Wedding Cancel: ಸಿಹಿ ತಿಂಡಿಗಾಗಿ ಮಾರಾಮಾರಿ: ಕೊಡಗಿನಲ್ಲಿ ಕೊನೆ ಕ್ಷಣದಲ್ಲಿ ಮುರಿದು ಬಿದ್ದ ಮದುವೆ
ಕೊಡಗು ಮೇ 06: ಕೊನೆಯ ಕ್ಷಣದಲ್ಲಿ ಮದುವೆ ಮುರಿದು ಬೀಳುವ ಅನೇಕ ಘಟನೆಗಳು ನಡೆಯುತ್ತಿರುತ್ತದೆ. ಸಾಮಾನ್ಯವಾಗಿ ಕೊನೆಯ ಕ್ಷಣದಲ್ಲಿ ಮದುವೆ ರದ್ದುಗೊಳ್ಳಲು ವರ ಅಥವಾ ವಧುವಿನ ಖಾಸಗಿ ಜೀವನ ಕಾರಣವಾಗಿರುತ್ತದೆ. ಆದರೆ ಕೊಡಗಿನಲ್ಲಿ ಕೇವಲ ಒಂದು ಸಿಹಿ ತಿಂಡಿಗಾಗಿ ಆರಂಭವಾದ ಜಗಳ ಮದುವೆ ರದ್ದುಗೊಳಿಸುವಲ್ಲಿ ಕೊನೆಯಾಗಿದೆ.
ಸೋಮವಾರಪೇಟೆಯ ಹಾನಗಲ್ ಗ್ರಾಮದ ಯುವತಿಯ ವಿವಾಹವು ತುಮಕೂರಿನ ಯುವಕನೊಂದಿಗೆ ಮೇ 05 ಭಾನುವಾರ ನಿಶ್ಚಯವಾಗಿತ್ತು. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ, ಮ್ಯಾಟ್ರಿಮೋನಿಯಲ್ಲಿ ಹುಡುಗಿಯ ಪರಿಚಯವಾಗಿ ಇಬ್ಬರು ಮದುವೆಗೆ ಒಪ್ಪಿದ್ದರು.

ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್ ಹಾಲ್ನಲ್ಲಿ ಎಲ್ಲಾ ತಯಾರಿಗಳು ನಡೆದಿದ್ದವು. ಶನಿವಾರ ಮೇ 04ರ ರಾತ್ರಿ ಮೆಹಂದಿ ಕಾರ್ಯಕ್ರಮದ ಜೊತೆಗೆ ನಿಶ್ಚಿತಾರ್ಥ ಆಯೋಜಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ವರನ ಕುಟುಂಬಸ್ಥರು ಸಂಜೆ 4 ಗಂಟೆ ಹೊತ್ತಿಗೆ ಮಂಟಪಕ್ಕೆ ಆಗಮಿಸಿದ್ದಾರೆ. ಆದರೆ ವಧುವಿನ ಕುಟುಂಬಸ್ಥರು ತಡವಾಗಿ ಮಂಟಪಕ್ಕೆ ಬಂದಿದ್ದಾರೆ. ಇದರಿಂದ ವರನ ಕುಟುಂಬಸ್ಥರು ಕೋಪಗೊಂಡಿದ್ದರು. ಬಳಿಕ ಶಾಸ್ತ್ರಗಳು ನಡೆದಿದ್ದು, ನಿಶ್ಚಿತಾರ್ಥ ಸಮಯದಲ್ಲಿ ವರನ ಸ್ನೇಹಿತರಿಗೆ ಸಿಹಿ ತಿಂಡಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಜಗಳ ಆರಂಭವಾಗಿದೆ.
ಈ ಕಾರಣದಿಂದ ವರ ಹಾಗೂ ವಧುವಿನ ಕುಟಂಬಸ್ಥರ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳ ತಾರಕ್ಕೇರಿದಾಗ ಹುಡುಗನ ಕುಟುಂಬಸ್ಥರು, ಇಂತಹ ಕುಟುಂಬದಿಂದ ನಮ್ಮ ಮನೆಗೆ ಹುಡುಗಿ ತರುವುದು ಬೇಡ ಎಂದು ಮದುವೆಯನ್ನು ರದ್ದುಗೊಳಿಸಿದ್ದಾರೆ. ಈ ಜಗಳ ಕೊನೆಗೆ ಪೊಲೀಸ್ ಠಾಣೆಯ ಮೇಟ್ಟಿಲೇರಿದೆ.
ಈ ರೀತಿ ಒಂದು ಸಿಹಿಗಾಗಿ ಮದುವೆ ರದ್ದು ಮಾಡಿದರೆ ಹುಡುಗಿಯ ಭವಿಷ್ಯವೇನು? ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಈ ನಷ್ಟ ವರನ ಕುಟುಂಬದವರು ತುಂಬಿಕೊಡುವಂತೆ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ವರನ ಕುಟುಂಬಸ್ಥರ ವಿರುದ್ಧ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಆರೋಪ ಕೂಡ ಕೇಳಿಬಂದಿದೆ.












Click it and Unblock the Notifications