ಮುತ್ತತ್ತಿಗೆ ಜನ್ಮದಿನ ಆಚರಣೆಗೆ ಬಂದ ಯುವಕನ ಜೀವನವೇ ಮುಗಿದುಹೋಯಿತು
ಮಂಡ್ಯ, ಮೇ 27: ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಲು ಮಳವಳ್ಳಿ ತಾಲೂಕಿನ ಮುತ್ತತ್ತಿಗೆ ಹೋದ ಯುವಕನೊಬ್ಬ ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಕನಕಪುರ ತಾಲೂಕಿನ ಸಂತೆಕೋಡಹಳ್ಳಿ ಸಮೀಪದ ಅರಕೆರೆ ಗ್ರಾಮದ ನಿವಾಸಿ ಮಹೇಶ್ (23) ಹುಟ್ಟುಹಬ್ಬದ ದಿನವೇ ಸಾವನ್ನಪ್ಪಿದ ದುರ್ದೈವಿ.
ಈತ ತನ್ನ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ನದಿಗೆ ಬದಿಗೆ ಬಂದು ಹೆಣವಾಗಿ ಮರಳಿದ್ದಾನೆ. ಬೆಂಗಳೂರಿನ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಈತ ತನ್ನ 12 ಮಂದಿ ಸ್ನೇಹಿತರೊಡನೆ ಆರು ಬೈಕ್ ಗಳಲ್ಲಿ ಶುಕ್ರವಾರ ಮುತ್ತತ್ತಿಗೆ ಬಂದಿದ್ದರು.[ಮಂಡ್ಯ: ಸಾಲದ ನೋಟೀಸ್ ಕೈಯ್ಯಲ್ಲಿಡಿದುಕೊಂಡೇ ಜೀವತೆತ್ತ ಅನ್ನದಾತ]

ಸಂಜೆ 4 ಗಂಟೆ ವೇಳೆಯಲ್ಲಿ ಮೋಜು ಮಸ್ತಿಯ ಬಳಿಕ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜಲು ಮುಂದಾಗಿದ್ದಾರೆ. ಎಲ್ಲರೂ ಸೇರಿ ನದಿ ನೀರಿನಲ್ಲಿ ಆಟವಾಡಿದ್ದಾರೆ. ಈ ವೇಳೆ ಈಜುತ್ತಾ ಹೋದ ಮಹೇಶ ನೀರಿನಲ್ಲಿ ಆಳ ಗೊತ್ತಾಗದೆ ಹೋಗಿ ಸುಳಿಗೆ ಸಿಕ್ಕಿದ್ದಾನೆ.
ಏನಾಗುತ್ತಿದೆ ಎಂಬುದು ಗೊತ್ತಾಗುವ ವೇಳೆಗೆ ಆತ ನೀರಿನಲ್ಲಿ ಮುಳುಗಿಯಾಗಿತ್ತು. ಇದನ್ನು ನೋಡುತ್ತಿದ್ದ ಸಹಪಾಠಿಗಳಿಗೆ ಆತನನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.[ತಾಕತ್ತಿದ್ದರೆ ಬಿಎಸ್ ವೈ ಚರ್ಚೆಗೆ ಬರಲಿ ಎಂದು ತೊಡೆ ತಟ್ಟಿದ ಎಚ್ ಡಿಕೆ]
ಆ ನಂತರ ಸ್ನೇಹಿತರು ರಾತ್ರಿ ಸಮೀಪದ ಹಲಗೂರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಶ್ರೀಧರ್ ಹಾಗೂ ಸಿಬ್ಬಂದಿ ಶನಿವಾರ ಬೆಳಗ್ಗೆ ಸ್ಥಳಕ್ಕೆ ಧಾವಿಸಿ ಮಹೇಶನ ಶವಕ್ಕಾಗಿ ಶೋಧ ನಡೆಸಿದ್ದು, ಕೊನೆಗೂ ನೀರಿನಲ್ಲಿ ಕೊಚ್ಚಿ ಹೋಗಿದ್ದ ಶವ ದೊರೆತಿದೆ.
ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ವಾರಸುದಾರರಿಗೆ ನೀಡಲಾಗಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications