Assembly Elections 2023: ಮಂಡ್ಯ ಜಿಲ್ಲೆಯಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಜೆಡಿಎಸ್
ಮಂಡ್ಯ, ಡಿಸೆಂಬರ್, 19: 2023ರ ವಿಧಾನಸಭಾ ಚುನಾವಣೆ ಇನ್ನೂ ಮೂರ್ನಾಲ್ಕು ತಿಂಗಳು ಇರುವಾಗಲೇ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಚುನಾವಣಾ ಹೋರಾಟಕ್ಕೆ ಚಾಲನೆ ನೀಡಿದೆ.
ಜೆಡಿಎಸ್ ಭದ್ರಕೋಟೆ ಎಂದೇ ಬಿಂಭಿತವಾಗುತ್ತಿರುವ ಮಂಡ್ಯ ಜಿಲ್ಲೆಯ ಏಳೂ ಕ್ಷೇತ್ರಗಳಿಗೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಮುಂಚಿತವಾಗಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಈ ಮೂಲಕ ಉಳಿದೆಲ್ಲಾ ಪಕ್ಷಗಳಿಗಿಂತ ತಾವು ಮುಂದಿದ್ದೇವೆ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದೆ. ನಿರೀಕ್ಷೆಯಂತೆ ಮೇಲುಕೋಟೆ ಕ್ಷೇತ್ರದಿಂದ ಸಿ.ಎಸ್. ಪುಟ್ಟರಾಜು, ಮದ್ದೂರು ಕ್ಷೇತ್ರದಿಂದ ಡಿ.ಸಿ. ತಮ್ಮಣ್ಣ, ಮಳವಳ್ಳಿ ಕ್ಷೇತ್ರದಿಂದ ಡಾ.ಕೆ. ಅನ್ನದಾನಿ, ನಾಗಮಂಗಲ ಕ್ಷೇತ್ರದಿಂದ ಸುರೇಶ್ಗೌಡ ಅವರ ಹೆಸರನ್ನು ಘೋಷಿಸಲಾಗಿದೆ.
ರಾಜಕೀಯ ಸ್ಥಾನಮಾನ ಕೊಟ್ಟ ಮಂಡ್ಯ ಜನತೆಗೆ ನಾನು ಋಣಿ- ಎಸ್.ಎಂ.ಕೃಷ್ಣ
ಕಳೆದ ಉಪ ಚುನಾವಣೆಯಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದ ಕೆ.ಆರ್. ಪೇಟೆ ಕ್ಷೇತ್ರದಿಂದ ಮೈಸೂರು ಲ್ಯಾಪ್ಸ್ ಮಾಜಿ ಅಧ್ಯಕ್ಷ ಬಿ.ಎಲ್. ದೇವರಾಜು ಅಥವಾ ದೇವೇಗೌಡರ ಕುಟುಂಬದ ಶ್ರವಣಬೆಳಗೊಳ ಶಾಸಕ ಎಚ್.ಡಿ. ಬಾಲಕೃಷ್ಣೇಗೌಡ ಕಣಕ್ಕಿಳಿಯುತ್ತಾರೆಂಬ ವದಂತಿಗಳಿದ್ದವು. ಆದರೆ, ಅಂತಿಮವಾಗಿ ದೇವೇಗೌಡರ ಕುಟುಂಬದ ನಿಷ್ಠಾವಂತ ಮುಖಂಡ ಮನ್ಮುಲ್ ನಿರ್ದೇಶಕ ಎಚ್.ಟಿ. ಮಂಜುನಾಥ್ ಅವರ ಹೆಸರನ್ನು ಪ್ರಕಟಿಸಿದೆ. ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಅತ್ಯಂತ ಕುತೂಹಲಕ್ಕೆ ಮತ್ತು ತೀವ್ರವಾದ ಟಿಕೆಟ್ ಪೈಪೋಟಿಗೆ ಕಾರಣವಾಗಿದ್ದ ಮಂಡ್ಯ ಕ್ಷೇತ್ರದ ಸುತ್ತ ಹಲವು ರಾಜಕೀಯ ವದಂತಿಗಳು ವ್ಯಕ್ತವಾಗುತ್ತಿದ್ದವು.
ಹಾಲಿ ಶಾಸಕರ ಹೆಸರು ಘೋಷಿಸಿದ ಜೆಡಿಎಸ್
ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಹಲವು ಹೊಸ ಮುಖಗಳು ಪ್ರಯತ್ನ ನಡೆಸುತ್ತಿದ್ದರೂ, ಅಂತಿಮವಾಗಿ ಹಾಲಿ ಶಾಸಕ ಎಂ. ಶ್ರೀನಿವಾಸ್ ಅವರ ಹೆಸರನ್ನು ಘೋಷಿಸಿ ಅಚ್ಚರಿ ಹುಟ್ಟುಹಾಕಿದೆ. ಕಳೆದ ಒಂದು ವರ್ಷದಿಂದಲೂ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು, ಪಿಇಟಿ ಅಧ್ಯಕ್ಷ ವಿಜಯಾನಂದ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್.ಎನ್. ಯೋಗೇಶ್, ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಅವರು ತೀವ್ರ ಕಸರತ್ತು ನಡೆಸುತ್ತಿದ್ದರು.
ಮಂಡ್ಯ ಕ್ಷೇತ್ರದ ಅಭ್ಯರ್ಥಿಯ ಘೋಷಣೆ
ಮುಂಬರುವ ವಿಧಾನಸಭಾ ಚುನಾವಣೆಗೆ ಹೊಸ ಮುಖಗಳಿಗೆ ಆಧ್ಯತೆ ನೀಡುವ ಮಾತುಗಳು ಜೋರಾಗಿ ಕೇಳಿಬರುತ್ತಿದ್ದವು. ಶಾಸಕ ಎಂ. ಶ್ರೀನಿವಾಸ್ ಅವರ ವಯಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ ಹೊಸಬರಿಗೆ ಅವಕಾಶ ಸಿಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಜೆಡಿಎಸ್ ವರಿಷ್ಠರು ಬಹುತೇಕ ಹಾಲಿ ಶಾಸಕರಿಗೆಲ್ಲರಿಗೂ ಅಧಿಕೃತವಾಗಿಯೇ ಟಿಕೆಟ್ ಘೋಷಿಸಿರುವುದರಿಂದ ಸಹಜವಾಗಿ ಎಂ. ಶ್ರೀನಿವಾಸ್ ಅವರನ್ನು ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಾಧಾಕೃಷ್ಣ ಕಾಂಗ್ರೆಸ್ಗೆ ಸೇರ್ಪಡೆಗೆ ಕಾರಣ ಏನು?
ಈ ಹಿಂದೆ ಜೆಡಿಎಸ್ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕೀಲಾರ ಕೆ.ಕೆ. ರಾಧಾಕೃಷ್ಣ ಇತ್ತೀಚೆಗೆ ಜೆಡಿಎಸ್ನಲ್ಲಿ ಟಿಕೆಟ್ ಸಿಗುವುದಿಲ್ಲವೆಂಬುದು ಖಾತ್ರಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಕಳೆದ ಒಂದು ವರ್ಷದಿಂದಲೂ ಹೆಚ್ಚು ಚರ್ಚೆಯಾಗುತ್ತಿದ್ದ ಮಂಡ್ಯ ಕ್ಷೇತ್ರ ಟಿಕೆಟ್ ವಿಚಾರದಲ್ಲಿ ಹೆಚ್ಚು ಕುತೂಹಲವನ್ನು ಮೂಡಿಸಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಥವಾ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ಬರುತ್ತಾರೆಂಬ ವದಂತಿಗಳು ಕೇಳಿಬಂದಿದ್ದವು.
ಸಾರ್ವಜನಿಕವಾಗಿ ನಡೆಯುತ್ತಿರುವ ಚರ್ಚೆ
ಈ ಎಲ್ಲ ಬೆಳವಣಿಗೆಗಳ ನಡುವೆ ಶಾಸಕ ಎಂ. ಶ್ರೀನಿವಾಸ್ ಅವರಿಗೆ ಜೆಡಿಎಸ್ ವರಿಷ್ಠರು ಟಿಕೆಟ್ ನೀಡುತ್ತಾರೆ. ಶಾಸಕರು ಆಕಾಂಕ್ಷಿತರಾದ ಬಿ.ಆರ್. ರಾಮಚಂದ್ರು, ಎಚ್.ಎನ್. ಯೋಗೇಶ್, ವಿಜಯಾನಂದ ಈ ಮೂವರನ್ನೂ ಕುಳ್ಳಿರಿಸಿ ಚರ್ಚೆ ನಡೆಸಿ ಪರಸ್ಪರ ಸಮನ್ವಯತೆ ನಡೆಸಿ ಅಂತಿಮವಾಗಿ ಯಾರಾದರೊಬ್ಬರಿಗೆ ಟಿಕೆಟ್ ನೀಡುತ್ತಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ದಾಖಲೆ ಸೃಷ್ಠಿಸಿದ್ದ ಜೆಡಿಎಸ್ ಈ ಬಾರಿ 100 ದಿನಗಳಿಗೂ ಮುಂಚಿತವಾಗಿ ಟಿಕೆಟ್ ಘೋಷಿಸಿದೆ. ಅಭ್ಯರ್ಥಿಗಳ ಆಯ್ಕೆ ಅಧಿಕೃತವಾಗಿದ್ದರೂ, ಇದೇ ಅಂತಿಮವೇ ಎಂಬುದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ.