂಡ್ಯ, ಡಿ.11: ಕರುನಾಡಿನ ಸ್ವಾಭಿಮಾನವನ್ನು ಕೆಣಕುತ್ತಿರುವ ಮರಾಠಿಗರ ಪುಂಡಾಟವನ್ನು ಕನ್ನಡಿಗರು ಸಹಿಸುವುದಿಲ್ಲ. ಬೆಳಗಾವಿ ಗಡಿ ವಿವಾದವನ್ನು ಬೆಳೆಯಲು ಬಿಟ್ಟಿರುವ ಕೇಂದ್ರ ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಸಮಾಜಸೇವಕ ಬಿ.ಎಂ.ಅಪ್ಪಾಜಪ್ಪ ಆಗ್ರಹಿಸಿದರು.
ತಾಲೂಕಿನ ಬೇವಿನಹಳ್ಳಿ ಗ್ರಾಮದ ಶ್ರೀಸೋಮೇಶ್ವರ ಸಮುದಯ ಭವನದಲ್ಲಿ ಕಾಯಕಯೋಗಿ ಫೌಂಡೇಶನ್ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಮಂಡ್ಯ ಮ್ಯಾರಥಾನ್ ಓಟಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ವಿತರಿಸಿ ಅವರು ಮಾತನಾಡಿದರು.
Mandya Bandh : ಕಬ್ಬಿಗೆ ಬೆಲೆ ನಿಗದಿ ಮಾಡದ ರಾಜ್ಯ ಸರ್ಕಾರ: ಡಿಸೆಂಬರ್ 19ರಂದು ಮಂಡ್ಯ ಬಂದ್ಗೆ ಕರೆ
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗಡಿವಿವಾದದ ಸಮಸ್ಯೆ ಬಂದಾಗ ರಾಜಕಾರಣ ಮಾಡುವುದನ್ನು ಬಿಟ್ಟು ಕನ್ನಡನಾಡಿನ ಹಿತಕಾಯುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ವಿರುದ್ಧ ಅಲ್ಲಿನ ಸರ್ಕಾರ ಅತಿರೇಕದ ಕ್ರಮಗಳಿಗೆ ಮುಂದಾಗಿರುವುದು ಖಂಡನೀಯ ಎಂದರು. ರಾಜ್ಯೋತ್ಸವ ನವೆಂಬರ್ ತಿಂಗಳ ಆಚರಣೆಗಷ್ಟೇ ಸೀಮಿತವಾಗದೆ ವರ್ಷವಿಡೀ ಕನ್ನಡ ನಿತ್ಯೋತ್ಸವವಾಗಬೇಕು. ನಮ್ಮ ನಾಡಿನ ಸಂಸ್ಕೃತಿ, ನೆಲ, ಜಲ, ಗಡಿ ವಿಚಾರ ಬಂದಾಗ ಕನ್ನಡಿಗರು ಜಾಗೃತಿಯ ಹೋರಾಟ ನಡೆಸಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಓಟ ಪ್ರಗತಿಯ ಸಂಕೇತ. ಮಂಡ್ಯದಲ್ಲಿ ಕನ್ನಡಕ್ಕಾಗಿ ಓಡು-ಕನ್ನಡಕ್ಕಾಗಿ ಬಾಳು ಘೋಷಣೆಯೊಂದಿಗೆ ಮ್ಯಾರಥಾನ್ ಆಯೋಜಿಸಿ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಗಳುಗಳು ಓಟದಲ್ಲಿ ಪಾಲ್ಗೊಂಡು ಸೌಹಾರ್ಧತೆ, ಭಾಷಾಭಿಮಾನ ಮೆರೆದಿರುವುದು ಶ್ಲಾಘನೀಯ ಎಂದರು.
ಮುಂಬರುವ ದಿನಗಳಲ್ಲಿ ಮ್ಯಾರಥಾನ್ 20 ಕಿ.ಮೀ. ಅಂತರದಲ್ಲಿ ನಡೆಯಬೇಕು. ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಎಲ್ಲರಿಂದಲೂ ನಡೆದಾಗ ದೇಶದ ಹಿರಿಮೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಗಾಯಕ ಡಾ.ಮಾದೇಶ್ ಮಾತನಾಡಿ, ಕಾಯಕಯೋಗಿ ಫೌಂಡೇಶನ್ ಸಂಸ್ಥೆ ನವೆಂಬರ್ ಮಾಸದಿಂದ ಆಚೆಗೂ ಕನ್ನಡತನದ ಅಭಿಮಾನವನ್ನು ಮ್ಯಾರಥಾನ್ ಆಯೋಜಿಸುವ ಮೂಲಕ ಆಚರಣೆ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಕನ್ನಡ ಭಾಷೆ ನಿತ್ಯೋತ್ಸವವಾಗಬೇಕು. ಎಲ್ಲಾದರೂ ಇರು ನೀ ಎಂದೆಂದಿಗೂ ಕನ್ನಡವಾಗಿರು ಎಂಬ ಅಭಿಮಾನ ಪ್ರತಿಯೊಬ್ಬರಲ್ಲೂ ಮೂಡಿದಾಗ ಕನ್ನಡ ಭಾಷೆ ಅಂತರಾಷ್ಟ್ರೀಯ ಮಟ್ಟದ ಹಿರಿಮೆಗೆ ಪಾತ್ರವಾಗುತ್ತದೆ ಎಂದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಗಂಡುಮೆಟ್ಟಿನ ಭೂಮಿ ಮಂಡ್ಯದ ಮಹತ್ವ ನಾಡಿನ ಎಲ್ಲಾ ಜಿಲ್ಲೆಯ ಜನತೆಗೂ ತಿಳಿಯಬೇಕೆಂಬ ಮಹಾತ್ವಾಕಾಂಕ್ಷೆಯೊಂದಿಗೆ ಸತತವಾಗಿ 7ವರ್ಷಗಳಿಂದಲೂ ಮ್ಯಾರಥಾನ್ ಓಟ ಸ್ಪರ್ಧೆಯನ್ನು ನಡೆಸುತ್ತಾ ಬರಲಾಗಿದೆ. ಸೇನೆ, ಪೊಲೀಸ್ ಸೇರಬಯಸುವ ಯುವಕರಿಗೆ ಮ್ಯಾರಥಾನ್ ಸ್ಪೂರ್ತಿಯಾಗಲಿದೆ ಎಂದರು.