ಒಂದು ಕಾಲ್ ನಿಂದ ಬೆಳ್ಳಂಬೆಳಿಗ್ಗೆ 1.2 ಲಕ್ಷ ಕಳೆದುಕೊಂಡ ವಿರಾಜಪೇಟೆ ಮಹಿಳೆ
ಮಡಿಕೇರಿ, ಮಾರ್ಚ್ 18: ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಅನಾಮಿಕರೊಂದಿಗೆ ಹಂಚಿಕೊಂಡು ಹಣ ಕಳೆದುಕೊಳ್ಳಬೇಡಿ ಎಂದು ಅದೆಷ್ಟು ಜನಜಾಗೃತಿ ಮೂಡಿಸಿದರೂ ಇನ್ನೂ ವಂಚನೆ ಆಗುವುದು ನಿಂತಿಲ್ಲ, ಅದಕ್ಕೆ ಆಸ್ಪದ ಕೊಡುವವರೂ ಕಡಿಮೆಯಾಗಿಲ್ಲ.
ಕೊಡಗಿನ ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದಲ್ಲೂ ಇಂಥದ್ದೇ ಮತ್ತೊಂದು ಪ್ರಕರಣ ನಡೆಸಿದೆ. ಸರಿತಾ ಎಂಬ ಮಹಿಳೆ ಇಂದು ಬರೋಬ್ಬರಿ 1,22,870 ರೂಪಾಯಿ ಕಳೆದುಕೊಂಡು ಅತಂತ್ರರಾಗಿ ಕುಳಿತಿದ್ದಾರೆ.
ಬೆಳಿಗ್ಗೆ ಇವರ ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ತನ್ನನ್ನು ವಿಜಯಾ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ಸರಿತಾ ಅವರ ಆಧಾರ್, ಪಾನ್ ಕಾರ್ಡ್ ಮಾಹಿತಿ ಕೇಳಿ ಪಡೆದುಕೊಂಡಿದ್ದಾನೆ. ಈ ಮಾಹಿತಿಯನ್ನು ಬ್ಯಾಂಕ್ ಗೆ ಸಲ್ಲಿಸಬೇಕಾಗಿದ್ದು, ತಮ್ಮ ಮೊಬೈಲ್ ಗೆ ಈಗ ಒಂದು ಮೆಸೇಜ್ ಬರಲಿದೆ, ಆ ಮೆಸೇಜ್ ಓದಿ ಹೇಳಿ ಎಂದು ಸೂಚಿಸಿದ್ದಾನೆ.

ಅದರಂತೆ ಸರಿತಾ ಅವರು ತಮ್ಮ ಮೊಬೈಲ್ ಗೆ ಬಂದ ಮೆಸೇಜ್ ಅನ್ನು ಅನಾಮಿಕನಿಗೆ ಓದಿ ಹೇಳಿದ್ದಾರೆ. ಇದಾಗಿ ಕೇವಲ ಅರ್ಧ ಗಂಟೆಯಲ್ಲಿ ಇವರ ಮೊಬೈಲ್ ಗೆ ಮತ್ತೊಂದು ಮೆಸೇಜ್ ಬಂದಿದ್ದು, ಅದರಲ್ಲಿ ಇವರ ಖಾತೆಯಿಂದ ರೂ. 1,22,870 ಡ್ರಾ ಆಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಸ್ಥಳೀಯ ಬ್ಯಾಂಕ್ ಗೆ ತೆರಳಿ ಪರಿಶೀಲಿಸಿದಾಗ ಇವರ ಖಾತೆಯಿಂದ ಆನ್ಲೈನ್ ಮೂಲಕ ಅಷ್ಟೂ ಹಣವನ್ನು ಎಗರಿಸಿರುವುದು ಬೆಳಕಿಗೆ ಬಂದಿದೆ.
ಸರಿತಾ ಅವರು ವಿರಾಜಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಸೈಬರ್ ಕ್ರೈಂ ಬ್ರಾಂಚ್ ಗೆ ಪ್ರಕರಣ ವರ್ಗಾವಣೆಯಾಗಿದೆ.












Click it and Unblock the Notifications