ಮಂಡ್ಯ: ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣದ ಆರೋಪಿ ಸುಳಿವು ಕೊಟ್ಟ 13 ಸೆಕೆಂಡ್ಗಳ ವಿಡಿಯೋ
ಮಂಡ್ಯ: ಮೇಲುಕೋಟೆ ಶ್ರೀ ಯೋಗಾನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದ್ದ ಶಿಕ್ಷಕಿ ದೀಪಿಕಾ ಕೊಲೆಯ ಸುಳಿವನ್ನು ಪ್ರವಾಸಿಗರು ಸೆರೆಹಿಡಿದ 13 ಸೆಕೆಂಡ್ಗಳ ವೀಡಿಯೋ ನೀಡಿದೆ. ದೀಪಿಕಾಗೆ ಮನಸೋ ಇಚ್ಛೆ ಥಳಿಸುತ್ತಿರುವ ವೀಡಿಯೋ ಆರೋಪಿಯನ್ನು ಗುರುತಿಸಲು ಸಹಾಯ ಮಾಡಿದೆ.
ಪಾಂಡವಪುರ ತಾಲೂಕು ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾ ಹತ್ಯೆಯಾದ ಶಿಕ್ಷಕಿ. ಪೊಲೀಸರಿಗೆ ಸಿಕ್ಕಿರುವ ವೀಡಿಯೋದಲ್ಲಿರುವುದು ಅದೇ ಗ್ರಾಮದ ಯುವಕ ನಿತೀಶ್ ಎಂದು ಗುರುತಿಸಲಾಗಿದೆ. ಆತನೇ ದೀಪಿಕಾಳನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೇಲುಕೋಟೆಯ ಎಸ್ಇಟಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ದೀಪಿಕಾ ನಿತ್ಯವೂ ತಮ್ಮ ಸ್ಕೂಟರ್ನಲ್ಲೇ ಬಂದು ಹೋಗುತ್ತಿದ್ದರು. ಜ.20ರಂದು ದೀಪಿಕಾ ಎಂದಿನಂತೆ ಶಾಲೆಗೆ ಸ್ಕೂಟರ್ನಲ್ಲಿ ಆಗಮಿಸಿದ್ದರು. ಶಾಲೆಯ ಕರ್ತವ್ಯ ಮುಗಿಸಿ ಮಧ್ಯಾಹ್ನ 12 ಗಂಟೆಗೆ ಯಾರದೋ ಫೋನ್ ಕಾಲ್ ಬಂದಿದ್ದರಿಂದ ಆಕೆ ಶಾಲೆಯಿಂದ ನಿರ್ಗಮಿಸಿದ್ದರು. ಆನಂತರದಲ್ಲಿ ಅವರು ನಾಪತ್ತೆಯಾಗಿದ್ದರು ಎಂದು ವರದಿಯಾಗಿದೆ.
ವಿಡಿಯೋ ಮಾಡಿದ್ದ ಪ್ರವಾಸಿಗರು
ದೀಪಿಕಾ ನಾಪತ್ತೆಯಾಗಿರುವ ಬಗ್ಗೆ ಜ.20ರಂದೇ ಕುಟುಂಬದವರು ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದೇ ಪ್ರವಾಸಿಗರು ಬೆಟ್ಟದ ಮೇಲಿನಿಂದ ಯುವಕ-ಯುವತಿ ಹೊಡೆದಾಡುವ ವೀಡಿಯೋವನ್ನು ಸೆರೆಹಿಡಿದಿದ್ದರು. ಅದನ್ನು ಪೊಲೀಸರಿಗೂ ನೀಡಿದ್ದರು. ಅದರ ಜಾಡು ಹಿಡಿದು ಹೋದವರಿಗೆ ಸಿಕ್ಕಿದ್ದು ದೀಪಿಕಾರ ಸ್ಕೂಟರ್ ಮಾತ್ರ. ಸ್ಕೂಟರ್ ಸಿಕ್ಕಿದ ನಂತರವೂ ಪೊಲೀಸರು ದೀಪಿಕಾ ಪತ್ತೆಗೆ ನಿರ್ಲಕ್ಷ್ಯ ತೋರಿದ್ದರು ಎನ್ನುವ ಆರೋಪ ಕೂಡ ಕೇಳಿ ಬಂದಿದೆ.
ಸೋಮವಾರದಂದು ದೀಪಿಕಾ ಶವ ಕುಟುಂಬದವರಿಗೆ ಸಿಕ್ಕಿತು. ಅವರನ್ನು ಕೊಲೆ ಮಾಡಿ ಹೂತುಹಾಕಲಾಗಿತ್ತು. ಇನ್ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದ ದೀಪಿಕಾ ಮತ್ತು ಯುವಕನ ನಡುವೆ ವಿರಸ ಉಂಟಾಗಿದ್ದು ಹೊಡೆದಾಟಕ್ಕೆ ಕಾರಣವೇನು, ಕೊಲೆ ಹೇಗೆ ನಡೆಯಿತು ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ.
ಕೊಲೆ ಆರೋಪಿ ಎನ್ನಲಾಗುತ್ತಿರುವ ನಿತೀಶ್ ದೀಪಿಕಾ ಗ್ರಾಮದವನೇ ಆಗಿದ್ದ ಎನ್ನಲಾಗಿದೆ. ದೀಪಿಕಾಗೂ ಆತನ ಪರಿಷಯ ಇದ್ದು, ಅಕ್ಕಾ ಎಂದು ಕರೆಯುತ್ತಿದ್ದ ಎನ್ನಲಾಗಿದೆ.
ಪ್ರವಾಸಿಗರು ಸೆರೆಹಿಡಿದಿರುವ ವಿಡಿಯೋದಲ್ಲಿ ಯುವಕ-ಯುವತಿ ಹೊಡೆದಾಡುತ್ತಿರುವುದು. ಆ ದೃಶ್ಯಗಳಲ್ಲಿರುವುದು ನಿತೀಶ್ ಮತ್ತು ದೀಪಿಕಾ ಎಂದು ಪತ್ತೆಹಚ್ಚಲಾಗಿದೆ. ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಜಗಳ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದೀಪಿಕಾರನ್ನು ನಿತೀಶ್ ಕೊಲೆ ಮಾಡಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ದೀಪಿಕಾ ಶವ ಸಿಗುತ್ತಿದ್ದಂತೆ ಶಂಕಿತ ಆರೋಪಿ ನಿತೀಶ್ ತಲೆಮರೆಸಿಕೊಂಡಿದ್ದಾನೆ. ಸೋಮವಾರ ಸಂಜೆಯವರೆಗೂ ಊರಿನಲ್ಲೇ ಓಡಾಡಿಕೊಂಡಿದ್ದನು. ಶವ ಪತ್ತೆಯಾದ ನಂತರ ನನ್ನನ್ನು ಹುಡುಕಬೇಡಿ, ನಾನು ತಪ್ಪು ಮಾಡಿದ್ದೇನೆ. ಅಕ್ಕನಿಗೆ ಮದುವೆ ಮಾಡಿ ಎಂದು ಸಂದೇಶ ಕಳುಹಿಸಿ ಪರಾರಿಯಾಗಿದ್ದಾನೆ. ನಿತೀಶ್ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶಂಕಿತ ಆರೋಪಿ ನಿತೀಶ್ಗಾಗಿ ಶೋಧ ನಡೆಸುತ್ತಿದ್ದಾರೆ.












Click it and Unblock the Notifications