ಸಚಿವ ಸಾ.ರಾ.ಮಹೇಶ್ ಹೆಸರಿನಲ್ಲಿ ವಂಚಿಸಿದ ಆರೋಪಿಗಳು ಅರೆಸ್ಟ್!
ಮಡಿಕೇರಿ, ಫೆಬ್ರವರಿ 24:ಕಳೆದ ನವೆಂಬರ್ ನಲ್ಲಿ ಬೆಂಗಳೂರಿನ ವ್ಯಕ್ತಿಗೆ ಕೊಡಗಿನಲ್ಲಿ ಜಾಗ ನೀಡುವುದಾಗಿ ನಂಬಿಸಿ ಹಣ ಪಡೆದಿದ್ದಲ್ಲದೆ, ತಮ್ಮ ಮೋಸದ ಜಾಲಕ್ಕೆ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರ ಹೆಸರನ್ನು ಬಳಸಿಕೊಂಡಿದ್ದ ಇಬ್ಬರು ವಂಚಕರನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬ್ಯಾಡರಪೇಟೆಯ ಸಯ್ಯದ್ ಮುಬಾರಕ್(28) ಮತ್ತು ಸಯ್ಯದ್ ಖಲೀಲ್(28) ಬಂಧಿತ ವಂಚಕರಾಗಿದ್ದಾರೆ. ಹೊಟ್ಟೆಪಾಡಿಗಾಗಿ ಮುಬಾರಕ್ ನೇಯ್ಗೆ ಕೆಲಸ ಮಾಡುತ್ತಿದ್ದರೆ, ಖಲೀಲ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದನು.
ತಮ್ಮ ಕೆಲಸದಿಂದ ಹೊಟ್ಟೆಪಾಡು ಕಳೆಯುತ್ತಿದ್ದರೂ ಹಣ ಮಾಡುವ ಉದ್ದೇಶದಿಂದ ಇವರು ಮೋಸ ಮಾಡಲು ಮುಂದಾಗಿದ್ದರು. ಅದರಂತೆ 2018ನವೆಂಬರ್ 3 ರಂದು ಬೆಂಗಳೂರಿನ ಬನಶಂಕರಿಯ ನಿವಾಸಿ ಶಿವಲಿಂಗಯ್ಯ ಎಂಬುವರ ಪರಿಚಯ ಮಾಡಿಕೊಂಡು ಕೊಡಗಿನಲ್ಲಿ ಜಾಗಕೊಡಿಸುವುದಾಗಿ ನಂಬಿಸಿದ್ದರಲ್ಲದೆ, ಕೊಡಗಿನಲ್ಲಿ ಎಲ್ಲರು ಚೆನ್ನಾಗಿ ಪರಿಚಯವಿದ್ದು, ಕುಶಾಲನಗರದ ಕೂಡ್ಲೂರುನಲ್ಲಿ ಸರ್ವೆ ನಂ 60/2 ರಲ್ಲಿ 6ಎಕರೆ 90 ಸೆಂಟ್ ಜಾಗವಿದ್ದು ಅದನ್ನು ಕಡಿಮೆ ದರದಲ್ಲಿ ಕೊಡಿಸುವುದಾಗಿ ನಂಬಿಸಿದ್ದರು.
ಜತೆಗೆ ನನಗೆ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರ ಪರಿಚಯವಿದ್ದು, ಅವರ ಕಡೆಯಿಂದ ಕಡಿಮೆ ದರದಲ್ಲಿ ಜಾಗವನ್ನು ಕೊಡಿಸುವುದಾಗಿ ಹೇಳಿದ್ದರು. ವಂಚಕರ ಮಾತನ್ನು ನಿಜ ಎಂಬಂತೆ ನಂಬಿದ ಶಿವಲಿಂಗಯ್ಯ ಅವರು ಹಿಂದೆ ಮುಂದೆ ಯೋಚಿಸದೆ ವಂಚಕರೊಂದಿಗೆ ಕೊಡಗಿಗೆ ಬಂದಿದ್ದರು. ಮುಂದೇನಾಯ್ತು ಈ ಲೇಖನ ಓದಿ....

