ಬಿಎಸ್ವೈ ರಾಜ್ಯದ ಆಸ್ತಿ, ಅವರ ಮಾರ್ಗದರ್ಶನದಲ್ಲಿ ಸರಕಾರ ಕೆಲಸ ಮಾಡುತ್ತಿದ್ದೇವೆ: ಬೊಮ್ಮಾಯಿ
ಮಂಡ್ಯ, ಜುಲೈ 21: ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಆಸ್ತಿ. ಅವರ ಮಾರ್ಗದರ್ಶನದಲ್ಲಿ ನಮ್ಮ ಸರಕಾರ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಟಿ.ಬಿ.ಬಡಾವಣೆಯ ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ತಾಲೂಕಿನ 1700 ಕೋಟಿ ರೂ. ವೆಚ್ಚದ ಕೆ.ಆರ್.ಪೇಟೆ ಅಭಿವೃದ್ಧಿ ಕಾಮಗಾರಿ ಮತ್ತು ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಸರಕಾರಿ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ಉಪ ಚುನಾವಣೆಗೆ ಮುನ್ನ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದಾಗ ಬಿಜೆಪಿ ಗೆಲ್ಲುವುದೇ ಎಂಬುದು ಎಲ್ಲರಿಗೂ ಬಹುದೊಡ್ಡ ಪ್ರಶ್ನೆಯಾಗಿತ್ತು. ಇಂದು ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಳೆದ ಉಪ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತೆಗೆದುಕೊಂಡ ತೀರ್ಮಾನದಿಂದ ಕ್ಷೇತ್ರದಲ್ಲಿಂದು ಅಭಿವೃದ್ದಿ ಪರ್ವ ಆರಂಭವಾಗಿದೆ. ಕ್ಷೇತ್ರದ ಅಭಿವೃದ್ದಿಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎನ್ನುವುದನ್ನು ಸಚಿವ ಕೆ.ಸಿ.ನಾರಾಯಣಗೌಡ ತೋರಿಸಿಕೊಟ್ಟಿದ್ದಾರೆಂದರು.
ರಾಜಕಾರಣದಲ್ಲಿ ಎರಡು ವಿಧ. ಒಂದು ಅಧಿಕಾರಕ್ಕಾಗಿ ರಾಜಕಾರಣ, ಮತ್ತೊಂದು ಜನರಿಗಾಗಿ ರಾಜಕಾರಣ. ಜನರು ಕೊಟ್ಟ ಅಧಿಕಾರವನ್ನು ತಮ್ಮ ಮತ್ತು ತಮ್ಮವರ ಅಭಿವೃದ್ದಿಗೆ ಬಳಕೆ ಮಾಡುವುದು. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಎಲ್ಲರ ಜೊತೆ ಸೇರಿ ಸ್ವಾರ್ಥ ರಾಜಕಾರಣ ಮಾಡುತ್ತಾ ಅಧಿಕಾರ ದುರುಪಯೋಗ ಮಾಡಿಕೊಂಡು ರಾಜಕಾರಣ ಮಾಡುವುದು ಅಧಿಕಾರಕ್ಕಾಗಿ ಮಾಡುವ ರಾಜಕಾರಣ. ಜನರ ಹಿತಕ್ಕಾಗಿ ಅಧಿಕಾರ ಬಳಕೆ ಮಾಡುವುದು ಜನರಿಗಾಗಿ ಮಾಡುವ ರಾಜಕಾರಣ. ಬಿ.ಎಸ್.ವೈ ಮುಖ್ಯಮಂತ್ರಿಯಾಗಿ ಜನರಿಗಾಗಿ ರಾಜಕಾರಣ ಮಾಡಿದವರೆಂದು ಶ್ಲಾಘಿಸಿದರು.

ಕೋವಿಡ್ ನಿರ್ವಹಣೆಯಲ್ಲಿ ಬಿಎಸ್ವೈ ಸರಕಾರ ಯಶಸ್ವಿ
ಕೋವಿಡ್ ನಿರ್ವಹಣೆಯಲ್ಲಿ ಯಡಿಯೂರಪ್ಪ ಸರಕಾರ ತೋರಿದ ಜನಪರ ಕಾಳಜಿಯನ್ನು ಹೊಗಳಿದ ಬಸವರಾಜ ಬೊಮ್ಮಾಯಿ ಸರ್ವರಿಗೂ ಲಸಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೊದಿ ಮತ್ತು ಬಿ.ಎಸ್.ಯಡಿಯೂರಪ್ಪ ಲಕ್ಷಾಂತರ ಜನರ ಜೀವ ಉಳಿಸಿದರು. ದುಡಿಯುವ ವರ್ಗ ಮತ್ತು ರೈತಾಪಿ ವರ್ಗಕ್ಕೆ ಕೆಲಸ ಕೊಡುವ ಕಾರ್ಯಕ್ಕೆ ಮುಂದಾಗಿದ್ದೇವೆ. ರೈತರ ಸಾಲ ಮನ್ನಾ, ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಿಕೆ, ಭೂ ಚೇತನ, ಹಾಲು ಉತ್ಪಾದಕರಿಗೆ ಸಹಾಯಧನ, ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ 5 ಕೋಟಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ದಿ ಮುಂತಾದ ಯಡಿಯೂರಪ್ಪ ಸರಕಾರದ ಸಾಧನೆಗಳನ್ನು ಜನರ ಮುಂದಿಟ್ಟ ಬಸವರಾಜ ಬೊಮ್ಮಾಯಿ ನಮ್ಮ ಸರಕಾರ ಯಡಿಯೂರಪ್ಪ ತೋರಿಸಿದ ಅಭಿವರದ್ದಿ ಮಾರ್ಗದಲ್ಲಿ ನಡೆಯುತ್ತಿದೆ ಎಂದರು.

