ಸುಮಲತಾ ಅವರನ್ನು ಬಿಜೆಪಿಗೆ ಸೆಳೆಯುವ ಯತ್ನ: ಸಚಿವ ಆರ್. ಅಶೋಕ್
ಸುಮಲತಾ ಅವರೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಆರ್. ಅಶೋಕ್ ಮಂಡ್ಯದಲ್ಲಿ ಹೇಳಿದ್ದು, ಈ ಮೂಲಕ ಸುಮಲತಾ ಅವರನ್ನು ಬಿಜೆಪಿ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದ್ದೆಯೇ?
ಮಂಡ್ಯ, ಜನವರಿ, 26: ಸಂಸದೆ ಸುಮಲತಾ ಅವರ ಜೊತೆ ನಿರಂತರವಾಗಿ ಸಂಪರ್ಕಲ್ಲಿದ್ದೇನೆ. ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಮಂಡ್ಯದಲ್ಲಿ ಹೇಳಿದರು.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಅವರನ್ನೂ ಬಿಜೆಪಿಗೆ ಕರೆತರುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು. ಸುಮಲತಾ ಅವರ ಮನೆಗೆ ಹೋಗಿ ಮಾತನಾಡಿದ್ದೇನೆ. ಅವರು ಸಹ ನಮ್ಮ ಸಿಎಂ ಜೊತೆ ಬಂದು ಮಾತನಾಡಿದ್ದಾರೆ. ಸಮಯ ಸಂದರ್ಭ ನೋಡಿಕೊಂಡು ನಮ್ಮ ಪಕ್ಷಕ್ಕೆ ಬರುತ್ತಾರೆ. ಅವರು ನಮ್ಮ ಬಳಿ ಯಾವ ಬೇಡಿಕೆಯನ್ನೂ ಇಟ್ಟಿಲ್ಲ. ಅವರಿಗೂ ಅವಕಾಶ ಕೊಡಬೇಕು, ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿದರು.

ಮಂಡ್ಯ: ವೇದಿಕೆ ಹಂಚಿಕೊಳ್ಳುವ ವಿಚಾರಕ್ಕೆ JDS ಕಾರ್ಯಕರ್ತರು-ಸುಮಲತಾ ಬೆಂಬಲಿಗರ ನಡುವೆ ಸಮರ
ರಸ್ತೆಗೆ ಅಂಬರೀಶ್ ಹೆಸರಿಡುತ್ತೇವೆ
ನಾವು ವಿಧಾನದಸೌಧದ ಬಸವೇಶ್ವರ ಪ್ರತಿಮೆಯಿಂದ ರೇಸ್ಕೋರ್ಸ್ವರೆಗಿನ ರಸ್ತೆಗೆ ಅಂಬರೀಶ್ ಹೆಸರಿಡುತ್ತೇವೆ. ಈಗಾಗಲೇ ಮುಖ್ಯಮಂತ್ರಿ ಅವರಿಗೆ ಪತ್ರ ಕೊಟ್ಟಿದ್ದೇನೆ. ಅವರು ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಹಾಗೆಯೇ ಅಂಬರೀಶ್ ಸಮಾಧಿಗೆ 12 ಕೋಟಿ ಕೊಟ್ಟಿದ್ದು, ಸಮಾಧಿಯನ್ನು ಸಹ ಒಂದು ತಿಂಗಳಿನಲ್ಲಿ ಉದ್ಘಾಟನೆ ಮಾಡುತ್ತೇವೆ. ಅಂಬರೀಶ್ ಹೆಸರು ಉಳಿಸಲು ಇಷ್ಟೆಲ್ಲಾ ಕೆಲಸ ಮಾಡಿದ್ದೇನೆ. ಅವರು ಮಾಡಿರುವ ಸಾಧನೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ತ್ರಿಕೋನ ಸ್ಪರ್ಧೆಯ ರಣತಂತ್ರ
ಮಂಡ್ಯದ ಏಳೂ ಕ್ಷೇತ್ರದಲ್ಲಿ ಸಮಬಲದ ತ್ರಿಕೋನ ಸ್ಪರ್ಧೆಯ ರಣತಂತ್ರ ರೂಪಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಹೇಳಿದರು. ಗಣರಾಜ್ಯೋತ್ಸವ ಸಮಾರಂಭದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಮಬಲದ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಗೆಲ್ಲುತ್ತದೆ. ರಾಜ್ಯಾದ್ಯಂತ ಬೇರೆ ಪಕ್ಷದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಮೋದಿ-ಅಮಿತ್ ಶಾ ಬಂದ ಕಡೆಯಲ್ಲೆಲ್ಲಾ ಸರ್ಕಾರ ಬರುತ್ತದೆ. ಸೌತ್ ಇಂಡಿಯಾದ ಗೇಟ್ ಇದು. ನಮ್ಮ ನಾಯಕರು ಯಾರೂ ಸಹ ಬಿಟ್ಟುಕೊಡಲು ಸಾಧ್ಯವಿಲ್ಲ. ನಮ್ಮ ಸರ್ವೆಯಲ್ಲಿ ಕಾಂಗ್ರೆಸ್ 70 ದಾಟಿಲ್ಲ. ಜೆಡಿಎಸ್ 20 ದಾಟಿಲ್ಲ. ಇಬ್ಬರೂ ಸೇರಿ ಒಟ್ಟು 90 ದಾಟಲ್ಲ. ಉಳಿದೆಲ್ಲವೂ ಬಿಜೆಪಿಗೆ ಬರುತ್ತದೆ. ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಷಡ್ಯಂತ್ರ ರೂಪಿಸುವುದಕ್ಕೆ ಆಗುವುದಿಲ್ಲ