ಹೇಳಿ ಹೋದವರು ಮರಳಿ ಬಂದಿರಲಿಲ್ಲ
ವಂಚಕರು ನೇರವಾಗಿ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಗೆ ಕರೆತಂದು ಜಾಗದ ಕಡತ ಮಾಡಿಕೊಡುವುದಾಗಿ ನಂಬಿಸಿದರಲ್ಲದೆ, ಶಿವಲಿಂಗಯ್ಯ ಅವರ ಎದುರಿನಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರಿಗೆ ಕರೆ ಮಾಡಿದಂತೆ ನಾಟಕವಾಡಿದ್ದರು. ಬಳಿಕ 1,01 ಲಕ್ಷ ರೂಪಾಯಿ ಪಡೆದು ಇಲ್ಲಿಯೇ ಕುಳಿತುಕೊಂಡು ಕಾಯುತ್ತಿರಿ. ಖರೀದಿಗೆ ಬೇಕಾದ ಅಗತ್ಯ ದಾಖಲಾತಿಗಳ ವ್ಯವಸ್ಥೆಯನ್ನು ಮಾಡಿಕೊಂಡು ಬರುವುದಾಗಿ ಹೇಳಿ ಹೋದವರು ಮರಳಿ ಬಂದಿರಲಿಲ್ಲ. ಕಾದು ಸುಸ್ತಾದ ಶಿವಲಿಂಗಯ್ಯ ಅವರಿಗೆ ತಾನು ಮೋಸ ಹೋಗಿದ್ದು ಗೊತ್ತಾಗಿತ್ತು. ಹೀಗಾಗಿ ಅವರು ಕಳೆದ ನವೆಂಬರ್3 ರಂದು ಮಡಿಕೇರಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

ತಂಡವನ್ನು ರಚಿಸಿ ತನಿಖೆಗೆ ಆದೇಶ
ದೂರು ಸ್ವೀಕರಿಸಿ ನಗರ ಠಾಣೆ ಪೊಲೀಸರು ಮೊ.ಸಂ.174/2018 ಕಲಂ: 418, 419, 420 ರೆ / ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಡಾ. ಸುಮನ್ ಅವರು ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಎಸ್. ಸುಂದರ್ರಾಜ್ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ಪಿ. ಅನೂಪ್ ಮಾದಪ್ಪ ನೇತೃತ್ವದಲ್ಲಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕ ಷಣ್ಮುಗಂ ಹಾಗೂ ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಮಧುಸೂದನ್, ಮನೋಜ್ ಕೆ.ಬಿ. ಮತ್ತು ನಾಗರಾಜ್ ಎಸ್. ಕಡಗಣ್ಣವರ್ ಒಳಗೊಂಡ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿದ್ದರು.

ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ಇತ್ತ ವಂಚಕರು ಹಣ ಪಡೆದ ಬಳಿಕ ತಲೆಮರೆಸಿಕೊಂಡು ತಮಿಳುನಾಡುವಿನ ನೀಲಗಿರಿ ಜಿಲ್ಲೆಯ ಊಟಿಯಲ್ಲಿ ತಂಗಿದ್ದರು. ಆದರೆ ಅವರ ಕುರಿತು ಜಿಲ್ಲಾ ಪೊಲೀಸ್ ಸಿ.ಡಿ.ಆರ್. ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಕೆ. ರಾಜೇಶ್ ಮತ್ತು ಎಂ.ಎ. ಗಿರೀಶ್ ಅವರು ದೂರವಾಣಿ ಕರೆಯ ಮಾಹಿತಿಯನ್ನು ನೀಡಿದ್ದು ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ತನಿಖಾ ತಂಡವನ್ನು ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೋಸ ಹೋದವರು ಮಾಹಿತಿ ನೀಡಿ
ಆರೋಪಿಗಳಾದ ಸಯ್ಯದ್ ಮುಬಾರಕ್ ಮತ್ತು ಸಯ್ಯದ್ ಖಲೀಲ್ ಮಹಾನ್ ವಂಚಕರಾಗಿದ್ದು, ಜನರಿಗೆ ವಂಚಿಸಿ ಹಣ ಪಡೆಯುವುದನ್ನೇ ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಇವರ ಮೇಲೆ ಬೆಂಗಳೂರು ಕೆ.ಆರ್. ಪುರಂ, ಕೆಂಗೇರಿ, ಕೋರಮಂಗಲ, ಮಡಿವಾಳ, ಜಯನಗರ, ಜಿಗಣಿ, ಮಾಲೂರು ಪೊಲೀಸ್ ಠಾಣೆಗಳಲ್ಲಿ 10 ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಒಂದು ವೇಳೆ ಈ ವಂಚಕರಿಂದ ಯಾರಾದೂ ಮೋಸ ಹೋಗಿದ್ದರೆ ಅಂಥವರು ಹತ್ತಿರದ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂ ನಂ. 08272-228330ಕ್ಕೆ ಮಾಹಿತಿಯನ್ನು ನೀಡಬಹುದಾಗಿದೆ ಎಂದು ಎಸ್ಪಿ ಡಾ.ಸುಮನ್ ತಿಳಿಸಿದ್ದಾರೆ.












Click it and Unblock the Notifications