ರೈತ ಮಕ್ಕಳಿಗೆ ಸ್ಕಾಲರ್ ಶಿಪ್
ರೈತ ಕುಟುಂಬದಲ್ಲಿ ಭೂಮಿ ಎಷ್ಟಿದೆಯೂ ಈಗಲೂ ಅಷ್ಟೇ ಇದೆ. ಆದರೆ ರೈತ ಕುಟುಂಬದಲ್ಲಿ ಅವಲಂಬಿತರ ಸಂಖ್ಯೆ ಹೆಚ್ಚಿದೆ. ರೈತ ಮುಕ್ಕಳು ವಿದ್ಯಾವಂತರಾಗಿ ಸಮಾಜದ ಇತರ ಕ್ಷೇತ್ರಗಳಿಗೆ ಹೋಗುವಂತಾಗಬೇಕು. ಅದಕ್ಕಾಗಿ ನಮ್ಮ ಸರಕಾರ ರಾಜ್ಯದ 14 ಲಕ್ಷ ರೈತ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುವ ಯೋಜನೆ ರೂಪಿಸಿದೆ. ಮಹಿಳೆಯ ಆರ್ಥಿಕ ಸಭಲೀಕರಣಕ್ಕಾಗಿ 40 ಲಕ್ಷ ಸ್ತ್ರೀಶಕ್ತಿ ಸಂಘಗಳಿಗೆ ತಲಾ 1.5 ಲಕ್ಷ ಆರ್ಥಿಕ ನೆರವು ನೀಡುತ್ತಿದೆ. ದೀನ ದಲಿತರ ಅಭಿವೃದ್ದಿಗಾಗಿ 850 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ. ಬಾಬು ಜಗಜೀವನರಾಂ ಹೆಸರಿನಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ತಲಾ 100 ಯುವಕರಿಗೆ ಉದ್ಯೋಗ ನೀಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಆಗಸ್ಟ್ ತಿಂಗಳಲ್ಲಿ ಮೈಷುಗರ್ ಕಾರ್ಖಾನೆ ಆರಂಭ
ಮಂಡ್ಯದ ಅಭಿವೃದ್ದಿಯಾದರೆ ಅದು ಸಮಗ್ರ ಇಂಡಿಯಾದ ಅಭಿವೃದ್ದಿ. ಇಲ್ಲಿಯೇ ಕಾವೇರಿ ಮತ್ತು ಹೇಮಾವತಿ ನದಿ ಯೋಜನೆಗಳ ಸಮಗ್ರ ಅಭಿವೃದ್ದಿಗೆ ನಾನು ಬದ್ದ. ಹೇಮಾವತಿ ಎಡದಂಡೆ ನಾಲೆ, ವಿ.ಸಿ ನಾಲೆ ಆಧುನೀಕರಣ ಮಾಡಿ ಮಂಡ್ಯದ ಭೂ ತಾಯಿಗೆ ಹಸಿರು ಸೀರೆಯುಡಿಸುವ ಕೆಲಸ ಮಾಡುತ್ತೇನೆ. ಆಗಸ್ಟ್ ತಿಂಗಳಲ್ಲಿ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಮೂಲಕ ಮಂಡ್ಯದ ರೈತರ ಬೆವರಿಗೆ ಬೆಲೆ ತರುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ನೀರಾವರಿ ಇಲಾಖೆಯಲ್ಲಿ 400 ಕೋಟಿ ಹಣ ದುರುಪಯೋಗ?
ಇದೇ ಸಂದರ್ಭದಲ್ಲಿ ತಾಲೂಕಿನ ನೀರಾವರಿ ಇಲಾಖೆಗಳಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ, ಕಳಪೆ ಕಾಮಗಾರಿ ಮತ್ತು ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರದ ವಿರುದ್ದ ಸಮಗ್ರ ತನಿಖೆಗೆ ಒತ್ತಾಯಿಸಿ ತಾಲೂಕಿನ ರೈತ ಮುಖಂಡರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ದಾಖಲೆ ಸಮೇತ ಮನವಿ ಅರ್ಪಿಸಿದರು ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನೇತೃತ್ವದ ರೈತಸಂಘದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಅರ್ಪಿಸಿತು.
ಹೇಮಾವತಿ ಎಡದಂಡೆ ನಾಲಾ ಆಧುನೀಕರಣ ಕಾಮಗಾರಿಗಳಲ್ಲಿ ಸುಮಾರು 400 ಕೋಟಿ ಹಣ ದುರುಪಯೋಗವಾಗಿದೆ. ಕಾಮಗಾರಿ ನಡೆಸದೆ ಅಧಿಕಾರಿಗಳು ಸರ್ಕಾರಿ ಹಣವನ್ನು ಲೂಟಿ ಮಾಡಿದ್ದಾರೆ. ಹಣದ ಲೂಟಿಗಾಗಿ ಅಸ್ತಿತ್ವದಲ್ಲಿ ಇಲ್ಲದ ಗ್ರಾಮವನ್ನು ಸೃಷ್ಠಿಸಿದ್ದಾರೆ ಎಂದು ತಿಳಿಸಿದರು.












Click it and Unblock the Notifications