ನನ್ನ ಮೇಲೆ ಷಡ್ಯಂತ್ರ ರೂಪಿಸುವುದಕ್ಕೆ ಯಾರಿಗೂ ಧೈರ್ಯ ಇಲ್ಲ. ಅಶೋಕ್ ಯಾವ ಹೊಂದಾಣಿಕೆ ರಾಜಕಾರಣ ಮಾಡುವುದಿಲ್ಲ. ಇದು ನಮ್ಮ ಪಕ್ಷದ ಸಂಸ್ಕೃತಿಯೂ ಅಲ್ಲ. ಉಸ್ತುವಾರಿ ಸಚಿವರಾಗಿ ಮಂಡ್ಯಕ್ಕೆ ಬರುತ್ತಿದ್ದಂತೆ 2 ಸಾವಿರ ಬೈಕ್ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಇದರಿಂದಲೇ ತಿಳಿಯುವುದಿಲ್ಲವೇ, ಮಂಡ್ಯಕ್ಕೆ ಈಗ ಒಂದು ಶಕ್ತಿ ಬಂದಿದೆ. ಪ್ರಬಲವಾಗಿ ಬಂದಾಗ ಈ ರೀತಿಯಾಗಿ ಅಪಪ್ರಚಾರ ಬರುತ್ತದೆ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮ್ಮ ಕಾರ್ಯಕರ್ತರನ್ನು ಜೊತೆಯಾಗಿ ಕರೆದೊಯ್ಯುವ ಕೆಲಸ ಮಾಡುತ್ತೇನೆ. ಈ ಮೂಲಕ ಬಹಳಷ್ಟು ಬದಲಾವಣೆ ತರುತ್ತೇನೆ. ಇದುವರೆಗೂ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ನಾನು ಬಂದಿರುವುದಕ್ಕೆ ಕೆಲವರಿಗೆ ಭಯ ಹುಟ್ಟಿದೆ. ಬೇರೆ ಪಕ್ಷದವರು ಎತ್ತಿಕಟ್ಟುತ್ತಿದ್ದಾರೆ. ನಮ್ಮ ಪಕ್ಷದವರು ಯಾರೂ ಈ ರೀತಿ ಮಾಡುವುದಿಲ್ಲ. ನನ್ನ ಮೇಲೆ ಷಡ್ಯಂತ್ರ ರೂಪಿಸುವ ಧೈರ್ಯ ಯಾರಿಗೂ ಇಲ್ಲ ಎಂದು ಹೇಳಿದರು.
ಇಂಗ್ಲೀಷ್ ಲ್ಯಾಬ್ ಸ್ಥಾಪನೆ
ಜಿಲ್ಲೆಯ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷಾ ಕಲಿಕೆ ಉತ್ತೇಜಿಸಲು "ಸಂಕಲ್ಪ" ಯೋಜನೆಯಡಿಯಲ್ಲಿ ಪ್ರಾಯೋಗಿಕವಾಗಿ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ 12.25 ಲಕ್ಷ ರೂಪಾಯಿ ವೆಚ್ಚದಲ್ಲಿ ಇಂಗ್ಲೀಷ್ ಲ್ಯಾಬ್ನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ತಿಳಿಸಿದರು.
ಇಂಗ್ಲೀಷ್ ಲ್ಯಾಬ್ ಸ್ಥಾಪನೆಯ ಉದ್ದೇಶವೇನು?
ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಸ್ಪರ್ಧೆಗೆ ಅನುಗುಣವಾಗಿ ಕಲಿಕೆ ಅಗತ್ಯವೆಂಬ ಕಾರಣಕ್ಕೆ ಇಂಗ್ಲೀಷ್ ಲ್ಯಾಬ್ನ್ನು ಸ್ಥಾಪಿಸಲಾಗಿದೆ. ಈವರೆಗೆ 34519 ವಿದ್ಯಾರ್ಥಿಗಳಿಗೆ 15.95 ಕೋಟಿ ರೂ.ಪಾಯಿ ಶಿಷ್ಯವೇತನವನ್ನು ನೀಡಲಾಗಿದೆ. ಹಿಂದುಳಿದ ವರ್ಗಗಳ 109 ವಿದ್ಯಾರ್ಥಿನಿಲಯಗಳಲ್ಲಿ ಒಟ್ಟು 8535 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಿ ವಿದ್ಯಾಭ್ಯಾಸಕ್ಕಾಗಿ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.
ಶುಲ್ಕ ವಿನಾಯಿತಿ ಕಾರ್ಯಕ್ರಮದಡಿ 15.93 ಕೋಟಿ ರೂಪಾಯಿ ಅನುದಾನದಲ್ಲಿ ಒಟ್ಟು 22,000 ಫಲಾನುಭವಿಗಳಿಗೆ ಶುಲ್ಕ ವಿನಾಯಿತಿ ಪಾವತಿಸಲಾಗಿದೆ. 2.47ಕೋಟಿ ರೂಪಾಯಿ ವೆಚ್ಚದಲ್ಲಿ 25,750ಫಲಾನುಭವಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರು ಮಾಡಲಾಗಿದೆ. ಹಾಗೆಯೇ ಮೀನುಗಾರರು, ಹಳದಿ ಬೋರ್ಡ್ ಟ್ಯಾಕ್ಸಿ ಚಾಲಕರು, ಭೂರಹಿತ ಕೃಷಿ ಕಾರ್ಮಿಕರು ಹಾಗೂ ನೇಕಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದರು












Click it and Unblock the Notifications